ನವೀನ್ ಮೃತದೇಹ ವಾಪಸ್: ಪ್ರಧಾನಿಗೆ ಕರೆ ಮಾಡಿ ಕೃತಜ್ಞತೆ ತಿಳಿಸಿದ ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾ.21: ನವೀನ್ ಗ್ಯಾನಗೌಡರ್ ಮೃತದೇಹ ತಾಯ್ನಾಡಿಗೆ ಆಗಮನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಕೃತಜ್ಞತೆ ತಿಳಿಸಿದ್ದಾರೆ.
ನವೀನ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ರಾಣೆಬೆನ್ನೂರು ತಾಲ್ಲೂಕಿನ ಚಳಗೆರೆಯಿಂದ ಬೆಂಗಳೂರಿಗೆ ವಾಪಸಾದ ಬಳಿಕ ದೂರವಾಣಿ ಕರೆ ಮಾಡಿದ ಬೊಮ್ಮಾಯಿ ಅವರು ಸುಮಾರು ಮೂರು ನಿಮಿಷ ಮಾತುಕತೆ ನಡೆಸಿದ್ದಾರೆ.
'ನವೀನ್ ಮೃತದೇಹವನ್ನು ದೇಶಕ್ಕೆ ತರಿಸುವಲ್ಲಿ ತಮ್ಮ ಪಾತ್ರ ಬಹಳ ಮುಖ್ಯವಾಗಿದೆ. ನವೀನ್ ಮುಖ ನೋಡಬೇಕೆಂಬುದು ಅವರ ತಂದೆ ತಾಯಿ ಆಸೆಯಾಗಿತ್ತು. ಅವರ ಹೆತ್ತವರ ಕನಸನ್ನು ತಾವು ಈಡೇರಿಸಿದ್ದೀರಿ. ಕರ್ನಾಟಕದ ರಾಜ್ಯದ ಪರವಾಗಿ ತಮಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಇದು ನಿಜಕ್ಕೂ ಅಸಾಧಾರಣ ಕೆಲಸ. ಯುದ್ಧ ಭೂಮಿಯಿಂದ ಮೃತದೇಹ ತರುವುದು ಸುಲಭದ ಮಾತಲ್ಲ. ಆದರೆ ತಮ್ಮ ರಾಜತಾಂತ್ರಿಕತೆಯಿಂದ ಅಸಾಧಾರಣ ಕೆಲಸವನ್ನು ಮಾಡಿ ತೋರಿಸಿದ್ದೀರಿ. ಇದಕ್ಕಾಗಿ ನಾನು ಧನ್ಯವಾದ ತಿಳಿಸಬಯಸುತ್ತೇನೆ' ಎಂದು ಹೇಳಿದ್ದಾರೆ.

ಪತ್ರ ಬರೆದು ಟ್ವೀಟ್ ಮಾಡಿದ್ದ ಬೊಮ್ಮಾಯಿ:
ಉಕ್ರೇನ್ ನಲ್ಲಿ ಸಾವಿಗೀಡಾಗಿರುವ ನವೀನ್ ಗ್ಯಾನಗೌಡರ್ ಮೃತದೇಹವನ್ನು ತಂದಿದ್ದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಧನ್ಯವಾದ ಅರ್ಪಿಸಿದ್ದರು.
ಈ ಸಂಬಂಧ ಟ್ವೀಟ್ ಸಹ ಮಾಡಿದ್ದ ಸಿಎಂ, ನಿಮ್ಮ ಪರಿಶ್ರಮದಿಂದಲೇ ನವೀನ್ ಮೃತದೇಹ ಭಾರತ ದೇಶಕ್ಕೆ ಬರಲಿದೆ. ಇದಕ್ಕೆ ನಿಮ್ಮ ಕಾಳಜಿಯೇ ಕಾರಣ. ನಿಮ್ಮ ಈ ಕಾಳಜಿಗೆ ನಾನು ಮತ್ತು ಕರ್ನಾಟಕದ ಜನತೆ ನಿಮಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ ಎಂದು ಟ್ವೀಟ್ನಲ್ಲಿ ಸಿಎಂ ಹೇಳಿದ್ದರು.












Click it and Unblock the Notifications