Chaithra Kundapur; ಸಿಸಿಬಿಯಿಂದ ಚೈತ್ರಾ ಕುಂದಾಪುರ ಸ್ವತ್ತು ಜಪ್ತಿ
ಬೆಂಗಳೂರು, ಸೆಪ್ಟೆಂಬರ್ 17; ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯಿಂದ ಹಣ ಪಡೆದು ವಂಚನೆ ಮಾಡಲಾಗಿದೆ ಎಂಬ ಪ್ರಕರಣ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಈ ಪ್ರಕರಣದ ಮೊದಲ ಆರೋಪಿ, ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರಗೆ ಸೇರಿದ ಸ್ವತ್ತುಗಳನ್ನು ಸಿಸಿಬಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಇತರ ಆರೋಪಿಗನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಚೈತ್ರಾ ಕುಂದಾಪುರ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದು, ಇತರ ಆರೋಪಿಗಳ ವಿಚಾರಣೆ ನಡೆಯುತ್ತಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸರ್ಚ್ ವಾರೆಂಟ್ ಪಡೆದು ಹುಡುಕಾಟ ನಡೆಸಿದ್ದಾರೆ ಎಂದು 'ವಿಜಯವಾಣಿ' ದಿನಪತ್ರಿಕೆ ವರದಿ ಮಾಡಿದೆ. ಉಡುಪಿಯ ಉಪ್ಪೂರು ಶ್ರೀರಾಮ ಸೊಸೈಟಿ ಲಾಕರ್ನಲ್ಲಿದ್ದ ಆಸ್ತಿ ಪತ್ರ, ಬಂಗಾರವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಎಷ್ಟು ಮೌಲ್ಯದ ಆಸ್ತಿಗಳು; 1.8 ಕೋಟಿ ರೂ. ಮೌಲ್ಯದ ಆಸ್ತಿ ಪತ್ರ, 40 ಲಕ್ಷ ನಗದು, 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಚೈತ್ರಾ ಸ್ನೇಹಿತ ಶ್ರೀಕಾಂತ್ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಹಣ, ಚಿನ್ನವನ್ನು ಇಟ್ಟಿದ್ದಳು. ಉಡುಪಿಯ ಹಿರಿಯಡ್ಕದಲ್ಲಿ 2 ಅಂತಸ್ತಿನ ಮನೆಯನ್ನು ಕಟ್ಟಿಸುತ್ತಿದ್ದಳು.
ಸಿಸಿಬಿ ಪೊಲೀಸರು ಬೆಂಗಳೂರಿನ ಮಂಗಮ್ಮನಪಾಳ್ಯದಲ್ಲಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಕಛೇರಿ, ಗೋವಿಂದರಾಜನಗರದಲ್ಲಿರುವ ಸ್ವಾಮೀಜಿ ನಿವಾಸ, ಕೆ. ಕೆ. ಗೆಸ್ಟ್ ಹೌಸ್ನ 2ನೇ ಮಹಡಿಯ 207 ಸಂಖ್ಯೆಯ ರೂಂ ಅಲ್ಲಿ ಮಹಜರು ನಡೆಸಿದ್ದಾರೆ. ಪ್ರಸಾದ್ ಬೈಂದೂರು ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಶನಿವಾರ ಚೈತ್ರಾ ಕುಂದಾಪುರ ಮತ್ತು ಪ್ರಸಾದ್ ಬೈಂದೂರು ನಡೆಸಿದ ಹಣದ ಡೀಲ್ ಬಗೆಗಿನ ಆಡಿಯೋವೊಂದು ವೈರಲ್ ಆಗಿದೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಕಛೇರಿಯಲ್ಲಿಯೇ ಟಿಕೆಟ್ ವಿಚಾರದ ಮಾತುಕತೆ ನಡೆದಿದೆ. ವಂಚನೆ ನಡೆದ ಬಳಿಕ ಚೈತ್ರಾ ಕುಂದಾಪುರ ಇತರ ಆರೋಪಿಗಳು ಅವರ ಕಛೇರಿಗೆ ಸಂಧಾನಕ್ಕೆ ಹೋದ ಸಿಸಿಟಿವಿ ದೃಶ್ಯಾವಳಿಗಳು ಸಹ ವೈರಲ್ ಆಗಿವೆ.
ಚೈತ್ರಾ ಕುಂದಾಪುರ ಸ್ನೇಹಿತ ಶ್ರೀಕಾಂತ್ ಹೆಸರಿನಲ್ಲಿ ಹಿರಿಯಡ್ಕದಲ್ಲಿ 20 ಸೆಂಟ್ಸ್ ಜಾಗ ಖರೀದಿ ಮಾಡಿ 2 ಅಂತಸ್ತಿನ ಮನೆ ಕಟ್ಟಿಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹ ಮಾಡಿದ್ದಾರೆ. ಒಂದನೇ ಅಂತಸ್ತಿನ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಈ ವಂಚನೆ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಸ್ವಾಮೀಜಿಯೊಬ್ಬರು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ನಿರೀಕ್ಷಣಾ ಜಾಮೀನು ಪಡೆಯಲು ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಜಾಮೀನಿಗೆ ಆಕ್ಷೇಪಣೆ ಸಲ್ಲಿಸುವಂತೆ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿದೆ.
ಸಿಸಿಬಿ ವಶದಲ್ಲಿ ಇರುವಾಗ ಗುರುವಾರ ಕುಸಿದು ಬಿದ್ದ ಆರೋಪಿ ಚೈತ್ರಾ ಕುಂದಾಪುರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿ ನೋಡಿಕೊಂಡು ಡಿಸ್ಚಾರ್ಜ್ ಮಾಡಲು ವೈದ್ಯರು ತೀರ್ಮಾನಿಸಿದ್ದಾರೆ. ಸೆಪ್ಟೆಂಬರ್ 23ರ ತನಕ ಕೋರ್ಟ್ ಆಕೆಯನ್ನು ಸಿಸಿಬಿ ಪೊಲೀಸರ ವಶಕ್ಕೆ ನೀಡಿದೆ.
ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 7 ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಎಲ್ಲರನ್ನೂ ಬಂಧಿಸುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದ್ದಾರೆ. ಇದು ವಂಚನೆ ಪ್ರಕರಣವಾದ್ದರಿಂದ ಸಿಸಿಬಿ ತನಿಖೆಗೆ ವಹಿಸಲಾಗಿದೆ. ವಂಚನೆ ಹಣ ಎಲ್ಲಿದೆ? ಎಂಬುದನ್ನು ತನಿಖೆ ಮಾಡಿ, ಜಪ್ತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಚೈತ್ರಾ ಕುಂದಾಪುರ ಆಪ್ತರ ಬಳಿ 81 ಲಕ್ಷ ರೂ. ಹಣ ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಸ್ವಾಮೀಜಿಯೊಬ್ಬರು 1.5 ಕೋಟಿ ರೂ. ಹಣ ಪಡೆದಿದ್ದರು ಎಂಬುದು ಸದ್ಯದ ಸುದ್ದಿ. ಆದರೆ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆದಿದೆ.











Click it and Unblock the Notifications