"ಹಿಂದೂಗಳ ಜನಸಂಖ್ಯೆ ಕಡಿಮೆ ಮಾಡಲು ಜಾತಿ ಗಣತಿ"
ಬೆಂಗಳೂರು, ಸೆಪ್ಟೆಂಬರ್24: ಹಿಂದೂಗಳ ಜನಸಂಖ್ಯೆ ಕಡಿಮೆ ಮಾಡಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಜಾತಿ ಗಣತಿ ಮಾಡುತ್ತಿರುವಂತಿದೆ ಎಂದು ಕೇಂದ್ರ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರು ಹೇಳಿದರು. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇನ್ನೂ 15 ಜಾತಿಗಳಿಗೆ ಕ್ರೈಸ್ತ ಟ್ಯಾಗ್ ನೀಡಿರುವುದನ್ನು ರದ್ದು ಮಾಡಬೇಕೆಂದು ಬಿಜೆಪಿ ನಿಯೋಗ ಒತ್ತಾಯಿಸಿತು.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಎ. ನಾರಾಯಣಸ್ವಾಮಿ ಅವರು, ಈ ರಾಜ್ಯದಲ್ಲಿ ಪರಿಶಿಷ್ಟ ಪಂಗಡದವರು 1 ಕೋಟಿ 40 ಲಕ್ಷಕ್ಕೂ ಹೆಚ್ಚಿದ್ದಾರೆ. ಅವರು ಕ್ರಿಶ್ಚಿಯನ್ನರು ಹಾಕುವ ಬಿರಿಯಾನಿಗೆ ಹೋಗುತ್ತಾರೆ. ಅದನ್ನು ತಿಂದವರೆಲ್ಲರೂ ಕ್ರಿಶ್ಚಿಯನ್ನರು. ಅದಕ್ಕಾಗಿ ಅವರನ್ನು ಹಿಂದೂ ಧರ್ಮದಿಂದ ತೆಗೆಯುತ್ತೇವೆ ಎಂದಿದ್ದಾರೆ ಎಂದು ಟೀಕಿಸಿದರು. ಕ್ರೈಸ್ತ ವ್ಯಾಪ್ತಿಗೆ ಸೇರಿಸಿದ ಇನ್ನೂ 13-14 ಪರಿಶಿಷ್ಟ ಜಾತಿಗಳ ಕ್ರೈಸ್ತ ಪದವನ್ನು ಕಾಣದಂತೆ (ಹೈಡ್) ಮಾಡಿ ಎಂದರೆ, ನಾನು ಯೋಚಿಸಬೇಕು ಎನ್ನುತ್ತಾರೆ ಎಂದು ದೂರಿದರು.

ಈ ಜಾತಿ ಗಣತಿಯನ್ನು ಬಿಜೆಪಿ, ಪರಿಶಿಷ್ಟ ಜಾತಿಗೆ ಸೇರಿದ ಶಾಸಕರು, ಸಂಸದರು, ಮಾಜಿ ಸಚಿವರು ವಿರೋಧಿಸುತ್ತೇವೆ. ಕೇವಲ ಹೈಡ್ ಮಾಡುವುದಲ್ಲ; ಸರ್ವೇಗೆ ಹೋದಾಗ 'ಚರ್ಚ್ಗೆ ಹೋಗುತ್ತೀರಾ? ಬರ್ಕೊಳ್ಳಲೇ' ಎಂಬ ಪದಗಳನ್ನು ಉಪಯೋಗಿಸಬಾರದು ಎಂದು ಎಚ್ಚರಿಕೆ ನೀಡಿದರು. ಈ ವಿಚಾರದಲ್ಲಿ ದಲಿತ ಸಂಘಟನೆಗಳು ಜಾಗೃತರಾಗಬೇಕು ಎಂದು ತಿಳಿಸಿದರು. ಆಯೋಗವನ್ನು ಕಾಂಗ್ರೆಸ್ ಸರಕಾರವು ನಿಯಂತ್ರಿಸುತ್ತಿದೆ. ಕ್ರಿಶ್ಚಿಯನ್ ಪದ ಸೇರಿಸಿ ಸೋನಿಯಾ ಗಾಂಧಿಯವರನ್ನು ಮೆಚ್ಚಿಸುವ ಸಂದೇಶ ನೀಡಲು ಹೊರಟ ಆಯೋಗದ ಅಧ್ಯಕ್ಷರ ನಡವಳಿಕೆಯನ್ನು ವಿರೋಧಿಸಲು ಮನವಿ ಮಾಡಿದರು.
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಭಾರತೀಯ ಜನತಾ ಪಾರ್ಟಿ ಹಾಗೂ ಜಾಗೃತ ಹಿಂದೂ ಸಮುದಾಯಗಳ ಪ್ರತಿಭಟನೆಗೆ ಕಾಂಗ್ರೆಸ್ ಸರ್ಕಾರ ಬೆಚ್ಚಿಬಿದ್ದಿದೆ. ಅದರ ಪರಿಣಾಮವಾಗಿ ಹಿಂದುಳಿದ ವರ್ಗಗಳ ಆಯೋಗ ಹಿಂದೂ ಜಾತಿಗಳನ್ನು ಕ್ರೈಸ್ತ ಧರ್ಮದೊಂದಿಗೆ ಸೇರಿಸಿ ಪ್ರಕಟಿಸಿದ್ದ ಪಟ್ಟಿ 'ಗುಂಡಿಗೆ' ಬಿದ್ದಿದೆ. ಅಲ್ಪಸಂಖ್ಯಾತರನ್ನು ಓಲೈಸುವುದೇ ತನ್ನ ಆದ್ಯತೆಯ ಕಾರ್ಯಸೂಚಿಯನ್ನಾಗಿರಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಹಿಂದೂ ಸಮುದಾಯದ ವಿರುದ್ಧ ಸಂದರ್ಭ ಬಂದಾಗಲೆಲ್ಲ ಕುತಂತ್ರ ಹೆಣೆಯುವುದರಲ್ಲಿ ನಿಸ್ಸೀಮತನ ತೋರುತ್ತಿದೆ.
'ಸಂದಿಯಲ್ಲಿ ಸಮಾರಾಧನೆ' ಮಾಡುವಂತೆ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆಯ ಹೆಸರಿನಲ್ಲಿ ಮತಾಂತರಕ್ಕೆ ಪರೋಕ್ಷ ಪ್ರೇರಣೆ ನೀಡಲು ಹೊರಟು ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಹೆಸರಿನಲ್ಲಿ ಪ್ರಕಟಿಸಿದ್ದ ಹುನ್ನಾರವನ್ನು ಸಮಯೋಚಿತವಾಗಿ ಬಯಲಿಗೆಳೆದ ಪರಿಣಾಮವಾಗಿ ಜನಾಕ್ರೋಶಕ್ಕೆ ಹೆದರಿ ಸರ್ಕಾರ ಆ ಹೆಸರುಗಳ ಪಟ್ಟಿಯನ್ನು ಬೇಷರತ್ತಾಗಿ ಕೈ ಬಿಡಿಸಿರುವುದು ಹಿಂದೂ ಸಮಾಜದ ಒಗ್ಗಟ್ಟಿನ ಆಕ್ರೋಶದ ಪ್ರತಿಫಲನವಾಗಿದೆ. ಇಂತಹ ಹಿಂದೂ ವಿರೋಧಿ ಕುಯುಕ್ತಿ ಚಟುವಟಿಕೆಗಳು ಮತ್ತೆ ತಲೆಯೆತ್ತಿದರೆ, ಈ ಸರ್ಕಾರದ ತಲೆದಂಡ ಆಗುವವರೆಗೂ ಬಿಜೆಪಿ ವಿರಮಿಸದೇ ಹೋರಾಡಲಿದೆ.












Click it and Unblock the Notifications