ಕಾರ್ಗಿಲ್ ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನಮನ!
ಬೆಂಗಳೂರು, ಜು. 26: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು ಮಹತ್ವದ ದಿನ. ಒಂದೆಡೆ ಹೈಕಮಾಂಡ್ ಸೂಚನೆ ಕಾಯುತ್ತಿರುವುದಾಗಿ ಹೇಳಿಕೆ ನೀಡಿರುವ ಅವರು, ರಾಜಕೀಯ ಹೋಯ್ದಾಟದ ಮಧ್ಯೆ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಯಡಿಯೂರಪ್ಪ ಅವರು ನಮನ ಸಲ್ಲಿಸಿದರು. ಬೆಂಗಳೂರಿನ ನೆಹರು ತಾರಾಲಯದ ಎದುರಿನ ಇಂದಿರಾ ಗಾಂಧಿ ಸಂಗೀತ ಕಾರಂಜಿ ಉದ್ಯಾನವನದ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಗಿಲ್ ಹುತಾತ್ಮ ಸೈನಿಕರಿಗೆ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, "ರಾಷ್ಟ್ರೀಯ ಸೈನಿಕ ಸ್ಮಾರಕ ಆಯೋಜಿಸಿದ ಕಾರ್ಗಿಲ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುತಾತ್ಮ ಸೈನಿಕರಿಗೆ ನಮನ ಸಲ್ಲಿಸಿದ್ದೇನೆ. ದೇಶಕ್ಕಾಗಿ ಮಡಿದ ಸೈನಿಕರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ದೇಶದ ಸಮಗ್ರತೆ ಕಾಪಾಡುವ ಯೋಧರ ಹಿಂದೆ ಇಡೀ ರಾಜ್ಯವೇ ಇದೆ. ಯುದ್ಧ ಸಂತ್ರಸ್ಥ ಕುಟುಂಬಕ್ಕೆ ಸಿಗುವ ಎಲ್ಲಾ ಸೌಲಭ್ಯವನ್ನು ಸರ್ಕಾರ ಬದ್ಧತೆಯಿಂದ ಕೊಡುತ್ತದೆ. ಕಾರ್ಗಿಲ್ ಹುತಾತ್ಮರ ಯೋಧರ ಕುಟುಂಬದ ಜೊತೆ ನಾವು ಎಂದೆದಿಗೂ ಇರುತ್ತೆವೆ. ಅಜಿತ್ ಬಂಡಾರ್ಕಲ್ ಪ್ರತಿಮೆ ಶೌರ್ಯದ ಪ್ರತೀಕ. ನಾಡಿನ ಯೋಧರ ಕಲ್ಯಾಣಕ್ಕೆ ನಾವು ಯಾವತ್ತೂ ಬದ್ಧ" ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಶೌರ್ಯ ಚಕ್ರ ಪುರಸ್ಕೃತ ಲೆ. ಕರ್ನಲ್ ಅಜಿತ್ ವಿ. ಭಂಡಾರ್ಕರ್ ಅವರ ಆತ್ಮಚರಿತ್ರೆ 'Saga of a Braveheart' ಪುಸ್ತಕವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬಿಡುಗಡೆ ಮಾಡಿದರು.
Recommended Video
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಉಪಸ್ಥಿತರಿದ್ದರು.