ಪಿಯು ಪತ್ರಿಕೆ ಖರೀದಿ ಆಗಿದೆ, ಮಾರಿದವರು ಯಾರು?
ಬೆಂಗಳೂರು, ಏಪ್ರಿಲ್ 05 : ಸಿಐಡಿ ಪೊಲೀಸರು ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಸೋಮವಾರ ಬಂಧಿಸಿದ್ದಾರೆ. ಈ ಮೂವರು ವ್ಯಕ್ತಿಗಳಿಗೆ ಪತ್ರಿಕೆಯನ್ನು ನೀಡಿದ್ದು ಯಾರು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಸೋಮವಾರ ಬೆಂಗಳೂರಿನ ನಾಗರಬಾವಿಯ ಆದರ್ಶನಗರದ ಮಂಜುನಾಥ್ (47), ಶ್ರೀರಾಮಪುರದ ಓಬಳರಾಜು (51) ಹಾಗೂ ಮಲ್ಲೇಶ್ವರದ ಪಶ್ಚಿಮ ಪಾರ್ಕ್ ರಸ್ತೆಯ ರುದ್ರಪ್ಪ (50) ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ಗೆ ಮೊದಲು ಪತ್ರಿಕೆ ಸಿಕ್ಕಿತ್ತು ಎಂದು ಪೊಲೀಸರು ಹೇಳಿದ್ದಾರೆ. [ವಿಶೇಷಾಧಿಕಾರಿ ಬಂಧನ, ಸಚಿವರು ಹೇಳಿದ್ದೇನು?]

ಮಂಜುನಾಥ್ ಮೊದಲು ಪತ್ರಿಕೆಯನ್ನು ಖರೀದಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಮಂಜುನಾಥ್ ಯಾರಿಂದ ಪತ್ರಿಕೆ ಖರೀದಿ ಮಾಡಿದರು? ಎಂಬುದು ಇನ್ನೂ ಬಹಿರಂಗವಾಗಿಲ್ಲ. ಮಂಜುನಾಥ್ ಅವರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಮಾತ್ರವೇ ಪತ್ರಿಕೆ ಸಿಗಲು ಸಾಧ್ಯ. [ಲೀಕಾಗಿದ್ದ ಕೆಮಿಸ್ಟ್ರಿ ಪಿಯು ಪ್ರಶ್ನೆ ಪತ್ರಿಕೆ ಬೆಲೆ 10 ಲಕ್ಷ ರು!]
ಪತ್ರಿಕೆ ಖರೀದಿ ಮಾಡುವವರು ಇದ್ದಾರೆ ಎಂದರೆ ಅದನ್ನು ಮಾರಾಟ ಮಾಡುವವರು ಇರುತ್ತಾರೆ. ಮಾರಾಟ ಮಾಡಿದವರು ಯಾರು? ಎಂದು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಏಪ್ರಿಲ್ 12ರಂದು ಪುನಃ ಪತ್ರಿಕೆ ಸೋರಿಕೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. [ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಟ್ಯೂಷನ್ ಮಾಫಿಯಾ?]
ಸೋಮವಾರ ಬಂಧಿಸಲಾದ ರುದ್ರಪ್ಪ ಮತ್ತು ಓಬಳರಾಜು ಅವರು ಮಕ್ಕಳಿಗಾಗಿ ಪತ್ರಿಕೆಯನ್ನು ಖರೀದಿ ಮಾಡಿದ್ದರು.
ಇವರು ಪತ್ರಿಕೆಯನ್ನು ಇತರರಿಗೆ ಹಂಚಿದ್ದರೆ ಎಂದು ಸಿಐಡಿ ತನಿಖೆ ನಡೆಸುತ್ತಿದೆ. ಇವರು ಪತ್ರಿಕೆ ಹಂಚಿಕೆ ಮಾಡಿರುವುದಕ್ಕೆ ಸಾಕ್ಷಿಗಳು ಲಭ್ಯವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸದ್ಯದ ತನಿಖೆಯಂತೆ ಸಿಐಡಿ ಮಂಜುನಾಥ್ ಮೊದಲ ಆರೋಪಿ ಎಂದು ಗುರುತಿಸಿದೆ. ಮಂಜುನಾಥ್ ಹಲವು ಜನರಿಗೆ ಪತ್ರಿಕೆಯನ್ನು ಮಾರಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಜೊತೆಗೆ ಏ.12ರಂದು ಪತ್ರಿಕೆ ಸೋರಿಕೆಯಾಗಬಾರದು ಎಂಬ ಬಗ್ಗೆ ಸಿಐಡಿ ಗಮನಹರಿಸುತ್ತಿದೆ.
ಪರೀಕ್ಷೆ ರದ್ದಾಗಿತ್ತು : 2016ರ ಮಾರ್ಚ್ 21ರಂದು 1.75 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಮಾರ್ಚ್ 31ರಂದು ಮರುಪರೀಕ್ಷೆ ನಡೆಸುವುದಾಗಿ ಘೋಷಿಸಲಾಗಿತ್ತು. ಆದರೆ, ಪುನಃ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆ ರದ್ದುಗೊಳಿಸಲಾಗಿತ್ತು. ಸದ್ಯ, ಏ.12ರಂದು ಮರು ಪರೀಕ್ಷೆ ನಡೆಸುವುದಾಗಿ ದಿನಾಂಕ ಘೋಷಣೆ ಮಾಡಲಾಗಿದೆ.












Click it and Unblock the Notifications