ಕಲ್ಲು ಕ್ವಾರಿಗಳ ಅಕ್ರಮಕ್ಕೆ ಜಿಲ್ಲಾಡಳಿತದ ಹೊಣೆಗಾರಿಕೆ ಇಲ್ಲವೇ ?
ಬೆಂಗಳೂರು,
ಫೆಬ್ರವರಿ 25: ಆರು ಮಂದಿ ಮುಗ್ಧರನ್ನು ಬಲಿ ಪಡೆದ ಚಿಕ್ಕಬಳ್ಳಾಪುರ ಹೀರೇನಾಗವಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದಡಿ ಗುಡಿಬಂಡೆ ಪಿಎಸ್ಐ ಕೆ. ಗೋಪಾಲರೆಡ್ಡಿಯನ್ನು ಅಮಾನತು ಮಾಡಲಾಗಿದೆ. ಪ್ರಕರಣ ದಾಖಲಿಸಿದರೂ ಆರೋಪಿಗಳನ್ನು ಬಂಧಿಸಿದೇ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಅಮಾನತು ಮಾಡಿ ಆದೇಶಿಸಲಾಗಿದೆ. ಬಹುದೊಡ್ಡ ಪ್ರಮಾದಕ್ಕೆ ಕೇವಲ ಪಿಎಸ್ಐ ಒಬ್ಬರೇ ಹೊಣೆಯಾ ? ಬೇರೆ ಯಾರ ಪಾತ್ರವೂ ಇಲ್ಲವೇ ? id="toptextpromo"> id='are-slot-1' class='oiad oi-axt oiadv'>
ಚಿಕ್ಕಬಳ್ಳಾಪುರ ಕ್ವಾರಿ ಚರಿತ್ರೆ:
ಚಿಕ್ಕಬಳ್ಳಾಪುರ ಜಿಲ್ಲೆಯಾಗುವ ಮೊದಲು ಕೇವಲ ಉಪ ವಿಭಾಗದ ತಾಲೂಕಾಗಿತ್ತು. 2007-08 ರಲ್ಲಿ ಅಂದಿನ ಸಿಎಂ ಕುಮಾರಸ್ವಾಮಿ ಚಿಕ್ಕಬಳ್ಳಾಪುರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಿದರು. ಇನ್ನು ಚಿಕ್ಕಬಳ್ಳಾಪುರದ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿಗಳು ಗಣಿ ಉದ್ಯಮಿಗಳ ಕಣ್ಣು ಬೀಳುವಂತೆ ಮಾಡಿದ್ದು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ನಂದಿ ಗಿರಿಧಾಮ ಪ್ರವಾಸಿ ತಾಣವು ಬೇರೆ. ಹೀಗಾಗಿ ಚಿಕ್ಕಬಳ್ಳಾಪುರದ ಮೇಲೆ ಒಂದೇ ಸಲ ಎಲ್ಲರ ಕಣ್ಣು ಬಿತ್ತು. ಹಿಂದುಳಿದ ಜಿಲ್ಲಾ ಕೇಂದ್ರ ಅಭಿವೃದ್ಧಿಗೆ ತೆರೆದುಕೊಳ್ಳುತ್ತಿದ್ದಂತೆ ಕೋಟೆಯಾಗಿ ಆವರಿಸಿದ್ದು ಒಂದು ರಿಯಲ್ ಎಸ್ಟೇಟ್ ಉದ್ಯಮ. ಮತ್ತೊಂದು ಕ್ವಾರಿ ವ್ಯಾಪಾರ.

ಕಲ್ಲು ಕ್ವಾರಿ ವಹಿವಾಟು ಆರಂಭ:
ಆಂಧ್ರದ ಪ್ರಭಾವಿ ರಾಜಕಾರಣಿಗಳು, ಸ್ಥಳೀಯ ರಾಜಕಾರಣಿಗಳ ಮಾಲಿಕತ್ವದ ಕ್ರಷರ್ ಗಳು ತಲೆಯೆತ್ತಿದ್ದವು. ಗಣಿ ಮಾಲೀಕರು ಸಲ್ಲಿಸುವ ಕಪ್ಪು ಕಾಣಿಕೆ ಮೇಲೆ ಅಧಿಕಾರಿ ವರ್ಗ ಅವಲಂಭಿತವಾಗತಡಗಿತು. ಎಲ್ಲಾ ನಿಯಮಗಳು ಗಾಳಿಗೆ ತೂರಿ ಕಲ್ಲು ಕ್ವಾರಿ ವಹಿವಾಟು ಆರಂಭವಾಯಿತು. ಒಂದಡೆ ಕಾನೂನು ಬದ್ಧವಾಗಿ ಪರವಾನಗಿ ಪಡೆದಿದ್ದರೂ, ಕಲ್ಲು ಕ್ವಾರಿ ವಹಿವಾಟಿಗೆ ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರಿದವು. ಹೀಗಾಗಿ ಚಿಕ್ಕಬಳ್ಳಾಪುರ ವನ್ನು ಅಕ್ರಮ ಕಲ್ಲು ಗಣಿಗಾರಿಕೆ ಸಂಪೂರ್ಣ ಆವರಿಸಿಕೊಂಡಿತು. ಕಂಡು ಕಾಣದಂತೆ ಅಧಿಕಾರಿಗಳು ಮೌನಕ್ಕೆ ಶರಣಾದರು. ಅದರ ಪರಿಣಾಮ ಇಂದು ಮೃತ ಕಾರ್ಮಿಕರು ಮಾತ್ರವಲ್ಲ, ಇಡೀ ಜಿಲ್ಲೆಯ ಜನ ಎದುರಿಸುವಂತಾಗಿದೆ.

ಕ್ರಷರ್ ಗಳ ಸಭೆ :
ಕಳೆದ ಉಪ ಚುನಾವಣೆಗೂ ಮುನ್ನ ನಡೆದ ವಿಧಾನ ಸಭೆ ಚುನಾವಣೆ ವೇಳೆಯೇ ಚಿಕ್ಕಬಳ್ಳಾಪುರದಲ್ಲಿ ಜಲ್ಲಿ ಕ್ರಷರ್ ಗಳ ವಿವಾದ ದೊಡ್ಡ ಮಟ್ಟದಲ್ಲಿ ಎದ್ದಿತ್ತು. ಕೆಲ ಕಾಲ ಕ್ರಷರ್ ಗಳನ್ನು ನಿಲ್ಲಿಸಲಾಗಿತ್ತು. ಸ್ಥಳೀಯ ಶಾಸಕರಾಗಿದ್ದ ಡಾ.ಕೆ. ಸುಧಾಕರ್ ಅವರೇ ಕ್ರಷರ್ ಮಾಲೀಕರ ಸಭೆ ನಡೆಸಿದ್ದರು. ಚುನಾವಣೆ ಹೊಸ್ತಿಲಲ್ಲಿ ಅಂತೂ ಅಕ್ರಮ ಕಲ್ಲು ಕ್ವಾರಿಗಳ ಪರವಾನಗಿ ವಿಚಾರದಲ್ಲಿ ಪ್ರಭಾವಿ ರಾಜಕಾರಣಿಗಳು ಹಸ್ತ ಕ್ಷೇಪ ಮಾಡಿದರು ಎಂಬ ನಾನಾ ಆರೋಪಗಳು ಕೇಳಿ ಬಂದಿದ್ದವು. ಚುನಾವಣೆ ಬಳಿಕ ಯಾವ ಅಡ್ಡಿ ಆತಂಕವಿಲ್ಲದೇ ಪ್ರತಿ ದಿನ ನೂರಾರು ಎಂ ಸ್ಯಾಂಡ್ ವಾಹನಗಳು ಚಲಿಸತೊಡಗಿದವು. ರಾತ್ರಿ ವೇಳೆ ಕ್ವಾರಿಗಳಲ್ಲಿ ಎಂದಿನಂತೆ ಸ್ಫೋಟಗಳು ಶುರುವಾದವು. ಹೀರೇನಾಗವಲ್ಲಿಯಲ್ಲಿ ಸ್ಫೋಟ ಸಂಭವಿಸುವರೆಗೂ ಚಿಕ್ಕಬಳ್ಳಾಪುರದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿಲ್ಲ ಎಂಬುವಷ್ಟರ ಮಟ್ಟಿಗೆ ಗುಟ್ಟಾಗಿ ವಹಿವಾಟು ನಡೆದುಕೊಂಡು ಹೋಗುತ್ತಿತ್ತು.

ಹೊಣೆ ಯಾರು :
ಯಾವುದೇ ಒಂದು ಜಾಗದಲ್ಲಿ ಗಣಿಗಾರಿಕೆ ನಡೆಸಬೇಕಾದರೆ, ಅದಕ್ಕೆ ಜಿಲ್ಲಾಡಳಿತ ಪರವಾನಗಿ ನೀಡಬೇಕು. ಭೂಮಿ ಸರ್ಕಾರಿ ಜಮೀನಿನ ಬಗ್ಗೆ ಸ್ಥಳೀಯ ಕಂದಾಯ ಅಧಿಕಾರಿಗಳು ವರದಿನೀಡಬೇಕು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಪೇಕ್ಷಣಾ ಪ್ರಮಾಣ ಪತ್ರ ಪಡೆಯಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪರವಾನಗಿ ಪಡೆಯಬೇಕು. ಜಿಲೆಟಿನ್ ಅಥವಾ ಅಮೋನಿಯಮ್ ನೈಟ್ರೇಟ್ ಜೆಲ್ ಸ್ಫೋಟ ಮಾಡುವುದಿದ್ದರೆ, ಅದನ್ನು ಖರೀದಿಸಿ ಸಾಗಣೆ ಮಾಡುವ ಬಗ್ಗೆ ಪೆಟ್ರೋಲಿಯಂ ನಿಯಂತ್ರಣ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಪರವಾನಗಿ ಪಡೆಯಬೇಕು. ವಾಸ್ತವದಲ್ಲಿ ಇವ್ಯಾವು ಪಾಲನೆಯಾಗುತ್ತಿಲ್ಲ. ಶಿವಮೊಗ್ಗದ ಹೊಣಸೋಡು ಘಟನೆಯಾಗಲೀ, ಚಿಕ್ಕಬಳ್ಳಾಪುರದ ಹೀರೇನಾಗವಲ್ಲಿ ಪ್ರಕರಣ ಪರಿಶೀಲಿಸಿದರೆ, ಜಿಲ್ಲಾಧಿಕಾರಿಗಳಿಂದ ಹಿಡಿದು ಕೆಳ ಹಂತದ ಅಧಿಕಾರಿಗಳು ಹೊಣೆಯಾಗುತ್ತಾರೆ ? ಮುಗ್ಧ ಜೀವಗಳೇ ಪ್ರಾಣ ಕಳೆದುಕೊಂಡ ಪ್ರಕರಣದಲ್ಲಿ ಅವರ ಹೊಣೆಗಾರಿಕೆ ಬಹು ದೊಡ್ಡದು.

ಪೊಲೀಸರೇ ಹೊಣೆ ಯಾಕೆ ?:
ಒಂದು ಕ್ಷೇತ್ರದಲ್ಲಿ ಯಾವುದೇ ಕಾನೂನು ಬಾಹಿರ ಕೃತ್ಯ ನಡೆಯುತ್ತಿದ್ದರೆ, ಆಗ ಮಾತ್ರ ಪೊಲೀಸರ ಕೆಲಸ. ನಾಗವಲ್ಲಿ ಕಲ್ಲು ಕ್ವಾರಿ ವಹಿವಾಟಿಗೂ ಇದು ಅನ್ವಹಿಸುತ್ತದೆ. ಆದರೆ, ಅಕ್ರಮಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ತ್ವರಿತವಾಗಿ ಬಂಧಿಸಲಿಲ್ಲ ಎಂಬ ಕರ್ತವ್ಯ ಲೋಪ ಕಾರಣಕ್ಕೆ ಗುಡಿಬಂಡೆ ಪಿಎಸ್ಐ ಅವರನ್ನು ಅಮಾನತು ಮಾಡಲಾಗಿದೆ. ಅದೇ ರೀತಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಅಮಾನತು ಯಾಕೆ ಮಾಡಿಲ್ಲ ? ಕಂದಾಯ ಇಲಾಖೆ ಅಧಿಕಾರಿಗಳನ್ನು ಯಾಕೆ ಹೊಣೆ ಮಾಡಲಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹೊಣೆಯಾಗದ ಸ್ಫೋಟ ಪ್ರಕರಣಕ್ಕೆ ಕೇವಲ ಹೊಣೆಯಾಗಿದ್ದು ಪೊಲೀಸ್ ಸಬ್ ಇಸ್ಪೆಕ್ಟರ್. ಕಲ್ಲು ಕ್ವಾರಿಯಲ್ಲಿ ಅಕ್ರಮ ನಡೆಯಬಾರದು ಎಂಬ ಕಾರಣಕ್ಕಾಗಿಯೇ ಅಲ್ಲವೇ ಪರವಾನಗಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಪೇಕ್ಷಣಾ ಪ್ರಮಾಣ ಪತ್ರ ಪಡೆಯುವುದು, ಪೆಟ್ರೋಲಿಯಂ ಇಲಾಖೆಯಿಂದ ಸ್ಫೋಟಕ್ಕೆ ಅನುಮತಿ ಪಡೆಯುವ ನಿಯಮಗಳನ್ನು ರೂಪಿಸಲಾಗಿದೆ. ಅವು ಉಲ್ಲಂಘನೆಯಾದ ಕೂಡಲೇ ಕ್ರಮ ಜರುಗಿಸಬಕಾದ ಇಲಾಖೆಗಳು ಮೌನ ವಹಿಸಿವೆ. ಹೀಗಾಗಿ ಹೀರೇನಾಗವಲ್ಲಿ ಪ್ರಕರಣಕ್ಕೆ ಅವರು ಯಾರೂ ಹೊಣೆಯಲ್ಲ. ಕೇವಲ ಪೊಲೀಸ್ ಸಿಬ್ಬಂದಿ ಮಾತ್ರ . ಇದು ಅನ್ಯಾಯ ಅಲ್ಲವೇ ?

ಮುಚ್ಚಿ ಹಾಕುವ ಒಂದು ಷಡ್ಯಂತ್ರ :
ಚಿಕ್ಕಬಳ್ಳಾಪುರದಲ್ಲಿ ಅಕ್ರಮ ಕಲ್ಲು ಕ್ವಾರಿ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಜಿಲ್ಲಾಧಿಕಾರಿಗಳಿಗೆ ಗೊತ್ತಿರಲಿಲ್ಲವೇ ? ಗೊತ್ತಿದ್ದೂ ಸುಮ್ಮಾಗಿದ್ದರೇ? ಲೀಗಲ್ ಪರವಾನಗಿ ಪಡೆದರೂ, ಅಕ್ರಮವಾಗಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಕಾನೂನು ಬಾಹಿರವಾಗಿ ಸ್ಫೋಟಕಗಳನ್ನು ಸ್ಪೋಟಿಸುತ್ತಿದ್ದಾರೆ ಎಂಬ ಸಂಗತಿ ಒಬ್ಬ ಜಿಲ್ಲಾಧಿಕಾರಿಗೆ ಗೊತ್ತಿರಬೇಕಲ್ಲವೇ ? ಚಿಕ್ಕಬಳ್ಳಾಪುರ ಹೊಸ ಜಿಲ್ಲೆಯಾಗಿ ಘೋಷಣೆಯಾಗಿದ್ದೇ ತಡ, ಎಂ. ಸ್ಯಾಂಡ್ ಗಾಗಿ ಕಲ್ಲು ಕ್ವಾರಿ ಮೈನಿಂಗ್ ಬಹುದೊಟ್ಟ ಮಟ್ಟದಲ್ಲಿ ಹುಟ್ಟಿಕೊಂಡಿತು. ಅಲ್ಲಿಂದ ಇಲ್ಲಿಯವರೆಗೆ ಎಷ್ಟು ಮಂದಿ ಜಿಲ್ಲಾಧಿಕಾರಿಗಳು ಕೆಲಸ ನಿರ್ವಹಿಸಿದ್ದಾರೋ ಅಷ್ಟೂ ಮಂದಿ ಕೂಡ ಈ ಸ್ಫೋಟ ಪ್ರಕರಣಕ್ಕೆ ನೋರ ಹೊಣೆಯಾಗುತ್ತಾರೆ.
ಕಲ್ಲುಕ್ವಾರಿಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಅಂತರ್ಜಲ ಕುಸಿಯುತ್ತಿದೆ. ರಾತ್ರಿ ವೇಳೆ ಸ್ಪೋಟಕಗಳಿಂದ ಮನೆಗಳು ಬಿರುಕು ಬಿಡುತ್ತಿವೆ ಎಂದು ಪದೇ ಪದೇ ಜನ ದೂರು ನೀಡಿದ್ದಾರೆ. ಆ ದೂರು ಸ್ವೀಕರಿಸಿದರೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಮಟ್ಟದ ಅಧಿಕಾರಿ ಎಲ್ಲಿ ಹೋಗಿದ್ದಾರೆ ? ಅಕ್ರಮವಾಗಿ ಸ್ಪೋಟಕಗಳನ್ನು ಸ್ಫೋಟಿಸುವ ಕ್ರಷರ್ ಗಳ ಮೇಲೆ ಜರುಗಿಸಿದ ಕ್ರಮದ ಬಗ್ಗೆ ಈವರಗೂ ಒಂದು ವರದಿಯಾದರೂ ಸಲ್ಲಿಸಿದ್ದಾರೆಯೇ ? ಒಬ್ಬ ಪಿಎಸ್ಐ ಅವರನ್ನು ಮಾತ್ರ ಅಮಾನತು ಮಾಡಿ ಮೌನವಾಗಿರುವುದು ಪ್ರಕರಣವನ್ನು ಮುಚ್ಚಿ ಹಾಕುವ ಒಂದು ಷಡ್ಯಂತ್ರ ಎಂದು ಶಾಶ್ವತ ನೀರಾವರಿ ಹೋರಾಟಗಾರ ಮುಖ್ಯಸ್ಥ ಆಂಜನೇಯರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications