ಸಿದ್ದರಾಮಯ್ಯ ಆಪ್ತ ಸಿ. ಎಚ್. ವಿಜಯ ಶಂಕರ್ ಬಿಜೆಪಿಗೆ ವಾಪಸ್
ಬೆಂಗಳೂರು, ನವೆಂಬರ್ 05 : ಮಾಜಿ ಸಂಸದ, ಕುರುಬ ಸಮುದಾಯದ ಪ್ರಭಾವಿ ನಾಯಕ ಸಿ. ಎಚ್. ವಿಜಯ ಶಂಕರ್ ಬಿಜೆಪಿಗೆ ವಾಪಸ್ ಆಗುತ್ತಿದ್ದಾರೆ. ಕಾಂಗ್ರೆಸ್ ಸೇರಿದ್ದ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಸೋಲು ಕಂಡಿದ್ದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತರಾದ ಸಿ. ಎಚ್. ವಿಜಯ ಶಂಕರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಸಿದ್ದರಾಮಯ್ಯ ಅವರೇ ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದರು. ಆದರೆ, ಈಗ ಬಿಜೆಪಿಗೆ ಅವರು ವಾಪಸ್ ಆಗುತ್ತಿದ್ದಾರೆ.
"ಮಂಗಳವಾರ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಸೇರುತ್ತಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೊತೆಗೂ ಚರ್ಚೆ ನಡೆಸಲಾಗಿದೆ. ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ತೀರ್ಮಾನ ಕೈಗೊಂಡಿದ್ದೇನೆ" ಎಂದು ಸಿ. ಎಚ್. ವಿಜಯ ಶಂಕರ್ ಹೇಳಿದ್ದಾರೆ.
2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದ ಸಿ. ಎಚ್. ವಿಜಯ ಶಂಕರ್ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸೋಲಿಸಿ ಸಂಸತ್ ಪ್ರವೇಶ ಮಾಡಿದ್ದರು. ಆದರೆ, 2009ರ ಲೋಕಸಭೆ ಚುನಾವಣೆಯಲ್ಲಿ ಎಚ್. ವಿಶ್ವನಾಥ್ ವಿರುದ್ಧ ಸೋಲು ಕಂಡಿದ್ದರು.

ಜಿಲ್ಲೆಗೆ ನಿಮ್ಮ ಅಗತ್ಯವಿದೆ
ಮೈಸೂರಿನಲ್ಲಿ ಅರ್ಜುನ ಅವಧೂತರನ್ನು ಭೇಟಿಯಾದ ಬಳಿಕ ಬಿಜೆಪಿಗೆ ವಾಪಸ್ ಆಗುವುದಾಗಿ ಸಿ. ಎಚ್. ವಿಜಯ ಶಂಕರ್ ಘೋಷಣೆ ಮಾಡಿದ್ದಾರೆ. "ಜಿಲ್ಲೆಗೆ ಹಾಗೂ ರಾಜ್ಯಕ್ಕೆ ನಿಮ್ಮಿಂದ ಅನೇಕ ಕಾರ್ಯಗಳು ಆಗಬೇಕಿದೆ. ಹೀಗಾಗಿ ನೀವು ರಾಜಕೀಯದಲ್ಲಿ ಮುಂದುವರೆಯಬೇಕು ಎಂದು ಅವಧೂತರು ಆಶೀರ್ವಾದ ಮಾಡಿದ್ದಾರೆ" ಎಂದು ಸಿ. ಎಚ್. ವಿಜಯ ಶಂಕರ್ ಹೇಳಿದರು.

2014ರ ಚುನಾವಣೆ ಸೋಲು
2014ರ ಲೋಕಸಭಾ ಚುನಾವಣೆಯಲ್ಲಿ ಸಿ. ಎಚ್. ವಿಜಯ ಶಂಕರ್ ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಸಿಕ್ಕಿತ್ತು. ವಿಜಯ ಶಂಕರ್ಗೆ ಹಾಸನ ಕ್ಷೇತ್ರದ ಟಿಕೆಟ್ ನೀಡಲಾಯಿತು. 1,65,688 ಮತಗಳನ್ನು ಪಡೆದು ಎಚ್. ಡಿ. ದೇವೇಗೌಡರ ವಿರುದ್ಧ ಅವರು ಸೋಲು ಕಂಡರು.

ಬಿಜೆಪಿ ಬಿಟ್ಟ ವಿಜಯ ಶಂಕರ್
"ಬಿಜೆಪಿಯಲ್ಲಿ ನನಗೆ ಅತೀವ ಅನ್ಯಾಯವಾಗಿದೆ. ನನ್ನ ಮಾತೃಪಕ್ಷ ಕಾಂಗ್ರೆಸ್ಗೆ ಸೇರುವೆ" ಎಂದು 2017ರಲ್ಲಿ ಹೇಳಿದ್ದ ಸಿ. ಎಚ್. ವಿಜಯ ಶಂಕರ್ ಹೇಳಿ ಕಾಂಗ್ರೆಸ್ ಸೇರಿದ್ದರು. ಸಿದ್ದರಾಮಯ್ಯ ಆಪ್ತರಾದ ಕಾರಣ 2019ರ ಲೋಕಸಭಾ ಚುನಾವಣೆ ಟಿಕೆಟ್ ಅನ್ನು ಕೊಡಿಸಿದ್ದರು. ಆದರೆ, ಪ್ರತಾಪ್ ಸಿಂಹ ವಿರುದ್ಧ ಸೋಲು ಕಂಡಿದ್ದರು.

ವಿಜಯ ರಾಜಕೀಯ ಜೀವನ
* 2004ರಲ್ಲಿ ಸಂಸತ್ ಪ್ರವೇಶ
* 2009ರಲ್ಲಿ ಎಚ್. ವಿಶ್ವನಾಥ್ ವಿರುದ್ಧ ಸೋಲು
* 2010 ರಿಂದ 2016ರ ತನಕ ವಿಧಾನ ಪರಿಷತ್ ಸದಸ್ಯ
* ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಅರಣ್ಯ ಖಾತೆ ಸಚಿವ
* 2014ರಲ್ಲಿ ಎಚ್. ಡಿ. ದೇವೇಗೌಡರ ವಿರುದ್ಧ ಸೋಲು
* 2019ರಲ್ಲಿ ಪ್ರತಾಪ್ ಸಿಂಹ ವಿರುದ್ಧ ಸೋಲು












Click it and Unblock the Notifications