Cauvery Dispute: ಇಂದು ದೆಹಲಿಯಲ್ಲಿ ಕಾವೇರಿ ನಿಯಂತ್ರಣ ಸಭೆ: ರಾಜ್ಯಕ್ಕೆ ಮತ್ತೆ ಆತಂಕ
ಕರ್ನಾಟಕದ ಪ್ರತಿರೋಧದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಯುತ್ತಿದೆ. ಈ ಬೆನ್ನಲ್ಲೇ ಇಂದು (ಬುಧವಾರ) ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಸಭೆ ನಡೆಯಲಿದ್ದು, ರಾಜ್ಯಕ್ಕೆ ಆತಂಕ ಶುರುವಾಗಿದೆ.
ಕಳೆದ ಬಾರಿ ಸಭೆಯಲ್ಲಿ ತಮಿಳುನಾಡಿಗೆ 18 ದಿನ ಪ್ರತಿದಿನ ಮೂರು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿತ್ತು. ರಾಜ್ಯದ ಅಧಿಕಾರಿಗಳು ಬರ ಪರಿಸ್ಥಿತಿ ಇದೆ ಎಂದು ವಾದಿಸಿದ್ದರೂ, ನೀರು ಬಿಡಲು ಆದೇಶ ನೀಡಿದ್ದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು, ಇಂದಿನ ಸಭೆಯಲ್ಲಿ ಮತ್ತೆ ಯಾವ ಆದೇಶ ನೀಡುತ್ತದೆ ಎನ್ನುವ ಆತಂಕ ಈ ಕಾವೇರಿ ಜಲಾನಯನ ಭಾಗದ ರಾಜ್ಯದ ರೈತರಿಗೆ ಶುರುವಾಗಿದೆ.

ಇಂದಿನ ಸಭೆಯಲ್ಲಿ ಕರ್ನಾಟಕದ ಪರವಾಗಿ ಕಾವೇರಿ ನೀರಾವಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಭಾಗಿಯಾಗಲಿದ್ದಾರೆ. ತಮಿಳುನಾಡು, ಪುದುಚೆರಿ ಮತ್ತು ಕೇರಳ ರಾಜ್ಯಗಳ ವಕೀಲರು ಮತ್ತು ಅಧಿಕಾರಿಗಳು ಕೂಡ ಇಂದಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದ ಪರಿಸ್ಥಿತಿ ವಿವರಿಸಲು ಅಧಿಕಾರಿಗಳ ಸಿದ್ಧತೆ
ಸಭೆಯಲ್ಲಿ ಕರ್ನಾಟಕದಲ್ಲಿನ ಮಳೆ ಕೊರತೆ, ಬರ ಪರಿಸ್ಥಿತಿಯ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾವೇರಿ ಜಲಾನಯನ ವ್ಯಾಪ್ತಿಯಲ್ಲೇ ಹಲವು ರಾಜ್ಯಗಳಲ್ಲಿ ಬರ ಪರಿಸ್ಥಿತಿ ಇದೆ. ಕೇಂದ್ರದ ತಂಡ ಕೂಡ ರಾಜ್ಯದಲ್ಲಿ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿದೆ. ಸಭೆಯಲ್ಲಿ ಈ ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿ ಸಂಕಷ್ಟದ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಎರಡು ಬಾರಿ ಬಂದ್ ಮಾಡಿದ ಬಳಿಕವೂ ಇನ್ನೂ ಪ್ರತಿಭಟನೆ ಮುಂದುವರೆದಿದೆ. ರೈತಪರ ಸಂಘಟನೆಗಳು, ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮುಂದುವರೆಸಿವೆ.
ಇಂದಿನ ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸಲು ಮತ್ತೆ ಆದೇಶ ನೀಡಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಕೃಷಿಗೆ ಇರಲಿ ಕುಡಿಯುವ ನೀರಿಗೂ ಈಗಿರುವ ನೀರು ಸಾಕಾಗಲ್ಲ ಎನ್ನುವಂತಾಗಿದ್ದು ಮತ್ತೆ ತಮಿಳುನಾಡಿಗೆ ನೀರು ಹರಿದರೆ ಮಂಡ್ಯ, ಮೈಸೂರು, ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳಿಗೆ ಭಾರಿ ಸಮಸ್ಯೆಯಾಗಲಿದೆ.
ತಮಿಳುನಾಡಿನ ಬೇಡಿಕೆ ಏನು?
ಬುಧವಾರ ನಡೆಯುವ ಸಭೆಯಲ್ಲಿ ಜಲಾಶಯಗಳಲ್ಲಿ ನೀರಿನ ಪ್ರಮಾಣ, ಒಳಹರಿವಿನ ಮಾಹಿತಿ ಪಡೆದು ನಂತರ ನೀರು ಬಿಡುವ ಬಗ್ಗೆ ಆದೇಶ ಮಾಡುವ ಸಾಧ್ಯತೆ ಇದೆ. ತಮಿಳುನಾಡು ಸರ್ಕಾರ ಪ್ರತಿದಿನ 13000 ಕ್ಯೂಸೆಕ್ ನೀರು ಹರಿಸುವಂತೆ ಸಭೆಯಲ್ಲಿ ಒತ್ತಾಯ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಸೆಪ್ಟೆಂಬರ್ 29ರಂದು ನಡೆದ ಸಭೆಯಲ್ಲಿ ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ ನೀಡಿತ್ತು. ಅಕ್ಟೋಬರ್ 15ಕ್ಕೆ ಆದೇಶದ ಅವಧಿ ಮುಗಿಯಲಿದ್ದು, ಇಂದು ನಡೆಯುವ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.












Click it and Unblock the Notifications