ಖ್ಯಾತ ವ್ಯಂಗ್ಯಚಿತ್ರಕಾರ ಎಸ್.ವಿ.ಪದ್ಮನಾಭ ಆತ್ಮಹತ್ಯೆ
ಬೆಂಗಳೂರು, ಮಾರ್ಚ್ 10 : ಖ್ಯಾತ ವ್ಯಂಗ್ಯಚಿತ್ರಕಾರ ಎಸ್.ವಿ.ಪದ್ಮನಾಭ ಅವರು ಬದುಕಿನ ಪಯಣ ಮುಗಿಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾರ್ಚ್ 9ರ ಬುಧವಾರ ಮಧ್ಯಾಹ್ನ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಸ್.ವಿ.ಪದ್ಮನಾಭ (52) ಅವರು ಬೆಂಗಳೂರಿನ ಶ್ರೀನಿವಾಸ ನಗರದಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದ್ದು, ಇಂದು ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. [ಮೈಸೂರು ಪತ್ರಕರ್ತ ಬಿಳಿಗಿರಿ ರಂಗನಾಥ್ ನಿಧನ]

ಮನೆಯಲ್ಲಿ ಯಾರು ಇರಲಿಲ್ಲ : ಪದ್ಮನಾಭ ಅವರು ಬುಧವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪುತ್ರ ಸೃಜನ್ ಶಾಲೆಗೆ ಹೋಗಿದ್ದರು. ಪತ್ನಿ ಸರಸ್ವತಿ ಅವರು ಬ್ಯಾಂಕ್ ಕೆಲಸದ ನಿಮಿತ್ತ ಹೊರ ಹೋಗಿದ್ದರು. ಮಧ್ಯಾಹ್ನ 12 ಗಂಟೆಯ ವೇಳೆಗೆ ಸರಸ್ವತಿ ಅವರು ದೂರವಾಣಿ ಮೂಲಕ ಅವರ ಜೊತೆ ಮಾತನಾಡಿದ್ದರು. [ಅಭಿವೃದ್ಧಿ, ಪರಿಸರ ಪತ್ರಿಕೋದ್ಯಮ ಪಶಸ್ತಿ ಪ್ರಕಟ]

ಮಧ್ಯಾಹ್ನ 3.30ಕ್ಕೆ ಅವರು ಮನೆಗೆ ವಾಪಸ್ ಆದಾಗ ಪದ್ಮನಾಭ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. 'ನನಗೆ ಬೇಸರವಾಗಿದೆ. ಜೀವನ ಸಾಕಾಗಿದೆ. ನನ್ನನ್ನು ಕ್ಷಮಿಸು' ಎಂದು ಅವರು ಪತ್ನಿಗೆ ಸಂದೇಶ ಕಳುಹಿಸಿದ್ದರು ಎಂದು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಹೇಳಿದ್ದಾರೆ.
ಶಿವಮೊಗ್ಗ ಮೂಲದವರು : ಎಸ್.ವಿ.ಪದ್ಮನಾಭ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೆರೆಮನೆ ಗ್ರಾಮದವರು. ಮೂರು ದಶಕಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ವ್ಯಂಗ್ಯ ಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿದ್ದರು.

ತೀರ್ಥಹಳ್ಳಿಯ 'ಗ್ರಾಮ ಭಾರತಿ' ವಾರ ಪತ್ರಿಕೆಗೆ ಮೊದಲು ಅವರು ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದರು. ಉದಯವಾಣಿ, ಹೊಸದಿಗಂತ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ಅವರು, 2007ರಿಂದ ಕನ್ನಡಪ್ರಭ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದರು.












Click it and Unblock the Notifications