ಮನಸು ಮನಸು ಒಂದಾದರೆ ಬಾಳೆ ಹೊನ್ನಿನ ತಾವರೆ!
ಚಾಮರಾಜನಗರ, ಮೇ 31 : ಆಡಲು ಮಾತು ಬಾರದಿದ್ದರೇನಂತೆ ಮನಸುಗಳು ಒಂದಾಗಲು ಮಾತಿನ ಹಂಗಿಲ್ಲ. ಮನಸು ಮನಸು ಒಂದಾಗಿ ಬಾಳು ಹೊನ್ನಿನ ತಾವರೆಯಾಗಿಸಲು ಮಾತು ಬಾರದ ಎರಡು ಹೃದಯಗಳು ಹಸೆಮಣೆಯೇರಿವೆ. ಭಾಷೆಗೆ ನಿಲುಕದ ಭಾವಗೀತೆ ಹಾಡಲು ಇಬ್ಬರೂ ಸಜ್ಜಾಗಿದ್ದಾರೆ.
ಇಂಥದೊಂದು ಅಪರೂಪದ ಅಮೃತ ಘಳಿಗೆಗೆ, ಶುಭಯೋಗಕ್ಕೆ ಸಾಕ್ಷಿಯಾಗಿದ್ದು ಚಾಮರಾಜನಗರದ ರಕ್ಷಿತ್ ಮಹಲ್. ವಧುವರರಿಗೆ ಮಾಂಗಲ್ಯಂ ತಂತು ನಾನೇನ ಮಂತ್ರೋಚ್ಛಾರ, ನಾಗಸ್ವರದ ನಿನಾದ, ಬಂಧುಮಿತ್ರರ ಮಾತುಗಳು ಯಾವುದೂ ಕೇಳುತ್ತಿರಲಿಲ್ಲ. ಅವರಿಬ್ಬರಿಗೆ ಕೇಳುತ್ತಿದ್ದುದು ಇಬ್ಬರ ಹೃದಯ ಬಡಿತವಷ್ಟೆ. [ಗೂಗಲನಾಗ ಯಾವದರ ಕನ್ಯಾ ಇದ್ದರ ನೋಡಪಾ!]
ಚಾಮರಾಜನಗರದ ನಿವಾಸಿ ಕಮಲಾಬಾಯಿ ಮತ್ತು ವರದಾಜಿರಾವ್ ಸಾಠೆ ದಂಪತಿ ಪುತ್ರಿ ಸಾವಿತ್ರಿಬಾಯಿ ಹಾಗೂ ಹುಣಸೂರು ತಾಲೂಕು ಗಾವಡೆಗೆರೆ ಹೋಬಳಿ ಮುಳ್ಳೂರು ಗ್ರಾಮದ ನಾಗುಬಾಯಿ ಮತ್ತು ಶಂಕರ್ರಾವ್ ಜಗಪತ್ ದಂಪತಿ ದ್ವಿತಿಯ ಪುತ್ರ ಗೋಪಾಲರಾವ್ ಜಗಪತ್ರಾವ್ ಅವರು ಶಾಸ್ತ್ರೋಕ್ತವಾಗಿ ಬಂಧು-ಬಾಂಧವರು, ಗೆಳೆಯ, ಗೆಳತಿಯರ ಸಮ್ಮುಖದಲ್ಲಿ ವಿವಾಹವಾದರು.
ಈ ಮದುವೆಗೆ ನಗರದ ವರ್ತಕರ ಸಂಘ ಸೇರಿದಂತೆ ಕೆಲವು ಸಂಘಟನೆಗಳು ಶುಭಕೋರಿದವು. ಸಾವಿರಾರೂ ಜನ ಮದುವೆಗೆ ಸಾಕ್ಷಿಯಾಗಿದ್ದರು, ಗಂಡಿನ ಮಾತುಬಾರದ ಸ್ನೇಹಿತರು ಕೋಲಾರ, ಬೆಂಗಳೂರು, ದಾವಣಗೆರೆ, ಮೈಸೂರು ಮುಂತಾದ ಜಿಲ್ಲೆಗಳಿಂದ ಆಗಮಿಸಿ ವಧುವರರನ್ನು ಹಾರೈಸಿದರು. ಅವರಿಬ್ಬರ ಬಾಳು ಬಂಗಾರವಾಗಲಿ. [ಹಿಂದೂ-ಮುಸ್ಲಿಂ ಮದುವೆ : ಕ್ರಾಂತಿಗೆ ಬುದ್ಧಿಜೀವಿಗಳ ನಾಂದಿ!]
ಇದೇ ಸಂದರ್ಭದಲ್ಲಿ ಹುಡುಗಿಯ ಅಣ್ಣ ವೆಂಕಟರಾವ್ ಸಾಠೆ ಮಾತನಾಡಿ, ನನ್ನ ತಂಗಿಯ ಜೀವನದಲ್ಲಿ ಇಂತಹ ಶುಭಗಳಿಗೆ ಬರುತ್ತದೆ ಎಂದು ಗೊತ್ತಿರಲಿಲ್ಲ. ನನ್ನ ತಂಗಿಗೆ ಮಾತು ಬಾರದ ಕಾರಣ ಮದುವೆಯಾಗಲು ಯಾರು ಬರುತ್ತಾರಪ್ಪಾ ಎಂಬ ಚಿಂತೆಯಲ್ಲಿದ್ದೆವು. ದೇವರು ನನ್ನ ತಂಗಿಗೆ ತಕ್ಕಂತೆ ವರನನ್ನು ಸೃಷ್ಟಿ ಮಾಡಿರುವುದು ನನಗೆ ಸಂತೋಷ ತಂದಿದೆ ಎಂದರು.
ಮಾತು ಬಾರದ ಎರಡು ಜೀವಗಳು ಒಂದಾಗಿ ಬಾಳುವೆ ಮಾಡಿದ ವಿಷಯವಿದ್ದ, ಡಾ. ರಾಜ್ ಕುಮಾರ್, ಹರಿಣಿ ಮತ್ತು ಕಲ್ಪನಾ ಅವರ ಅಮೋಘ ಅಭಿನಯವಿದ್ದ 'ನಾಂದಿ' ಚಿತ್ರ 1964ರಲ್ಲಿ ಬಿಡುಗಡೆಯಾಗಿತ್ತು. ಆ ಜೋಡಿಯಂತೆಯೇ ಈ ಜೋಡಿಯಲ್ಲಿಯೂ ಮುದ್ದಾದ ಹೂವು ಅರಳಲಿ.