Heavy Rain: ರಾಜ್ಯದ ಈ ಜಿಲ್ಲೆಯಲ್ಲಿ ಮೇಘಸ್ಫೋಟ; ಧಾರಾಕಾರ ಮಳೆಯಿಂದ ಪ್ರವಾಹ, ಜನ ಕಂಗಾಲು
ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಭಾನುವಾರ ಸಂಜೆ ಭಾರೀ ಹವಾಮಾನ ವೈಪರೀತ್ಯವಾಗಿದೆ. ಭಾರೀ ಹವಾಮಾನ ವೈಪರೀತ್ಯಕ್ಕೆ ಕರ್ನಾಟಕವೇ ಬೆಚ್ಚಿ ಬಿದ್ದೆ. ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ಏಕಾಏಕಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ಭಯಂಕರ ಮೇಘಸ್ಫೋಟಕ್ಕೆ ಜನ ಕಂಗಾಲಾಗಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿಯ ಕಬ್ಬಿನಾಲೆ ಪರ್ವತ ಸಾಲುಗಳಲ್ಲಿ ನೆನ್ನೆ ಆಗಿದ್ದೇನು ಎನ್ನುವ ವಿವರ ಇಲ್ಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗುತ್ತಿದೆ. ಆದರೆ, ಉಡುಪಿಯಲ್ಲಿ ಭಾರೀ ಅನಾಹುತವೊಂದು ಸಂಭವಿಸಿದೆ. ಇದರಿಂದ ಈ ಭಾಗದ ನೂರಾರು ಜನ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಉಡುಪಿಯ ಹೆಬ್ರಿ ತಾಲ್ಲೂಕಿನ ಮುದ್ರಾಡಿ ಎನ್ನುವ ಗ್ರಾಮದ ಬಲ್ಲಾಡಿ ಎನ್ನುವ ಪ್ರದೇಶದಲ್ಲಿ ಜಲ ಪ್ರವಾಹವೇ ಸೃಷ್ಟಿಯಾಗಿದೆ. ಏಕಾಏಕಿ ಎದುರಾದ ಜಲಪ್ರವಾಹ ಪರಿಸ್ಥಿತಿಗೆ ಜನ ಭಯಭೀತರಾಗಿದ್ದಾರೆ. ಅಷ್ಟಕ್ಕೂ ನೆನ್ನೆ ಅಲ್ಲಿ ಏನು ನಡೆಯಿತು ಎನ್ನುವುದೇ ಜನರಿಗೆ ಮೊದಲು ತಿಳಿಯಲೇ ಇಲ್ಲ. ಇದೀಗ ಆ ಬಗ್ಗೆ ಮಾಹಿತಿ ಸಿಕ್ಕಿದೆ.

ಭಾನುವಾರ ಸಂಜೆ ರಾಜ್ಯದ ವಿವಿಧೆಡೆ ಮಳೆಯಾಗಿತ್ತು. ಆದರೆ, ಕರಾವಳಿ ಜಿಲ್ಲೆಗಳಲ್ಲಿ ಮಳೆ ಭಾರೀ ಅನಾಹುತವನ್ನೇ ಸೃಷ್ಟಿ ಮಾಡಿದೆ. ಉಡುಪಿಯ ಹೆಬ್ರಿ ಎನ್ನುವ ಪ್ರದೇಶದಲ್ಲಿ ಭಾನುವಾರ ಏಕಾಏಕಿ ಪ್ರವಾಹದ ಪರಿಸ್ಥಿತಿ ಎದುರಾಗಿತ್ತು. ಹೆಬ್ರಿ ಪ್ರದೇಶವನ್ನು ಪಶ್ಚಿಮ ಘಟ್ಟದ ತಪ್ಪಲು ಎಂದೇ ಹೇಳಲಾಗುತ್ತದೆ. ಪಶ್ಚಿಮ ಘಟ್ಟದ ಆಕರ್ಷಣಿಯ ಸ್ಥಳಗಳಲ್ಲಿ ಇದೂ ಸಹ ಒಂದಾಗಿದೆ. ಆದರೆ, ಭಾನುವಾರ ಇಲ್ಲಿನ ಜನ ಯಾರೂ ನಿರೀಕ್ಷೆ ಮಾಡದಷ್ಟು ಮಳೆಯಾಗಿದೆ.
ಈ ಭಾಗದ ಹಲವು ಪ್ರದೇಶಗಳು ಮಳೆಯಿಂದಾಗಿ ದ್ವೀಪದಂತೆ ಬದಲಾಗಿವೆ. ಭಾನುವಾರ ಸಂಜೆ ಮಳೆ ಈ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಆದರೆ, ಪ್ರವಾಹ ಪರಿಸ್ಥಿತಿಗೆ ಭಾರೀ ಮಳೆ ಕಾರಣವಲ್ಲ. ಈ ಭಾಗದಲ್ಲಿ ಸಂಭವಿಸಿದ ಮೇಘಸ್ಫೋಟವೇ ಕಾರಣ ಎಂದು ಹೇಳಲಾಗಿದೆ. ಇಲ್ಲಿನ ಹೆಬ್ರಿ ತಾಲ್ಲೂಕಿನ ಮುದ್ರಾಡಿ ಗ್ರಾಮದಲ್ಲಿರುವ ಬಲ್ಲಾಡಿ ಪ್ರದೇಶದ ಜನ ಜಲ ದಿಗ್ಬಂಧನ ಎದುರಿಸಿದ್ದಾರೆ. ಬಲ್ಲಾಡಿ ಭಾಗದ ಈಶ್ವರನಗರ ಸಮೀಪದಲ್ಲಿ ಬಮ್ಮಗುಂಡಿ ಹೊಳೆ ಉಕ್ಕಿ ಹರಿದಿದ್ದು, ಈ ಭಾಗದ ಮನೆ ಹಾಗೂ ಕೃಷಿ ಜಮೀನುಗಳು ಜಲಾವೃತವಾಗಿದೆ. ಇದರಿಂದ ಇಲ್ಲಿನ ಜನ ಸಂಕಷ್ಟ ಅನುಭವಿಸಿದ್ದು, ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ.
ಜನರನ್ನು ರಕ್ಷಿಸಲು ಪರದಾಟ: ಭಾನುವಾರ ಏಕಾಏಕಿ ಈ ಭಾಗದಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಜನ ನೀರಿನಲ್ಲಿ ಸಿಲುಕಿಕೊಂಡು ಹೊರ ಬರಲಾಗದೆ ಒದ್ದಾಡಿದ್ದಾರೆ. ಮೇಘಸ್ಫೋಟದ ಬೆನ್ನಲ್ಲೇ ಭೀಕರ ಜಲ ಪ್ರವಾಹ ಸೃಷ್ಟಿಯಾಗಿತ್ತು. ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವ ಮೊದಲೇ ಮನೆಗಳಿಗೆ ನೀರು ನುಗ್ಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಸಿಬ್ಬಂದಿ ಜನರನ್ನು ನೀರಿನಿಂದ ಹೊರಕ್ಕೆ ಕರೆದುಕೊಂಡು ಬಂದಿದ್ದಾರೆ. ನೀರಿನಲ್ಲಿ ಸಿಲುಕಿದ್ದ ಜನರನ್ನು ಹಗ್ಗಕಟ್ಟಿ ಏಣಿಯ ಮೂಲಕ ರಕ್ಷಿಸಲಾಗಿದೆ. ಇಲ್ಲಿನ ಕಬ್ಬಿನಾಲೆಯ ಬೆಟ್ಟದಲ್ಲಿ ಮೇಘಸ್ಫೋಟ ಸೃಷ್ಟಿಯಾದ ಕೆಲವೇ ನಿಮಿಷಗಳಲ್ಲಿ ಭಾರೀ ಮಳೆಯೂ ಸುರಿದಿದ್ದು, ಜಲ ಪ್ರವಾಹ ಸೃಷ್ಟಿಯಾಗಿದೆ. ಇದರಿಂದ ಈ ಭಾಗದ ಜನ ಇನ್ನಿಲ್ಲದಂತೆ ಸಂಕಷ್ಟ ಅನುಭವಿಸಿದ್ದಾರೆ.

ಇನ್ನು ಎರಡು ದಿನ ಮಳೆ ಎಚ್ಚರಿಕೆ: ಈ ಭಾಗದಲ್ಲಿ ಇನ್ನೂ ಎರಡು ದಿನ ಅಂದರೆ ಅಕ್ಟೋಬರ್ 9ರ ವರೆಗೆ ಧಾರಾಕಾರ ಮಳೆ ಸುರಿಯಲಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಲಾಗಿದೆ. ಈ ಸಂಬಂಧ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಅವರು, ಹೆಬ್ರಿ ತಾಲ್ಲೂಕಿನ ಬಲ್ಲಾಡಿಯಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಮನೆಗಳು ಮತ್ತು ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದರು. ಅಲ್ಲದೇ ಅಕ್ಟೋಬರ್ 9ರ ವರೆಗೆ ಈ ಭಾಗದಲ್ಲಿ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಧಾರಾಕಾರ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ಕಾರು ಹಾಗೂ ಬೈಕ್ಗಳಿಗೆ ಹಾನಿಯಾಗಿದೆ. ಕೆಲವಿ ಮನೆಗಳಿಗೆ ನೀರು ನುಗ್ಗಿದ್ದೆ. ಕೆಲವು ದನದ ಕೊಟ್ಟಿಗೆಗಳಿಗೆ ಹಾನಿಯಾಗಿದ್ದು, ಜಾನುವಾರು ನಾಪತ್ತೆಯಾಗಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications