ಜಾತಿ ಗಣತಿಯನ್ನು ಕಸದ ಬುಟ್ಟಿಗೆ ಹಾಕಲಿದೆಯಾ ಎಚ್ಡಿಕೆ ಸರಕಾರ?
ಬೆಂಗಳೂರು, ಜುಲೈ 30: ತೀವ್ರ ವಿವಾದ, ಕುತೂಹಲ ಸೃಷ್ಟಿಸಿದ್ದ ಜಾತಿ ಗಣತಿ 2015ರ ವರದಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡದಿರುವ ಸಾಧ್ಯತೆ ಹೆಚ್ಚಾಗಿದೆ.
ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ತಮ್ಮ ಮಹತ್ವಾಕಾಂಕ್ಷೆಯ ಜಾತಿ ಗಣತಿಗೆ ಚಾಲನೆ ನೀಡಿದ್ದರು.
ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2?
ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 20 ದಿನಗಳ ಕಾಲ ನಡೆಸಲಾಗಿದೆ ಎನ್ನಲಾಗಿತ್ತು. ಅದರ ವರದಿ ಸಲ್ಲಿಕೆಯಾದರೂ ಬಹಿರಂಗಪಡಿಸಲು ಸರ್ಕಾರ ಧೈರ್ಯ ತೋರಿರಲಿಲ್ಲ.
ಅದರ ಬೆನ್ನಲ್ಲೇ ಸಾಕಷ್ಟು ವಿವಾದಗಳು ಸೃಷ್ಟಿಯಾಗಿದ್ದವು. ಜಾತಿ ಗಣತಿ ಸಮರ್ಪಕವಾಗಿ ನಡೆದಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು.
ಬಹುನಿರೀಕ್ಷಿತ ಜಾತಿ ಗಣತಿಗೆ ಸಿದ್ದರಾಮಯ್ಯ ಎಳ್ಳುನೀರು?
ಆದರೆ, ಸಲ್ಲಿಕೆಯಾದ ವರದಿ ಸೋರಿಕೆಯಾಗಿದ್ದು, ತೀವ್ರ ಸಂಚಲನ ಉಂಟು ಮಾಡಿತ್ತು. ಜಾತಿ ಗಣತಿ ವಿರುದ್ಧ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು.
ಬಹಿರಂಗ ಅನುಮಾನ
ಸಾಮಾಜೋ ಆರ್ಥಿಕ ಗಣತಿ ಅಡಿಯಲ್ಲಿ ಸಂಗ್ರಹಿಸಿದ ಮಾಹಿತಿಗಳ ವರದಿಯನ್ನು ಬಹಿರಂಗಪಡಿಸುವುದು ಅನುಮಾನವಾಗಿದೆ.
ಹಿಂದಿನ ಸರ್ಕಾರವು ಬೆಂಗಳೂರು ಒಂದರಲ್ಲಿಯೇ ಜಾತಿ ಮಾಹಿತಿ ಸಂಗ್ರಹಕ್ಕೆ ನೀಡಿದ್ದ ಗಡುವನ್ನು ಮೂರು ಬಾರಿ ವಿಸ್ತರಿಸಿತ್ತು. ಅಲ್ಲದೆ, ಸಮೀಕ್ಷೆಗೆ ಯಾವುದೇ ಸೂಕ್ತ ವೈಜ್ಞಾನಿಕ ಮಾದರಿಯನ್ನು ಅನುಸರಿಸಿಲ್ಲ ಎಂದು ಹಾಲಿ ಸಮ್ಮಿಶ್ರ ಸರ್ಕಾರದ ಸಚಿವರೊಬ್ಬರು ತಿಳಿಸಿದ್ದಾರೆ.
ಜಾತಿ ಹೇಳಲು ಒಲ್ಲೆ ಎನ್ನುವ ಜನರು
ಜಾತಿ ಗಣತಿಗೆಂದು ಬಂದ ಅಧಿಕಾರಿಗಳಿಗೆ ಜನರು ತಮ್ಮ ಜಾತಿಯನ್ನು ಬಹಿರಂಗಪಡಿಸಲು ಹಿಂದೇಟು ಹಾಕಿರುವ ಘಟನೆಗಳು ನಡೆದಿವೆ.
ಬೆಂಗಳೂರಿನಂತಹ ನಗರದಲ್ಲಿರುವ ದಲಿತರು ತಮ್ಮ ಜಾತಿಯನ್ನು ಬಹಿರಂಗಪಡಿಸಿದರೆ ಇಲ್ಲಿ ಇರಲು ಜಾಗ ಸಿಗುವುದಿಲ್ಲ ಎಂಬ ಭಯದಿಂದ ಅದಕ್ಕೆ ಹಿಂದೇಟು ಹಾಕಿದ್ದಾರೆ.
ಹಳ್ಳಿಗಳಲ್ಲಿಯೂ ಜನರು ಜಾತಿ ಬಹಿರಂಗಪಡಿಸಲು ಭಯಪಡುತ್ತಿದ್ದಾರೆ. ಇದರಿಂದ ತಮಗೆ ವಿವಿಧ ರೀತಿಯ ತೊಂದರೆಗಳಾಗಬಹುದು ಎಂಬ ಅಂಜಿಕೆ ಅವರನ್ನು ಕಾಡುತ್ತಿದೆ.
ಜಾತಿ ಗಣತಿಯಲ್ಲಿ ವ್ಯತ್ಯಾಸ, 175 ಕೋಟಿ ಹೊಳೆಯಲ್ಲಿ ಕಿವುಚಿದ ಹುಣಸೆ!
ಕುಮಾರಸ್ವಾಮಿ ಮೇಜಿನ ಮೇಲೆ
ಜಾತಿ ಗಣತಿ ವರದಿ ಇನ್ನೂ ಪೂರ್ಣಗೊಂಡು ಸರ್ಕಾರಕ್ಕೆ ಸಲ್ಲಿಕೆಯಾಗಬೇಕಿದೆ ಎಂದು ಹಿಂದುಳಿದ ವರ್ಗಗಳ ಸಚಿವ ಸಿ. ಪುಟ್ಟರಂಗಶೆಟ್ಟಿ ಹೇಳಿದ್ದಾರೆ.
ಮಾಹಿತಿ ಸೋರಿಕೆಯಂತಹ ಅನೇಕ ಅಡ್ಡಿಗಳು ಸಮೀಕ್ಷೆಗೆ ತೊಡಕುಂಟುಮಾಡಿವೆ ಎಂದಿರುವ ಪುಟ್ಟರಂಗಶೆಟ್ಟಿ, ಶೀಘ್ರದಲ್ಲಿಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಮತ್ತೆ ಹೊಸ ಗಣತಿ?
ಈ ಮಹತ್ವಾಕಾಂಕ್ಷಿ ಯೋಜನೆಯು ಯಾವುದೇ ವಿವಾದ ಮತ್ತು ಗೊಂದಲಕ್ಕೆ ಎಡೆಮಾಡಿಕೊಡದಂತೆ ಕ್ರಮಬದ್ಧವಾಗಿ ಹಾಗೂ ವ್ಯವಸ್ಥಿತವಾಗಿರಲು ಸಂಪೂರ್ಣ ಹೊಸದಾಗಿ ಸಮೀಕ್ಷೆ ನಡೆಸಲು ಸರ್ಕಾರ ಚಿಂತನೆ ನಡೆಸಿದೆ ಎಂದೂ ಹೇಳಲಾಗುತ್ತಿದೆ.
ಲೋಕಾಯುಕ್ತದಿಂದ ಜಾತಿಗಣತಿವರೆಗೆ ಸೋರಿಕೆ ಸಾಮ್ರಾಜ್ಯ!
ಜನರಿಗೆ ಹಕ್ಕಿದೆ: ಬಿಜೆಪಿ
ಸಮೀಕ್ಷೆಯ ಪ್ರಸ್ತುತ ಸ್ಥಿತಿಗತಿ ಕುರಿತು ಸೂಕ್ತವಾದ ಮಾಹಿತಿ ನೀಡುವಂತೆ ಬಿಜೆಪಿ ಆಗ್ರಹಿಸಿದೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕೆ ಅದರ ರಾಜಕೀಯ ಹಿತಾಸಕ್ತಿಯೇ ಇದರಲ್ಲಿ ಮುಖ್ಯವಾಗಿದೆ ಎಂದು ಆರೋಪಿಸಿದೆ.
ವೈಜ್ಞಾನಿಕ ಸಮೀಕ್ಷೆ ಎಂದು ಹೇಳಿಕೊಂಡು 189 ಕೋಟಿ ಖರ್ಚು ಮಾಡಿರುವ ಸರ್ಕಾರ, ಅದರ ಮಾಹಿತಿಯನ್ನೇಕೆ ಬಹಿರಂಗಪಡಿಸುತ್ತಿಲ್ಲ? ಇದಕ್ಕೆ ಬಳಸಿರುವುದು ಜನರ ಹಣ. ಜನರಿಗೆ ಸಮೀಕ್ಷೆಯ ಫಲಿತಾಂಶ ಪಡೆದುಕೊಳ್ಳಲು ಎಲ್ಲ ಹಕ್ಕೂ ಇವೆ ಎಂದು ಬಿಜೆಪಿ ಹೇಳಿದೆ.
ಕಾಂಗ್ರೆಸ್ನಲ್ಲೇ ವಿರೋಧ
ರಾಜ್ಯದಲ್ಲಿನ ಪ್ರಬಲ ಜಾತಿಯ ಪ್ರಮಾಣ ಕುಸಿತವಾಗಿದ್ದು, ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಳವಾಗಿರುವುದು ಜಾತಿ ಗಣತಿಯ ವರದಿಯಲ್ಲಾದ ಸೋರಿಕೆಯಿಂದ ಬಹಿರಂಗವಾಗಿತ್ತು.
ಪ್ರಬಲ ಜಾತಿ, ಸಮುದಾಯಗಳು ಈ ಸಮೀಕ್ಷೆಯ ಫಲಿತಾಂಶದಿಂದ ಅಂತರ ಕಾಯ್ದುಕೊಂಡಿವೆ. ಚುನಾವಣೆಗೆ ಹೋಗುವ ಮುನ್ನ ವರದಿಯನ್ನು ಬಿಡುಗಡೆ ಮಾಡಲು ಸಿದ್ದರಾಮಯ್ಯ ಉದ್ದೇಶಿಸಿದ್ದರು.
ಆದರೆ, ಅದಕ್ಕೆ ಕಾಂಗ್ರೆಸ್ನಲ್ಲಿಯೇ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಹೈಕಮಾಂಡ್ ಕೂಡ ವರದಿ ಬಹಿರಂಗಪಡಿಸದಂತೆ ಸೂಚಿಸಿತ್ತು.
ದಲಿತರು, ಮುಸ್ಲಿಮರು ಮೊದಲ ಸ್ಥಾನದಲ್ಲಿ
ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರಿದ್ದು, ಮುಸ್ಲಿಮರು ಎರಡನೆಯ ಸ್ಥಾನದಲ್ಲಿದ್ದಾರೆ ಎಂದು ಜಾತಿ ಗಣತಿಯ ವರದಿಯಿಂದ ಸೋರಿಕೆಯಾದ ಅಂಕಿ ಅಂಶಗಳು ತಿಳಿಸಿದ್ದವು.
ರಾಜ್ಯದಲ್ಲಿ ಒಟ್ಟು 6.11 ಕೋಟಿ ಜನಸಂಖ್ಯೆ ಇದ್ದು, 1.8 ಕೋಟಿ ದಲಿತರು 285 ಉಪ ಜಾತಿ), 75 ಲಕ್ಷ (84 ಉಪಜಾತಿ) ಮುಸಲ್ಮಾನರು ಇದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನಲಾದ ಲಿಂಗಾಯತರು 59 ಲಕ್ಷದಷ್ಟಿದ್ದು, (42 ಉಪ ಜಾತಿ) 49 ಲಕ್ಷ (10 ಉಪಜಾತಿ) ಒಕ್ಕಲಿಗರಿದ್ದಾರೆ. 14 ಲಕ್ಷ ಈಡಿಗರು, 13 ಲಕ್ಷ ಬ್ರಾಹ್ಮಣರು, 33 ಲಕ್ಷ ಮಾದಿಗರು, 29 ಲಕ್ಷ ಛಲವಾದಿ ಹಾಗೂ 33 ಲಕ್ಷ ವಾಲ್ಮೀಕಿ ಸಮುದಾಯದ ಜನರು ಇದ್ದಾರೆ ಎಂದು ಉಲ್ಲೇಖಿಸಲಾಗಿತ್ತು.