ಅಗ್ನಿಪಥ ಯೋಜನೆ: ಕೇವಲ 3710 ಕೋಟಿ ಉಳಿಸಲು ದೇಶದ ಭದ್ರತೆಗೆ ಧಕ್ಕೆ- ಎಲ್. ಹನುಮಂತಯ್ಯ
ಬೆಂಗಳೂರು, ಜೂ. 18: ಅಗ್ನಿಪಥ್ ಯೋಜನೆಯಿಂದ ಕೇಂದ್ರ ಸರ್ಕಾರ ಒಂದು ಅಂದಾಜಿನ ಪ್ರಕಾರ ಈ ಯೋಜನೆಯಲ್ಲಿ ಉಳಿಸುವ ಹಣ 3710 ಕೋಟಿ ಮಾತ್ರ. ಇದು ರಕ್ಷಣಾ ಬಜೆಟ್ ನಲ್ಲಿ ಶೇ. 0.7ರಷ್ಟು ಮಾತ್ರ. ಇದನ್ನು ಉಳಿಸಿ ಯಾವ ಸಾಧನೆ ಮಾಡಲು ಹೊರಟಿದ್ದೀರಿ ಎಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಪ್ರಶ್ನಿಸಿದರು.
ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಪ್ರೋತ್ಸಾಹದಿಂದ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, 'ನಿರುದ್ಯೋಗದಂತಹ ಸಮಸ್ಯೆಯನ್ನು ರಾಜಕೀಯ ಪಕ್ಷಗಳು ಬಗೆಹರಿಸಲು ಆಲೋಚಿಸಬೇಕೆ ಹೊರತು, ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿ ದೇಶದ ಆಸ್ತಿ ನಾಶವಾಗುವುದಲ್ಲ. ಆದರೆ ಸರ್ಕಾರ ಇಷ್ಟು ಬೇಜವಾಬ್ದಾರಿಯಿಂದ ನಡೆದುಕೊಂಡಿರುವುದೇ ಈ ಹಿಂಸಾತ್ಮಕ ಪ್ರತಿಭಟನೆಗೆ ಕಾರಣ. ವಿರೋಧ ಪಕ್ಷಗಳಲ್ಲ. ವಿರೋಧ ಪಕ್ಷಗಳ ಮೇಲೆ ಆರೋಪ ಮಾಡುವುದು ಅಕ್ಷಮ್ಯ. ಹಾಗೆ ಮಾಡಿದರೆ ಯುವಕರು ಇನ್ನು ರೊಚ್ಚಿಗೆದ್ದು, ಹೆಚ್ಚು ಹಂಸಾತ್ಮಕ ಚಟುವಟಿಕೆಗೆ ಮುಂದಾಗುತ್ತಾರೆ. ಸರ್ಕಾರಕ್ಕೆ ಆರ್ಥಿಕ ಮುಗ್ಗಟ್ಟಾಗಿದ್ದರೆ ನೇಮಕ ಪ್ರಮಾಣವನ್ನು ಕಡಿಮೆ ಮಾಡಲಿ, ಆದರೆ ಪೂರ್ಣಾವಧಿಯ ನೇಮಕ ಮಾಡಲಿ. ಈ ಹಿಂಸಾತ್ಮಕ ಹೋರಾಟದಿಂದ ಇದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ನಷ್ಟವಾಗಿದೆ. ಇದು ಮುಂದುವರಿದರೆ ಇನ್ನು ಹೆಚ್ಚಾಗಲಿದೆ. ಸರ್ಕಾರ ಈ ಸಮಯದಲ್ಲಿ ವಿವೇಚನೆ ಬಳಸಬೇಕಲ್ಲವೇ ಎಂದು ಅವರು ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ಹೇಳಿ ಕೇಂದ್ರ ಸರ್ಕಾರ ಜೂನ್ 14,2022ರಲ್ಲಿ ಘೋಷಣೆ ಮಾಡಿದ ಅಗ್ನಿಪತ್ ಯೋಜನೆಯನ್ನುಪ್ರಕಟಿಸಿದರು. ಈ ಯೋಜನೆ ಭಾರತೀಯ ಸಶಸ್ತ್ರ ಸೇನೆಗೆ ಆಯ್ಕೆ ಮಾಡಿಕೊಳ್ಳುವ ಯೋಜನೆಯಾಗಿದ್ದು, ಪ್ರಧಾನಮಂತ್ರಿಗಳು ಇದನ್ನು ಘೋಷಿಸಿದ್ದಾರೆ.
ಈ ಯೋಜನೆಯನ್ನು ಕೇಡರ್ ಮ್ಯಾನೇಜ್ಮೆಂಟ್ ಸ್ಕೀಂ ಎಂದು ಕರೆಯಲಾಗುತ್ತದೆ. ಈ ಯೋಜನೆಗೆ ಸರ್ಕಾರ ದೊಡ್ಡ ಪ್ರಚಾರ ನೀಡಿದ್ದರೂ ಇಡೀ ದೇಶದಲ್ಲಿ ಅದರಲ್ಲೂ ಹರಿಯಾಣ, ಬಿಹಾರ, ತೆಲಂಗಾಣದ ಯುವ ಜನಾಂಗ ಈ ಯೋಜನೆ ವಿರೋಧಿಸಿ ಪ್ರತಿಭಟನೆ ಮಾಡುತ್ತಾ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗುತ್ತಿದೆ. ರೈಲುಗಳಿಗೆ ಬೆಂಕಿ ಹಾಕಲಾಗಿದ್ದು, ಸರ್ಕಾರ ಈ ಯೋಜನೆ ಬಗ್ಗೆ ಮರು ಚಿಂತನೆ ಮಾಡಬೇಕಾಗಿದೆ ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಯುವಕರು ಯಾಕೆ ವಿರೋಧಿಸುತ್ತಿದ್ದಾರೆ ಎಂದು ಪರಿಶೀಲನೆ ಮಾಡಿದಾಗ, ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಯೋಧರನ್ನು ಅಗ್ನಿ ವೀರರು ಎಂದು ಕರೆದಿದೆ. ಬಿಜೆಪಿ ಸರ್ಕಾರದ ವಿಶೇಷವಾದ ಕೆಲಸ ಎಂದರೆ ತಮ್ಮ ಯೋಜನೆ ಎಷ್ಟೇ ಪರಿಣಾಮಕಾರಿ ಅಲ್ಲದಿದ್ದರೂ, ನಿಷ್ಪ್ರಯೋಜಕವಾಗಿದ್ದರೂ ಆಕರ್ಷಕ ಹೆಸರು ಇಡುತ್ತದೆ. ಅದಕ್ಕೆ ನಾವು ಅಭಿನಂದನೆ ಸಲ್ಲಿಸಲೇಬೇಕು.
ಇಲ್ಲಿ ನಾಲ್ಕು ವರ್ಷ ಯೋಧರಾಗಿ ಹೊರಗೆ ಬಂದವರು ಏನನ್ನು ಮಾಡಬೇಕು? ಎಂಬ ಪ್ರಶ್ನೆಗೆ ಉತ್ತರ ನೀಡುತ್ತಿಲ್ಲ. ವ್ಯಾಪಕ ವಿರೋಧದ ನಂತರ ಶೇ.10ರಷ್ಟು ಮೀಸಲಾತಿ ನೀಡಲಾಗುವುದು ಎಂದು ಹೇಳಲು ಆರಂಭಿಸಿದ್ದಾರೆ. ಈ ಯೋಜನೆ ಮೂಲಕ ಜನರ ಉದ್ಯೋಗ ಹಕ್ಕನ್ನೇ ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಅನೇಕರ ಪ್ರಕಾರ ನಿರುದ್ಯೋಗ ಸಮಸ್ಯೆ ಬಗೆಹರಿಸುವುದು ಸರ್ಕಾರದ ನಿರ್ಧಾರವಾಗಿದ್ದೇ ಆದರೆ, ಕೇಂದ್ರ ಸರ್ಕಾರದಲ್ಲಿ ಲಕ್ಷಾಂತರ ಉದ್ಯೋಗಗಳು ಖಾಲಿ ಇವೆ. ರಾಜ್ಯಗಳಲ್ಲಿ ಮಂಜೂರಾಗಿರುವ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಅಂದಾಜಿನ ಪ್ರಕಾರ 24 ಲಕ್ಷ ಉದ್ಯೋಗಗಳು ಖಾಲಿ ಇವೆ. ಸರ್ಕಾರಕ್ಕೆ ಉದ್ಯೋಗ ನೀಡುವುದು ಪ್ರಮುಖ ಆದ್ಯತೆಯಾದರೆ ಈ ಉದ್ಯೋಗ ತುಂಬುವ ಕೆಲಸ ಮಾಡಬೇಕು. ಸರ್ಕಾರ ಈ ಬಗ್ಗೆ ಎಲ್ಲ ಚಕಾರ ಎತ್ತುತ್ತಿಲ್ಲ. ಈ ಅಗ್ನಿಪಥ ಯೋಜನೆ ಮೂಲಕ ದೇಶವನ್ನು ಅಗ್ನಿಗೆ ಆಹುತಿಯಾಗುವ ಪರಿಸ್ಥಿತಿ ನಿರ್ಮಾಣ ಮಾಡಿದೆ. ಕಾಂಗ್ರೆಸ್ ಯುವಕರ ಪರವಾಗಿದ್ದು, ಅವರಿಗೆ ಉದ್ಯೋಗ ನೀಡುವುದರ ಪರವಾಗಿದೆ. ಯುವಕರ ಹೋರಾಟಕ್ಕೆ ಬೆಂಬಲವಿದೆ. ಸರ್ಕಾರ ಅವರಿಗೆ ಅರೆಕಾಲಿಕ ಹುದ್ದೆ ನೀಡುವುದನ್ನು ನಿಲ್ಲಿಸಿ, ಪೂರ್ಮಾವಧಿ ಉದ್ಯೋಗ ನೀಡಬೇಕು. ಇದುವರೆಗೂ ಸೇನೆಯ ನೇಮಕಾತಿ ಹೇಗೆ ಮಾಡಲಾಗುತ್ತಿತ್ತೋ ಆಮೂಲಕ ನೇಮಕಾತಿ ಆರಂಭಿಸಬೇಕು. ಈ ಯೋಜನೆ ನಿರುದ್ಯೋಗ ನಿವಾರಣೆ ಮಾಡುವ ಯೋಜನೆ ಇಲ್ಲ ಎಂದು ಹನುಮಂತಯ್ಯ ವಿವರಿಸಿದರು.
4 ವರ್ಷಗಳು ಮಾತ್ರ
ಈ ಅಗ್ನಿ ವೀರರಿಗೆ ಎಷ್ಟು ದಿನ ಉದ್ಯೋಗ ನೀಡಲಾಗುವುದು ಎಂದರೆ ಕೇವಲ 4 ವರ್ಷಗಳು ಮಾತ್ರ. ಈ ಅವಧಿಯಲ್ಲಿ ಸೇವಾನಿಧಿ ಪ್ಯಾಕೇಜ್ ಅನ್ನು 11.71 ಲಕ್ಷ ನಿಗದಿ ಮಾಡಿದೆ. ಸೇನೆಯಲ್ಲಿ ಕೆಲಸ ಮಾಡುವವರಿಗೆ ಪಿಂಚಣಿ ನೀಡದ ಯೋಜನೆ ಎಂದರೆ ಅದು ಈ ಯೋಜನೆಯಾಗಿದೆ. ಮೊದಲ ಹಂತದಲ್ಲಿ 46 ಸಾವಿರ ಯೋಧರ ಆಯ್ಕೆ. ನಮ್ಮ ದೇಶದಲ್ಲಿ ಅತಿಹೆಚ್ಚು ನಿರುದ್ಯೋಗ ಇದೆ ಎಂಬುದು ಎಲ್ಲ ಆಸ್ಥಿಕ ತಜ್ಞರು ಹೇಳುತ್ತಿದ್ದಾರೆ. ಬಿಜೆಪಿ ಕಳೆದ 8 ವರ್ಷಗಳಲ್ಲಿ ಅನೇಕ ವಲಯಗಳಲ್ಲಿ ಅಂಕಿ ಅಂಶಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಹಾಕುತ್ತಿದೆ. ಈ ಎನ್ಡಿಎ ಸರ್ಕಾರವನ್ನು ನೋ ಡಾಟಾ ಅಕೌಂಟ್ ಎಂದೇ ಕರೆಯಬೇಕಾಗಿದೆ. ನಿರುದ್ಯೋಗ ಸಮಸ್ಯೆ, ನಿರುದ್ಯೋಗಿಗಳ ಸಂಖ್ಯೆ ಕುರಿತು ಸಚಿವರು ಅಂಕಿ ಅಂಶ ಇಲ್ಲ ಎಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ 4 ವರ್ಷಕ್ಕೆ ಈ ಯುವಕರನ್ನು ಆಕೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಅವೈಜ್ಞಾನಿಕ, ಉದ್ಯೋಗ ಸಮಸ್ಯೆ ಬಗೆಹರಿಸದ, ಇನ್ನು ಹೆಚ್ಚು ನಿರುದ್ಯೋಗಿಗಳನ್ನಾಗಿ ಮಾಡುವ ಯೋಜನೆ ಇದಾಗಿದೆ. ನಾಲ್ಕು ವರ್ಷಗಳ ನಂತರ ಸೇವಾನಿಧಿ ಪ್ಯಾಕೇಜ್, ಅದರಲ್ಲಿ ಶೇ.25ರಷ್ಟು ಜನರನ್ನು ಉಳಿಸಿಕೊಂಡು ಅವರಿಗೆ ಕೌಶಲ್ಯ ಪ್ರಮಾಣಪತ್ರ ನೀಡುತ್ತಾರೆ. ಈ ಪ್ರಮಾಣಪತ್ರ ಇದ್ದರೆ ಬ್ಯಾಂಕುಗಳ ಮೂಲಕ ಸಾಲ ಸಿಗುತ್ತದೆ, ಸಾಲ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಇದೆ.
ಖಾಸಗಿಯವರಿಗೆ ಸರ್ಕಾರಿ ಸಂಸ್ಥೆಗಳ ಮಾರಾಟ
ನಮ್ಮ ಮೊದಲ ಆಕ್ಷೇಪ ಎಂದರೆ ನಮ್ಮ ದೇಶದಲ್ಲಿ ಈಗಾಗಲೇ ಸಾಕಷ್ಟು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಕರಣ ಮಾಡಲಾಗುತ್ತಿದ್ದು, ಅವುಗಳನ್ನು ಮನಸೋಇಚ್ಛೇ ಬೆಲೆಗೆ ಮಾರುತ್ತಿದೆ. ಇದರಿಂದ 75 ವರ್ಷಗಳಿಂದ ಕಟ್ಟಿದ ಲಾಭದಾಯಕ ಸಂಸ್ಥೆಗಳನ್ನು ಮಾರಾಟ ಮಾಡಲಾಗುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಯಾವುದು ಲಾಭದಾಯಕ ಸಂಸ್ಥೆಗಳನ್ನು ರತ್ನಸಂಸ್ಥೆಗಳೆಂದು ವಿಭಾಗಿಸಿ, ನಷ್ಟದಲ್ಲಿರುವ ಸಂಸ್ಥೆಗಳನ್ನು ಮಾರಾಟ ಮಾಡಲಾಗಿತ್ತು. ಎನ್ ಡಿಎ ಲಾಭದಾಯಕ ಸಂಸ್ಥೆಗಳನ್ನು ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ ಅಥ್ಯಂತ ಲಾಭದಾಯಕ ವಿಮಾನ ನಿಲ್ದಾಣಗಳನ್ನು ಅಧಾನಿ ಸಂಸ್ಥೆಗೆ ನೀಡಲಾಗಿದೆ. ನಮ್ಮ ಸೋನಾ ವ್ಯವಸ್ಥೆಯನ್ನು ಖಾಸಗಿಕರಣ ಮಾಡುತ್ತಿರುವುದು ಅಥ್ಯಂತ ಕಳವಳಕಾರಿಯಾದುದ್ದು.
ರಕ್ಷಣಾ ವ್ಯವಸ್ಥೆಯನ್ನು ಉದ್ಯೋಗ ಸೃಷ್ಟಿ ಯೋಜನೆ ಎಂದು ಪರಿಗಣಿಸಬಾರದು. ಈಗಾಗಲೇ ಅನೇಕ ಯೋಜನೆಗಳಿದ್ದು, ನರೇಗಾಕ್ಕೆ ಪ್ರತಿ ವರ್ಷ 70 ಸಾವಿರ ಕೋಟಿ ವೆಚ್ಚ ಮಾಡಿದ್ದು, ಮೋದಿ ಸರ್ಕಾರದಲ್ಲಿ ಆ ಯೋಜನೆಯಲ್ಲಿ ನೀಡಲಾಗುತ್ತಿದ್ದ ವೇತನವನ್ನು ಕಡಿಮೆ ಮಾಡಿಕೊಂಡು ಬಂದಿದ್ದಾರೆ. ಇನ್ನು ಈ ಮಾದರಿ ಯೋಜನೆಯನ್ನು ಸೇನೆಗೆ ತಂದು ಅಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತಿದೆ. ಸರ್ಕಾರದ ಎಲ್ಲ ವಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು, ಈಗಾಗಲೇ ಸುಮಾರು 25 ಜನರನ್ನು ಜಂಟಿ ಕಾರ್ಯದರ್ಶಿ ಮಟ್ಟದ ಹುದ್ದೆಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದವರನ್ನು ನೇರ ನೇಮಕಾತಿ ಮೂಲಕ ನೇಮಿಸಿಕೊಂಡಿದೆ. ಅಲ್ಲಿ ಯಾರೂ ಆಕ್ಷೇಪಣೆ ಮಾಡಲಿಲ್ಲ. ರಕ್ಷಣಾ ವಲಯದಲ್ಲಿ ಇಂತಹ ಪ್ರಯೋಗದಿಂದ ದೇಶದ ಭದ್ರತೆಗೆ ಅಪಾಯ ತಂದು, ಯೋಧರ ಭವಿಷ್ಯಕ್ಕೆ ಮಾರಕವಾದ ಯೋಜನೆ ಇದು ಎಂದು ಅನೇಕರು ಹೇಳುತ್ತಿದ್ದಾರೆ.
ಪ್ರತಿಭಟನೆ ಹಿಂಸಾತ್ಮಕ ರೂಪ
ಯುವಕರು ಈ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯುತ್ತಿದ್ದು, ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗುತ್ತಿದೆ. ಇನ್ನು ರಕ್ಷಣಾ ವಲಯದಲ್ಲಿ ತಜ್ಞರು ಎಂದು ಕರೆಯಲ್ಪಡುವವರು ಏನು ಹೇಳುತ್ತಿದ್ದಾರೆ ಎಂದು ಗಮನಿಸಬೇಕು. ಈ ಯೋಜನೆ ಬಗ್ಗೆ ಅಧ್ಯಯನ ಮಾಡಿರುವವರು ಹೇಳುವ ಮಾತು ಕೇಳಿದರೆ ನಮಗೆ ಆತಂಕವಾಗುತ್ತದೆ. ಹಲವು ಮಾಜಿ ಸೈನಿಕರು ಈ ಬಗೆಯ ನೇಮಕಾತಿಯನ್ನು ವಿರೋಧಿಸಿದ್ದಾರೆ ಎಂದು ಹನುಮಂತಯ್ಯ ಹೇಳಿದರು.
3 ಲಕ್ಷ ಶಾಶ್ವತ ಯೋಧರು ಉಳಿಯುತ್ತಾರೆ
ಸರ್ಕಾರದಲ್ಲಿ 12 ಲಕ್ಷ ಜನ ಯೋಧರಿದ್ದಾರೆ. ಈಗ 46,000 ಯೋಧರ ನೇಮಕ ಮಾಡಿಕೊಳ್ಳಲಿದ್ದು, ಮುಂದಿನ ವರ್ಷಗಳಲ್ಲಿ ಇದರ ಐದು ಪಟ್ಟು ಜನರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳುತ್ತಾರೆ. ಈಗಿರುವ 12 ಲಕ್ಷ ಯೋಧರಲ್ಲಿ ಶೇ.25ರಷ್ಟು ಜನರನ್ನು ಉಳಿಸಿಕೊಂಡು ಉಳಿದವರನ್ನು ಹೊರಗಾಕುವ ಕೆಲಸ ಮಾಡಿದರೆ ಆಗ ದೇಶದಲ್ಲಿ ಕೇವಲ 3 ಲಕ್ಷ ಶಾಶ್ವತ ಯೋಧರು ಉಳಿಯುತ್ತಾರೆ. ಉಳಿದೆಲ್ಲರು ತಾತ್ಕಾಲಿಕ ಯೋಧರಾಗುತ್ತಾರ. ಉದ್ಯೋಗ ಭದ್ರತೆ, ಪಿಂಚಣಿ ಭದ್ರತೆ ಇಲ್ಲದಿರುವುದಿಲ್ಲ. ಹೀಗಾಗಿ ಇವರು ಯಾವ ಬದ್ಧತೆಯಲ್ಲಿ ಕೆಲಸ ಮಾಡಲಿದ್ದಾರೆ ಎಂಬ ಆಲೋಚನೆಯನ್ನು ಸರ್ಕಾರ ಮಾಡಿಲ್ಲ.
8 ವರ್ಷಗಳ ಹಿಂದೆ ಮೋದಿ ಅವರು ಅಧಿಕಾರಕ್ಕೆ ಬರುವಾಗ ಏಕ ಶ್ರೇಣಿ ಏಕ ಪಿಂಚಣಿ ಎಂಬ ವಿಚಾರ ತಂದು ದೊಡ್ಡ ಚರ್ಚೆ ಮಾಡಿದರು. ಇದರಿಂದ ಎಲ್ಲ ಯೋಧರಿಗೆ ಸಮಾನ ಪಿಂಚಣಿ ಜಾರಿಗೆ ತರುತ್ತೇವೆ ಎಂದರು. 8 ವರ್ಷಗಳ ಬಳಿಕ ಪಿಂಚಣಿ ನೀಡದಿರುವ ಯೋಜನೆ ತಂದಿದ್ದಾರೆ. ಇನ್ನು ಇದು ಉದ್ಯೋಗ ಭದ್ರತೆ ಇಲ್ಲದ ಯೋಜನೆ ಆಗಲಿದೆ. ರಕ್ಷಣಾ ವಲಯ ಉದ್ಯೋಗ ನೀಡುವ ವಲಯವಲ್ಲ. ಇಲ್ಲಿ ಉದ್ಯೋಗ ಖಾತ್ರಿ ಯೋಜನೆ ತರಬಾರದು. ಕೂಡಲೇ ಈ ಯೋಜನೆ ನಿಲ್ಲಿಸಿ, ಯುವಕರನ್ನು ಶಾಂತಗೊಳಿಸಿ, ಈ ವಿಚಾರವನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟು ಎಲ್ಲ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಿರ್ಧಾರ ಕೈಗೊಳ್ಳಬೇಕು. ಆ ಮೂಲಕ ಹೊಸ ಯೋಜನೆ ರೂಪಿಸಬೇಕು ಎಂಬುದು ಕಾಂಗ್ರೆಸ್ ನಿಲುವು ಎಂದು ಹೇಳಿದರು.