ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆ ನಡೆಸಲು ಛಲವಾದಿ ನಾರಾಯಣಸ್ವಾಮಿ ಆಗ್ರಹ: ಕಾರಣವೇನು?
ಬೆಂಗಳೂರು, ಜೂನ್ 07: ಹಣಕಾಸು ಖಾತೆ ಹೊಂದಿದ ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಭಾರಿ ಹಗರಣ ನಡೆದಿರುವ ಯಾವುದೇ ಸಾಧ್ಯತೆ ಇಲ್ಲ. ಆದ್ದರಿಂದ ಮುಖ್ಯಮಂತ್ರಿಯವರ ವಿರುದ್ಧ ಸಿಬಿಐ ತನಿಖೆ ನಡೆಯಲಿ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾಗೇಂದ್ರರೊಬ್ಬರೇ ರಾಜೀನಾಮೆ ಕೊಟ್ಟರೆ ಸಾಲದು. ಮುಖ್ಯಮಂತ್ರಿಗಳೂ ಜವಾಬ್ದಾರಿ ಹೊತ್ತು ರಾಜೀನಾಮೆ ಕೊಡಬೇಕು ಎಂದು ತಿಳಿಸಿದರು. ನಿನ್ನೆವರೆಗೆ ಕಾಂಗ್ರೆಸ್ ಸರಕಾರದ ಹಗರಣಗಳ ವಿರುದ್ಧ ನಮ್ಮ ಹೋರಾಟ ನಡೆದಿತ್ತು. ಅದು ಈಗಲೂ ಮುಂದುವರೆದಿದೆ ಎಂದು ಸ್ಪಷ್ಟಪಡಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ ನಡೆದಿದೆ. ಇದು ಯಾವುದೇ ಟೆಂಡರ್ ಕೊಟ್ಟಿದ್ದಲ್ಲ. ಯಾವುದೋ ಸರಕಾರಿ ಕಾರ್ಯಕ್ಕೆ ಉಪಯೋಗಿಸಿದ್ದಲ್ಲ. ಬೇರೆ ಬೇರೆ ಖಾತೆ ತೆರೆದು ಹೈದರಾಬಾದ್ಗೆ ವರ್ಗಾಯಿಸಿದ್ದಾರೆ ಎಂದು ಆಕ್ಷೇಪಿಸಿದರು. ಯಾಕೆ ಈ ಹಣ ವರ್ಗಾಯಿಸಿದ್ದಾರೆ ಎಂಬುದಕ್ಕೆ ಸರಕಾರದ ಬಳಿ, ನಿಗಮದ ಬಳಿ ಉತ್ತರವಿಲ್ಲ ಎಂದರು.
ಮೊತ್ತವನ್ನು ಚುನಾವಣೆಗೆ ಬಳಕೆಗಾಗಿ ವರ್ಗಾಯಿಸಿದರೇ ಎಂಬ ಬಗ್ಗೆ ಕೂಲಂಕಷ ಪರಿಶೀಲನೆ ಆಗಬೇಕು. ಒಂದೆಡೆ ಎಸ್ಐಟಿ ತನಿಖೆ ನಡೆದಿದ್ದು, ಯೂನಿಯನ್ ಬ್ಯಾಂಕ್ ಪತ್ರದನ್ವಯ ಸಿಬಿಐ ಕೂಡ ಕೇಸಿನ ತನಿಖೆ ಕೈಗೆತ್ತಿಕೊಂಡಿದೆ. ಒಂದೇ ಕೇಸನ್ನು ಎರಡು ಸಂಸ್ಥೆಗಳು ತನಿಖೆ ಮಾಡಲಾಗದು. ಈ ಕೇಸನ್ನು ಮುಚ್ಚಿ ಹಾಕಲು ಸಿದ್ದರಾಮಯ್ಯರ ಸರಕಾರ ನಿರತವಾಗಿತ್ತು ಎಂದ ಅವರು, ನಮ್ಮ ಹೋರಾಟದ ಒತ್ತಡ, ರಾಜ್ಯಪಾಲರ ಭೇಟಿ ಬಳಿಕ ನಾಗೇಂದ್ರ ಅವರ ರಾಜೀನಾಮೆ ಕೊಟ್ಟಿದ್ದಾರೆ.
ಬೇರೆ ನಿಗಮಗಳಲ್ಲೂ ಹೀಗೆ ಆಗಿದೆಯೇ? ಯಾವ ಕಾರಣಕ್ಕೆ ಖಾತೆಗಳನ್ನು ತೆರೆಯಲಾಯಿತು? ಯಾವ ಕಾರಣಕ್ಕೆ ತೆಲಂಗಾಣದ ಈ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದೀರಿ? ಇದುವರೆಗೂ ಸರಕಾರ ಉತ್ತರ ಕೊಟ್ಟಿಲ್ಲ. ಯಾಕೆ ಅದನ್ನು ಮುಚ್ಚಿಡುತ್ತಾ ಇದ್ದೀರಿ? ಎಂದು ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.
ಒಂದೇ ನಿಗಮದಲ್ಲಿ ಈ ರೀತಿ ಆಗಿದೆಯೇ? ಬೇರೆ ನಿಗಮಗಳಲ್ಲೂ ಹೀಗೆ ಆಗಿದೆಯೇ? ಸರಕಾರದಿಂದ ಉತ್ತರ ಬಂದಿಲ್ಲ. ಸಿದ್ದರಾಮಯ್ಯನವರು ಹೇಳುವುದೇ ಒಂದು ಮಾಡುವುದೇ ಒಂದು ಎಂದು ನಾವು ಮೊದಲಿನಿಂದಲೇ ಹೇಳಿದ್ದೇವೆ. ಎಲ್ಲಿ ನಿಮ್ಮ ದಲಿತ ಪ್ರೇಮ ಸಿದ್ದರಾಮಯ್ಯನವರೇ? ಸಂವಿಧಾನ ನಾವೇ ರಕ್ಷಿಸುವುದು ಎನ್ನುತ್ತಾರೆ. ಎಲ್ಲಿ ರಕ್ಷಣೆ ಮಾಡಿದ್ದೀರಿ ಎಂದು ಕೇಳಿದರು. ಇವತ್ತು ಸಂವಿಧಾನಕ್ಕೆ ಬೆಲೆ ಬಂದಿದ್ದರೆ ನಾಗೇಂದ್ರರ ರಾಜೀನಾಮೆ ಮೂಲಕ ಪೂಜ್ಯ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಗೌರವ ಬಂದಿದೆ ಎಂದು ವಿಶ್ಲೇಷಣೆ ಮಾಡಿದರು.
ಬಿಜೆಪಿಯ ಸಂಘಟಿತ ಹೋರಾಟ ಇಲ್ಲದೆ ಇದ್ದರೆ ಕೇಸನ್ನು ಅಲ್ಲಿಗೇ ಮುಚ್ಚಿ ಹಾಕುತ್ತಿದ್ದರು. ಹಿಂದೆ ರೇಣುಕಾ ರಾಜೇಂದ್ರ ಅವರು ಒಂದು ಆಪಾದನೆಯಲ್ಲಿ ಸಿಲುಕಿದ್ದರು. ಕೇವಲ 25 ಸಾವಿರ ವ್ಯತ್ಯಾಸದ ಬಗ್ಗೆ ಎ.ಕೆ.ಸುಬ್ಬಯ್ಯ ಅವರು ಮಾಹಿತಿ ಕೊಟ್ಟಿದ್ದರು. ತಕ್ಷಣಕ್ಕೆ ಸಚಿವರು ರಾಜೀನಾಮೆ ಕೊಟ್ಟಿದ್ದರು. ಇವತ್ತಿನ ಪರಿಸ್ಥಿತಿ ಏನಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಕೇಳಿದರು.
ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣ 187 ಕೋಟಿ. ಪರಿಶಿಷ್ಟ ವರ್ಗಗಳ ಸಚಿವರೇ ಇದ್ದು, ಪರಿಶಿಷ್ಟ ವರ್ಗಗಳಿಗೆ ಅನ್ಯಾಯವಾಗಿದೆ. ಎಸ್ಸಿಗಳಿಗಾಗಿ ಮೀಸಲಿದ್ದ ಹಣವನ್ನು ಸಚಿವ ಮಹದೇವಪ್ಪ ಅವರ ಕೈಯಿಂದ ದಲಿತರಿಗೆ ಅನ್ಯಾಯ ಆಗುವಂತೆ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಎಷ್ಟು ಬುದ್ಧಿವಂತಿಕೆ ಇದೆ ಎಂಬುದಕ್ಕೆ ಇದು ಉದಾಹರಣೆ ಎಂದು ಟೀಕಿಸಿದರು. ಇದು ಸರಿಯೇ? ಇದು ದಲಿತರಿಗೆ ಮಾಡುವ ಮೋಸ, ಅನ್ಯಾಯ, ವಂಚನೆ ಅಲ್ಲವೇ ಎಂದು ಕೇಳಿದರು.












Click it and Unblock the Notifications