ಬಹುಕೋಟಿ ಲಾಟರಿ ಹಗರಣದ ತನಿಖೆ ಸಿಬಿಐ ಕೈಗೆ
ಬೆಂಗಳೂರು, ಮೇ.26: ಬಹುಕೋಟಿ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ರಾಜ್ಯ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಿನ ವಾಕ್ಸಮರ, ಇಬ್ಬರು ಐಪಿಎಸ್ ಅಧಿಕಾರಿಗಳ ಅಮಾನತು, ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿರುವ ಈ ಪ್ರಕರಣದ ತನಿಖೆ ಕೊನೆಗೂ ಸಿಬಿಐ ಕೈಗೆ ವಹಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು. [ಪಾರಿ ರಾಜನ್ ನೀಡಿದ ಫೋನ್ ಕರೆ ವಿವರ]
ಒಂದಂಕಿ ಲಾಟರಿ ಹಗರಣದ ಕಿಂಗ್ ಪಿನ್ ಪಾರಿ ರಾಜನ್ ಜೊತೆ ನಿಕಟ ಸಂಪರ್ಕ ಹೊಂದಿರುವ ಆರೋಪದ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಅಲೋಕ್ಕುಮಾರ್ ಮತ್ತು ಧರಣೇಶ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಇಬ್ಬರು ಅಧಿಕಾರಿಗಳನ್ನು ಸಿಐಡಿ ತಂಡ ವಿಚಾರಣೆಗೊಳಪಡಿಸಿದೆ. [ಲಾಟರಿ ಹಗರಣ ಸಿಬಿಐ ತನಿಖೆಗೆ ಕೊಟ್ಟಿದ್ದೇಕೆ?]

ಜಾರ್ಜ್ ಪ್ರತಿಕ್ರಿಯೆ: ಲಾಟರಿ ದಂಧೆಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ಹಾಗೂ ತೆರಿಗೆ ವಂಚನೆ ಆರೋಪ ಕೇಳಿ ಬಂದಿರುವುದರಿಂದ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸುವುದಾಗಿ ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದರು.
ಆದರೆ, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಮಂಗಳವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಿ ತನಿಖೆಯನ್ನು ಸಿಬಿಐಗೆ ಒಪ್ಪಿಸುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದೆ. [ಒಂದಂಕಿ ಲಾಟರಿ ದಂಧೆ: ಪಾರಿ 'ಕಿಂಗ್ ಪಿನ್' ಅಲ್ಲರೀ]
ಹಗರಣ ಬಯಲಿಗಿದ್ದು ಹೇಗೆ? : ಮಾ.27, 2007ರಿಂದಲೇ ರಾಜ್ಯ ಸರ್ಕಾರದಲ್ಲಿ ಲಾಟರಿ ಮಾರಾಟ ನಿಷೇಧ ಹೇರಲಾಗಿದೆ. ಅಲ್ಲಿಂದ ಇಲ್ಲಿ ತನಕ ನಡೆದ ಎಲ್ಲಾ ಅವ್ಯವಹಾರದ ಬಗ್ಗೆ ತನಿಖೆ ನಡೆಯಲಿ.
ರಾಜ್ಯದಲ್ಲಿ ಇನ್ನೂ ಲಾಟರಿ ದಂಧೆ ಚಾಲ್ತಿಯಲ್ಲಿರುವ ಬಗ್ಗೆ ಸುವರ್ಣ ನ್ಯೂಸ್ ಚಾನೆಲ್ ನಡೆಸಿದ ಕಾರ್ಯಾಚರಣೆಯಲ್ಲಿ ಕಿಂಗ್ ಪಿನ್ ಪಾರಿ ರಾಜನ್ ಹೆಸರು ಕೇಳಿ ಬಂದಿತು. ರಾಜ್ಯ ಸರ್ಕಾರ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡು ಲಾಟರಿ ಕಿಂಗ್ಪಿನ್ ಪಾರಿರಾಜನನ್ನು ಬಂಧಿಸಿತ್ತು. ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು.
ಸದ್ಯ ಅನಾರೊಗ್ಯ ಪೀಡಿತ ಪಾರಿ ರಾಜನ್ ಅವರನ್ನು ಕೋಲಾರದ ಬಂಗಾರಪೇಟೆಯಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿದೆ. [ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅಮಾನತು]
ಅಲೋಕ್ಕುಮಾರ್ ಅವರಂತೆ ಇತರೆ 6 ಮಂದಿ ಐಪಿಎಸ್ ಅಧಿಕಾರಿಗಳು ಪಾರಿರಾಜನ್ ಜತೆ ಸಂಪರ್ಕದಲ್ಲಿರುವುದಕ್ಕೆ ಸಾಕ್ಷಾಧಾರಗಳು ಲಭ್ಯವಾಗಿವೆ. ಜೊತೆಗೆ 40ಕ್ಕೂ ಅಧಿಕ ಅಧಿಕಾರಿಗಳು, ಕೆಲ ರಾಜಕಾರಣಿಗಳು ಭಾಗಿಯಾಗಿರುವ ಸಾಧ್ಯತೆ ಕಂಡು ಬಂದಿದೆ.












Click it and Unblock the Notifications