ಲಾಟರಿ ಹಗರಣ ಸಿಬಿಐ ತನಿಖೆಗೆ ಕೊಟ್ಟಿದ್ದೇಕೆ? ಸಿದ್ದು ಉತ್ತರ ಕೇಳಿ
ಬೆಂಗಳೂರು, ಮೇ.26: ಬಹುಕೋಟಿ ಒಂದಂಕಿ ಲಾಟರಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ ಎಂದು ಸಿದ್ದರಾಮಯ್ಯ ಮಂಗಳವಾರ ಘೋಷಿಸಿದರು. ಇದಕ್ಕೂ ಮುನ್ನ ಒಳ್ಳೆ ಥ್ರಿಲ್ಲರ್ ಸಿನಿಮಾ ರೇಂಜಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿದರು. ತನಿಖೆಯನ್ನು ಸಿಬಿಐಗೆ ವಹಿಸಿದ್ದು ಏಕೆ? ಎಂಬುದಕ್ಕೆ ದೊಡ್ಡ ವ್ಯಾಖ್ಯಾನ ನೀಡಿದರು.
ಸುದ್ದಿಗೋಷ್ಠಿ ಕೊನೆ ತನಕ ಸಿಬಿಐಗೆ ವಹಿಸುತ್ತಾರಾ? ಇಲ್ವಾ? ಎಂಬ ಕುತೂಹಲ ಕಾಯ್ದುಕೊಂಡರು. ಲಾಟರಿ ಹಗರಣದ ಹಿಸ್ಟರಿ, ಮಿಸ್ಟರಿ, ಅಧಿಕಾರಿಗಳ ಜೊತೆಗಿನ ಕೆಮಿಸ್ಟ್ರಿ, ಗೌಡ್ರರ ಫ್ಯಾಮಿಲಿ, ಬಿಜೆಪಿ ಲೀಡರ್ಸುಗಳನ್ನೆಲ್ಲ ಎಳೆದು ತಂದರು.[ಪಾರಿ ಬಾಯ್ಬಿಟ್ಟರೆ ಪೊಲೀಸರಿಗೆ ನಡುಕ]
ಸುದ್ದಿಗೋಷ್ಠಿಯಲ್ಲಿ ಕೇಳಿ ಬಂದ ಮಾತುಗಳ ಸ್ಯಾಂಪಲ್ ಇಲ್ಲಿದೆ:
* ಐಪಿಎಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ. [ಬಹುಕೋಟಿ ಲಾಟರಿ ಹಗರಣದ ತನಿಖೆ ಸಿಬಿಐ ಕೈಗೆ]
* ಸಿಬಿಐ ಎಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್, ಚೋರ್ ಬಚಾವೋ ಇನ್ವೆಸ್ಟಿಗೇಷನ್ ಎಂದು ಜರೆದಿದ್ದ ದೇವೇಗೌಡ್ರು, ಮಾಜಿ ಪ್ರಧಾನಿಗಳು ಇಂದು ಸಿಬಿಐ ಜಪ ಮಾಡುತ್ತಿದ್ದಾರೆ ಏಕೆ? ಎಂದು ಪ್ರಶ್ನಿಸಿದರು.
* ದೇವೇಗೌಡ್ರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಏನು ನನ್ನ ಮೇಲೆ ಆರೋಪ ಮಾದಿದ್ದಾರಲ್ಲ ಅದೆಲ್ಲ ಅಪ್ಪಟ ಸುಳ್ಳು, ರಾಜಕೀಯವಾಗಿ ನನ್ನ ಹಾಗೂ ಜಾರ್ಜ್ ತೇಜೋವಧೆ ಮಾಡಲು ಮಾಡಿರುವ ತಂತ್ರ. ಈ ಬಗ್ಗೆ ಜನರಿಗೆ ಸತ್ಯ ತಿಳಿಯಬೇಕು. [ಪಾರಿ ರಾಜನ್ ನೀಡಿದ ಫೋನ್ ಕರೆ ವಿವರ]

* ಗಣಿ ಹಗರಣ ಮುಚ್ಚಿ ಹಾಕಲು ಎಚ್ ಡಿ ಕುಮಾರಸ್ವಾಮಿ ಅವರು 150 ಕೋಟಿ ರು ಲಂಚ ಪಡೆದಿದ್ದಾರೆ ಎಂದು ಜನಾರ್ದನ ರೆಡ್ಡಿ ಆರೋಪ ಮಾಡಿದ್ದಾಗ ದೇವೇಗೌಡರು ಎಲ್ಲಿದ್ದರು? ಅವಾಗ ಏಕೆ ಸಿಬಿಐ ತನಿಖೆಗಾಗಿ ಆಗ್ರಹಿಸಲಿಲ್ಲ ಎಂದು ಸಿದ್ದರಾಮಯಯ್ಯ ಪ್ರಶ್ನಿಸಿದರು.
* ಜನರಿಗೆ ಇವರುಗಳ ಷಡ್ಯಂತ್ರ ಏನು ಎಂಬುದು ತಿಳಿಯಲಿ. ಸುಮ್ಮನೆ ನನ್ನ ಮೇಲೆ ಜಾರ್ಜ್ ಮೇಲೆ ನಿರಾಧಾರ ಆರೋಪ ಮಾಡುತ್ತಿದ್ದಾರೆ. ಜನರಿಗೆ ತಪ್ಪು ಅಭಿಪ್ರಾಯ ಮೂಡಬಾರದು.
* ಭಟ್ ಆಯೋಗ ಈ ಹಿಂದೆ ಲಾಟರಿ ದಂಧೆಯನ್ನು ಸಿಬಿಐಗೆ ವಹಿಸುವಂತೆ ಮಾಡಿದ್ದ ಶಿಫಾರಸ್ಸನ್ನು ದೇವೇಗೌಡ ಅವರು ಕಡೆಗಣಿಸಿದ್ದು ಏಕೆ? [ಒಂದಂಕಿ ಲಾಟರಿ ದಂಧೆ: ಪಾರಿ 'ಕಿಂಗ್ ಪಿನ್' ಅಲ್ಲರೀ]
* ಮಾ. 27, 2007ರಂದು ಕರ್ನಾಟಕದಲ್ಲಿ ಲಾಟರಿ ನಿಷೇಧ ಹೇರಲಾಯಿತು. ಎಂಎಸ್ಐಎಲ್ ಸೇರಿದಂತೆ ಹಲವಾರು ರಾಜ್ಯಗಳ ಲಾಟರಿಗಳು ಮಾರಾಟವಾಗುತ್ತಿತ್ತು.
* ಅದರೆ, ಲಾಟರಿ ಮಾರಾಟದಿಂದ ಸರ್ಕಾರಕ್ಕೆ 100ಕೋಟಿ ರು.ಗೂ ಕಡಿಮೆ ಆದಾಯ ಬರುತ್ತಿತ್ತು. ಲಾಟರಿ ಏಜೆನ್ಸಿಗಳಿಂದ ತೆರಿಗೆ ವಂಚನೆ ಆರೋಪ ಕೂಡಾ ಕೇಳಿ ಬಂದಿತ್ತು.
* ಮೊದಲು ರಾಮನಗರ, ಮಂಡ್ಯ ಸಹಕಾರ ಬ್ಯಾಂಕುಗಳಲ್ಲಿ ನಡೆದ ಹಣ ದುರುಪಯೋಗ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಿದೆ. [ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅಮಾನತು]
* ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ, ಡಿಕೆ ರವಿ ಪ್ರಕರಣ, ಕಾರ್ಕಳ ದೇಗುಲದ ಪ್ರಕರಣ ಹೀಗೆ ಅನೇಕ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿದೆ.
* ಕರ್ನಾಟಕ ಪೊಲೀಸರು ಸಮರ್ಥರಿದ್ದಾರೆ. ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ವಹಿಸಿದರೆ ಅರ್ಥವಿರುವುದಿಲ್ಲ. ವಿಪಕ್ಷಗಳು ಸಿಬಿಐಯನ್ನು ಅವಹೇಳನ ಮಾಡುತ್ತ್ತಿದ್ದವರು ಈಗ ಇದ್ದಕ್ಕಿದ್ದಂತೆ ಸಿಬಿಐ ಜಪ ಮಾಡುತ್ತಿದ್ದಾರೆ ಏಕೆ? ಅವರ ಉದ್ದೇಶ ಏನಿದೆ? ಎಂದು ಪ್ರಶ್ನಿಸಿದರು. [ಲಾಟರಿ ಹಗರಣ ಸಿಬಿಐ ತನಿಖೆಗೆ : ಯಾರು, ಏನು ಹೇಳಿದರು?]
* ಸುವರ್ಣ ನ್ಯೂಸ್ 24/7 ನಡೆಸಿದ ಕಾರ್ಯಾಚರಣೆಯಿಂದ ಲಾಟರಿ ದಂಧೆ ಕಿಂಗ್ ಪಿನ್ ಪಾರಿ ರಾಜನ್ ಹೆಸರು ಬೆಳಕಿಗೆ ಬಂದಿತು.
* ಲಾಟರಿ ವಿಚಕ್ಷಣ ದಳ ಈ ಬಗ್ಗೆ ವರದಿ ನೀಡಿದ ನಂತರ ಈ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸಿಐಡಿ ತನಿಖೆಗೆ ಆದೇಶ ಹೊರಡಿಸಿತ್ತು.
* ಸಿಐಡಿ ಮಧ್ಯಂತರ ಆದೇಶದಲ್ಲಿ ಐಜಿಪಿ ಮಟ್ಟದ ಆಧಿಕಾರಿಗಳಾದ ಅಲೋಕ್ ಕುಮಾರ್ ಹಾಗೂ ಧರಣೇಶ್ ಅವರನ್ನು ಅಮಾನತು ಮಾಡಲಾಗಿದೆ. [ಸಿಐಡಿ ಹಾಗೂ ಸಿಬಿಐ ತನಿಖೆ ವ್ಯತ್ಯಾಸವೇನು?]
* ಮಾರ್ಚ್27, 2007 ರಂದು ರಾಜ್ಯದಲ್ಲಿ ಅಧಿಕೃತ ಲಾಟರಿ ನಿಷೇಧಿಸಿದ ದಿನದಿಂದ ಹಾಗೂ ಈವರೆಗೆ, ನಿರಂತರವಾಗಿ ನಡೆಯುತ್ತಿದೆ ಎನ್ನಲಾದ ಲಾಟರಿ ಹಗರಣ ಕುರಿತು ತನಿಖೆ ನಡೆಸಲು ಈ ಪ್ರಕರಣವನ್ನು ಸಿಬಿಐಗೆ ವಹಿಸಲು ನಿರ್ಧರಿಸಲಾಗಿದೆ.
* ಈ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ರಕ್ಷಿಸುವುದಿಲ್ಲ. ಮೈಕಲ್, ಮಾರ್ಟಿನ್ ಯಾರೇ ಇರಲಿ ಎಲ್ಲರನ್ನು ವಿಚಾರಣೆಗೆ ಒಳಪಡಿಸಲಿ. ಇದು ಅಂತಾರಾಜ್ಯ ಅವ್ಯವಹಾರವಾಗಿದ್ದರಿಂದ ಸಿಬಿಐಗೆ ವಹಿಸುವುದು ಸೂಕ್ತ ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಸಿದ್ದರಾಮಯ್ಯ ಅವರು ತಮ್ಮ ನಿರ್ಣಯವನ್ನು ಸಮರ್ಥಿಸಿಕೊಂಡರು.












Click it and Unblock the Notifications