ಸಿಐಡಿ ಮತ್ತು ಸಿಬಿಐ ನಡುವಿನ ವ್ಯತ್ಯಾಸವೇನು?
ಬೆಂಗಳೂರು, ಮಾ. 19: ರಾಜ್ಯ ಸರ್ಕಾರ ರವಿ ಸಾವಿನ ಪ್ರಕರಣನ್ನು ಸಿಬಿಐಗೆ ವಹಿಸಲ್ಲ ಎಂದು ಹೇಳಿದೆ. ಅಂದರೆ ಪ್ರಕರಣದ ತನಿಖೆಯನ್ನು ಕ್ರಿಮಿನಲ್ ಇನ್ ವೆಸ್ಟಿಗೇಶನ್ ಡಿಪಾರ್ಟ್ ಮೆಂಟ್ (ಅಪರಾಧ ತನಿಖಾ ದಳ, ಸಿಐಡಿ) ನಡೆಸಲಿದೆ.
ಸಚಿವ ದಿನೇಶ್ ಗುಂಡೂರಾವ್ ಸಿಐಡಿ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದ್ದು ತನಿಖೆಯನ್ನು ಅದರ ಕೈಗೆ ಒಪ್ಪಿಸಲಾಗಿವುದು ಎಂದು ಹೇಳಿದ್ದಾರೆ. ಹಾಗಾದರೆ ಸಿಐಡಿ ಮತ್ತು ಸಿಬಿಐ ನಡುವಿನ ವ್ಯತ್ಯಾಸಗಳೇನು? ತನಿಖೆ ನಡೆಸುವ ರೀತಿ ಎಂಥದ್ದು? ವರದಿಯನ್ನು ಯಾರು ಯಾರಿಗೆ ನೀಡಬೇಕು? ಎಂಬ ಎಲ್ಲ ಸಂಗತಿಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.[ಸಿಬಿಐ ತನಿಖೆ ಸರಕಾರ ಏಕೆ ಬೇಡ ಎನ್ನುತ್ತಿದೆ ಎಂದರೆ...]

1974 ರಲ್ಲಿ ರಾಜ್ಯ ಸರ್ಕಾರದ ಸ್ವತಂತ್ರ ಸಂಸ್ಥೆಯಾಗಿ ಸಿಐಡಿಯನ್ನು ನೇಮಕ ಮಾಡಿಕೊಳ್ಳಲಾಯಿತು. ವಿಶೇಷ ಪ್ರಕರಣಗಳು ಮತ್ತು ಪೊಲೀಸ್ ಇಲಾಖೆಯನ್ನು ಮೀರಿದ ಪ್ರಕರಣಗಳನ್ನು ಸಿಐಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿತ್ತು ಅಥವಾ ಇದಕ್ಕೆ ವಹಿಸಲಾಗುತ್ತಿತ್ತು. ಇಂದಿಗೂ ಇದೇ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಸಿಐಡಿ ತನಿಖೆ ವಿರೋಧ ಪಕ್ಷಗಳಿಗೆ ಯಾಕೆ ಬೇಡ?
ಸರ್ಕಾರ ಆರಂಭದಲ್ಲಿಯೇ ರವಿ ಸಾವನ್ನು ಆತ್ಮಹತ್ಯೆ ಎಂದು ಹೇಳಿತ್ತು. ಹಾಗಾಗಿ ವಿರೋಧ ಪಕ್ಷಗಳಿಗೆ ರಾಜ್ಯ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ತನಿಖೆಯ ಹಾದಿಯನ್ನು ತಪ್ಪಿಸಲಾಗುತ್ತಿದೆ ಎಂಬ ಗಂಭೀರ ಆರೋಪ ವಿಪಕ್ಷಗಳದ್ದು. ಸಿಐಡಿಯನ್ನು ಸ್ವತಂತ್ರ ಸಂಸ್ಥೆ ಎಂದು ಪರಿಗಣಿಸಿದ್ದರೂ ಪ್ರಮುಖ ಅಧಿಕಾರಿಗಳನ್ನು ನೇಮಿಸುವುದು ರಾಜ್ಯ ಸರ್ಕಾರವೇ ಎಂಬುದು ವಿಪಕ್ಷಗಳ ಆತಂಕಕ್ಕೆ ಕಾರಣ. ಈ ಎಲ್ಲ ಸಂಗತಿಗಳು ತನಿಖೆಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬುದು ವಿರೋಧ ಪಕ್ಷಗಳ ಒತ್ತಾಯ.[ಡಿಕೆ ರವಿ ಕೇಸ್: ಸಿಐಡಿ ತನಿಖೆ ಎತ್ತ ಸಾಗಿದೆ?ಯಾರು ಟಾರ್ಗೆಟ್]
ಸಿಬಿಐ ತನಿಖೆ ಪರಿಣಾಮಕಾರಿ ಎನ್ನಲು ಕಾರಣ?
ಸಿಬಿಐ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ. ಸಿಬಿಐಗೆ ವಹಿಸಿದರೆ ಅದು ನಿಷ್ಪಕ್ಷಯುತವಾಗಿ ತನಿಖೆ ನಡೆಸುತ್ತದೆ. ರಾಜ್ಯ ಸರ್ಕಾರ ಅದರ ಮೇಲೆ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ. ಅಲ್ಲದೇ ಇದರ ವ್ಯಾಪ್ತಿಯೂ ವಿಶಾಲವಾದ್ದರಿಂದ ತನಿಖೆ ಸ್ಪಷ್ಟ ದಿಕ್ಕಿನಲ್ಲಿ ಸಾಗುವುದು ಎಂಬುದು ವಿಪಕ್ಷಗಳ ನಂಬಿಕೆ.
ಯಾರು ಸಿಬಿಐ ತನಿಖೆಗೆ ಆದೇಶ ನೀಡಬಹುದು?
ರಾಜ್ಯ ಅಥವಾ ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಬಹುದು. ಪೊಲೀಸ್ ಅಧಿಕಾರಿಗಳು ರಾಜ್ಯ ಸರ್ಕಾರದ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಕಂಡುಬಂದರೆ ಸುಪ್ರೀಂ ಕೋರ್ಟ್ ಅಥವಾ ಹೈ ಕೋರ್ಟ್ ಸಹ ಸಿಬಿಐ ತನಿಖೆಗೆ ಆದೇಶ ನೀಡಬಹುದು. [ಖಡಕ್ ಆಫೀಸರ್ ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]
ಶಾರದಾ ಚಿಟ್ ಫಂಡ್ ಹಗರಣದ ತನಿಖೆ ಹಾದಿ ತಪ್ಪುತ್ತಿದ್ದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಪ್ರಭಾವ ಬೀರುತ್ತಿದೆ ಎಂಬುದನ್ನು ಮನಗಂಡ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಸಾಮಾನ್ಯವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾದ ಸಮಯದಲ್ಲಿ ಇಂಥ ಆದೇಶಗಳು ಹೊರಬೀಳುತ್ತವೆ.
ರಾಜ್ಯ ಸರ್ಕಾರಗಳು, ಇದು ತಮ್ಮ ವ್ಯಾಪ್ತಿಗೆ ಮೀರಿದ ಪ್ರಕರಣ ಎಂದು ಕಂಡುಬಂದ ಸಂದರ್ಭದಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡುತ್ತದೆ. ತನಿಖೆಗೆ ಆಗಮಿಸುವ ಸಿಬಿಐ ತಂಡಕ್ಕೆ ರಾಜ್ಯ ಪೊಲೀಸ್ ಇಲಾಖೆಯ ಅನುಮತಿ ಪಡೆಯುವ ಅಗತ್ಯ ಇರುವುದಿಲ್ಲ.
ಬಹಳ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಅಥವಾ ಅಕ್ರಮ ನಡೆದಿದೆ. ಒಂದೇ ಪ್ರಕರಣ ವಿಭಿನ್ನ ತಿರುವುಗಳನ್ನು ಹೊಂದಿದೆ. ದೊಡ್ಡದೊಡ್ಡವರು ಭಾಗಿಯಾಗಿದ್ದಾರೆ ಎಂದು ಕಂಡುಬಂದರೆ ಕೇಂದ್ರ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸುತ್ತದೆ.
ಕೇಂದ್ರ ಸರ್ಕಾರ ಕೂಡಲೇ ಸಿಬಿಐಗೆ ವಹಿಸಲ್ಲ
ಸಾಮಾನ್ಯವಾಗಿ ಕೇಂದ್ರ ಸರ್ಕಾರ ಸಿಬಿಐಗೆ ಪ್ರಕರಣವನ್ನು ಕೂಡಲೇ ವಹಿಸಲ್ಲ. ರಾಜ್ಯ ಸರ್ಕಾರಗಳ ವರದಿ ಅಥವಾ ಶಿಫಾರಸಿಗಾಗಿ ಕಾಯುತ್ತವೆ. ಒಂದು ವೇಳೆ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಿದರೆ ಕೇಂದ್ರ ಮಧ್ಯೆ ಮೂಗು ತೂರಿಸುವುದಿಲ್ಲ.
ರಾಜ್ಯ ಸರ್ಕಾರಗಳು ವಿಳಂಬ ಮಾಡುವುದು ಯಾಕೆ?
ಪೊಲೀಸ್ ಇಲಾಖೆಯೇ ತನಿಖೆ ನಡೆಸಲಿ ಎಂದು ರಾಜ್ಯ ಸರ್ಕಾರ ಬಯಸುತ್ತದೆ. ಒಂದು ವೇಳೆ ತಕ್ಷಣಕ್ಕೆ ಸಿಬಿಐ ಗೆ ವಹಿಸಿದರೆ ತನ್ನ ಪೊಲೀಸ್ ಇಲಾಖೆ ಮೇಲೆ ತನಗೆ ನಂಬಿಕೆಯಿಲ್ಲ ಎಂದು ತೋರಿಸಿದಂತಾಗುತ್ತದೆ ಎಂಬ ಅಳಕು ರಾಜ್ಯ ಸರ್ಕಾರಕ್ಕೆ ಕಾಡುತ್ತದೆ. ಪೊಲೀಸ್ ಇಲಾಖೆ ಕೈ ಚೆಲ್ಲಿ ಕುಳಿತ ಮೇಲೆ ರಾಜ್ಯ ಸರ್ಕಾರ ಬೇರೆ ಹಾದಿ ನೋಡಬಹುದು.
ಸಿಬಿಐ ತನಿಖೆಯಲ್ಲಿ ರಾಜಕೀಯ!
ಸಿಬಿಐ ಸಹ ಕೇಂದ್ರ ಸರ್ಕಾರದ ಪ್ರಭಾವಕ್ಕೆ ಒಳಗಾಗಿದೆ ಮತ್ತು ಒಳಗಾಗುತ್ತಿದೆ ಎಂಬ ಆರೋಪಗಳು ಮೊದಲಿನಿಂದಲೂ ಇದೆ. ಇದನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ದಾಳವಾಗಿ ಬಳಸಿಕೊಂಡ ರೀತಿಯ ಉದಾಹರಣೆಗಳು ಇವೆ. ಅಂತಿಮವಾಗಿ ನ್ಯಾಯಾಲಯದ ತೀರ್ಮಾನ ಕೊನೆಯದಾಗಿದ್ದು ತನಿಖೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆಯುತ್ತದೆ.












Click it and Unblock the Notifications