ಇಬ್ಬರು ಮಾಜಿ, ಒಬ್ಬರು ಹಾಲೀ ಸಚಿವರ ನಡೆ ನಿಗೂಢ: ಬೊಮ್ಮಾಯಿಗೆ ಹೈಕಮಾಂಡ್ ರಕ್ಷೆಯೇ ಆನೆಬಲ
ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿನ ಗೊಂದಲ, ಸಂಪುಟ ರಚನೆ, ಖಾತೆ ಕ್ಯಾತೆಯ ನಂತರ, ಅಂತೂ ಇಂತೂ ಬಸವರಾಜ ಬೊಮ್ಮಾಯಿ ನೇತೃತ್ವದ ಹೊಸ ಸರಕಾರ ಟೇಕ್ ಆಫ್ ಆದಂತೆ ಕಾಣಿಸುತ್ತಿದೆ. ಸಂಭಾವ್ಯ ಕೋವಿಡ್ ಮೂರನೇ ಅಲೆಯ ವಿಚಾರದಲ್ಲಿ ಸರಕಾರ ಹೆಚ್ಚು ತಲೆಕೆಡಿಸಿಕೊಂಡಂತಿದೆ.
ಆದರೆ, ಸಚಿವ ಸ್ಥಾನದ ಆಕಾಂಕ್ಷಿಗಳು, ತಮಗೆ ಬೇಕಾದ ಖಾತೆ ಸಿಗದೇ ಇದ್ದವರ ಮುನಿಸು ಬೂದಿ ಮುಚ್ಚಿದ ಕೆಂಡದಂತಿದೆ. ದೆಹಲಿ ಮಟ್ಟದಲ್ಲಿ ಲಾಬಿಗಳು ನಡೆಯುತ್ತಲೇ ಇದೆ. ಇದು ಯಾವಾಗ ಸ್ಪೋಟಗೊಳ್ಳುತ್ತೆ ಅಥವಾ ಇದನ್ನು ಬಿಜೆಪಿ ವರಿಷ್ಠರು ಚಿವುಟಿ ಹಾಕುತ್ತಾರಾ ಎನ್ನುವುದಕ್ಕೆ ಸದ್ಯಕ್ಕೆ ಉತ್ತರವಿಲ್ಲ.
ಖಾತೆಯ ಹಂಚಿಕೆ ವಿಚಾರದಲ್ಲಿ ಎಂ.ಟಿ.ಬಿ ನಾಗರಾಜ್ ಮತ್ತು ಆನಂದ್ ಸಿಂಗ್ ಬಹಿರಂಗವಾಗಿಯೇ ಮುನಿಸುಕೊಂಡಿದ್ದರು. ಒಂದು ಹಂತಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡುವ ಬಗ್ಗೆಯೂ ಸುದ್ದಿಯಾಗಿತ್ತು. ಆಮೇಲೆ ಇವರನ್ನು ಹೆಲಿಕಾಪ್ಟರ್ ನಿಂದ ಕರೆಸಿ, ಸಂಧಾನ ಮಾಡಿ ಹೊಸಪೇಟೆಗೆ ವಾಪಸ್ ಕಳುಹಿಸಬೇಕಾಯಿತು.
ಆದರೆ, ಸ್ವಾತಂತ್ರ್ಯೋವ ದಿನದಂದು ಧ್ವಜಾರೋಹಣ ನೆರವೇರಿಸಿದ ನಂತರ 'ಪಿಚ್ಚರ್ ಅಭೀ ಬಾಕೀ ಹೇ' ಎಂದು ಆನಂದ್ ಸಿಂಗ್ ಹೇಳುವ ಮೂಲಕ, ಖಾತೆಯ ವಿಚಾರದಲ್ಲಿನ ಅಸಮಾಧಾನ ಇನ್ನೂ ಜೀವಂತ ಎಂದು ಬಹಿರಂಗವಾಗಿ ಹೇಳಿದ್ದರು. ಇಬ್ಬರು ಮಾಜಿ, ಒಬ್ಬರು ಹಾಲೀ ಸಚಿವರ ನಡೆ ನಿಗೂಢ, ಮುಂದೆ ಓದಿ..

ಎಂ.ಟಿ.ಬಿ ನಾಗರಾಜ್ ಅವರಿಗೆ ಎಚ್ಚರಿಕೆ ನೀಡಿಯೇ ಸುಮ್ಮನಾಗಿಸಿದ್ದು ಎನ್ನುವ ಮಾತು
ಎಂ.ಟಿ.ಬಿ ನಾಗರಾಜ್ ಅವರಿಗೆ ಎಚ್ಚರಿಕೆ ನೀಡಿಯೇ ಸುಮ್ಮನಾಗಿಸಿದ್ದು ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿತ್ತು. ಜೊತೆಗೆ, ಈಗ ಹಂಚಿದ ಖಾತೆಯನ್ನು ಸದ್ಯದ ಮಟ್ಟಿಗೆ ಬದಲಾಯಿಸಲು ಹೋಗಬೇಡಿ. ಸರಕಾರದ ಮೇಲೆ ಅವರನ್ನು ಸವಾರಿ ಮಾಡಲು ಬಿಡಬೇಡಿ, ನಿಮ್ಮ ಜೊತೆ ನಾವಿದ್ದೇವೆ. ನೀವು, ಜನಮೆಚ್ಚುವ ಆಡಳಿತ ನಡೆಸಿ ಎನ್ನುವ ಬಲವಾದ ಶ್ರೀರಕ್ಷೆ, ಬಿಜೆಪಿ ವರಿಷ್ಠರಿಂದ ಸಿಎಂ ಬೊಮ್ಮಾಯಿಗೆ ಸಿಕ್ಕಿದೆ ಎನ್ನುವ ಮಾತು ಚಾಲ್ತಿಯಲ್ಲಿದೆ.

ಆನಂದ್ ಸಿಂಗ್ ಅವರ ನಡೆ ಇನ್ನೂ ನಿಗೂಢವಾಗಿದೆ, 'ಪಿಚ್ಚರ್ ಅಭೀ ಬಾಕೀ ಹೇ'
ಆನಂದ್ ಸಿಂಗ್ ಅವರ ನಡೆ ಇನ್ನೂ ನಿಗೂಢವಾಗಿದೆ, ಕೆಲವು ದಿನಗಳ ಕಾಲಾವಕಾಶವನ್ನು ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ಅವರಿಂದ ಪಡೆದುಕೊಂಡಿದ್ದರು. ಆ ಸಮಯ ಮುಗಿದ ನಂತರವೂ ಖಾತೆ ಬದಲಾಗದಿದ್ದರೆ, ಅವರು ಮತ್ತೆ ಸರಕಾರದ ವಿರುದ್ದ ಬಂಡಾಯ ಏಳಬಹುದು ಎನ್ನುವ ಮಾಹಿತಿಯಿದೆ. ಇಲ್ಲಿ ಕೂಡಾ, ಬಿಜೆಪಿ ಹೈಕಮಾಂಡ್ ಕಠಿಣ ನಿರ್ಧಾರಕ್ಕೆ ಹೋದರೆ, ಆನಂದ್ ಸಿಂಗ್ ಅವರಿಗೆ ಈಗ ಇರುವ ಖಾತೆಯೂ ಕೈತಪ್ಪುವ ಸಾಧ್ಯತೆ ಇಲ್ಲದಿಲ್ಲ.

ರಮೇಶ್ ಜಾರಕಿಹೊಳಿ ಮತ್ತು ಸಿ.ಪಿ.ಯೋಗೇಶ್ವರ್ , ಇವರಿಬ್ಬರೂ ರಾಜ್ಯ ಬಿಜೆಪಿ ಪಾಲಿಗೆ ಮುಳುವಾಗುವ ಲಕ್ಷಣ
ಇನ್ನು, ರಮೇಶ್ ಜಾರಕಿಹೊಳಿ ಮತ್ತು ಸಿ.ಪಿ.ಯೋಗೇಶ್ವರ್ , ಇವರಿಬ್ಬರೂ ರಾಜ್ಯ ಬಿಜೆಪಿ ಪಾಲಿಗೆ ಮುಳುವಾಗುವ ಲಕ್ಷಣಗಳು ಇಂದಲ್ಲಾ, ನಾಳೆ ಕಾಣಿಸಿಕೊಳ್ಳದೇ ಇರದು. ಜಾರಕಿಹೊಳಿ ತಮ್ಮಾಪ್ತ ಮುಖಂಡರ ಜೊತೆಗೆ, ಬೆಂಗಳೂರಿನಲ್ಲಿ ಸಭೆಯ ಮೇಲೆ ಸಭೆ ನಡೆಸುತ್ತಾ ಬರುತ್ತಲೇ ಇದ್ದಾರೆ. ಬೊಮ್ಮಾಯಿ ನನ್ನ ಸ್ನೇಹಿತ, ಅವರು ಮುಖ್ಯಮಂತ್ರಿಯಾಗಿರುವುದು ನನಗೆ ಖುಷಿ ಕೊಟ್ಟಿದೆ ಎಂದು ಜಾರಕಿಹೊಳಿ ಹೇಳಿದ್ದರೂ, ಇವರ ನಡೆ ನಿಗೂಢವಾಗಿಯೇ ಇದೆ.

ಬಸವರಾಜ ಬೊಮ್ಮಾಯಿಯವರಿಗೆ ಸಂಪೂರ್ಣ ಸಹಕಾರವನ್ನು ನೀಡಿರುವ ವರಿಷ್ಠರು
ಆದರೆ, ಈಗಾಗಲೇ ಹಲವು ಬಾರಿ ವರದಿಯಾದಂತೆ, ಯಾವ ಒತ್ತಡಕ್ಕೂ ಬಿಜೆಪಿ ಹೈಕಮಾಂಡ್ ಜಗ್ಗುವ ಸಾಧ್ಯತೆ ಕಮ್ಮಿ. ಬಸವರಾಜ ಬೊಮ್ಮಾಯಿಯವರಿಗೆ ಸಂಪೂರ್ಣ ಸಹಕಾರವನ್ನು ನೀಡಿರುವ ವರಿಷ್ಠರು ಆಡಳಿತದ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಿ ಎನ್ನುವ ಫರ್ಮಾನನ್ನು ಹೊರಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ, ಬಿಜೆಪಿಯಿಂದ ಕೆಲವರು ಸಿಡಿದರೂ, ವರಿಷ್ಠರು ಪ್ಲ್ಯಾನ್ ಬಿ ರೆಡಿಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.












Click it and Unblock the Notifications