ಬೆಂಗಳೂರಿನಲ್ಲಿ ಫೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ ಸಂಪುಟ ಸಭೆ ಒಪ್ಪಿಗೆ
ಬೆಂಗಳೂರು, ಫೆ. 09: ಬೆಂಗಳೂರಿನಲ್ಲಿ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಸೇರಿದಂತೆ ರಾಜ್ಯದಲ್ಲಿ ಕುಡಿಯುವ ನೀರಿನ ಮಹತ್ವದ ಯೋಜನೆಗಳಿಗೆ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಂಪುಟ ಸಭೆ ಬಳಿಕ ಕಾನೂನು ಸಚಿವ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಸಂಪುಟ ಸಭೆಯ ತೀರ್ಮಾನಗಳ ಬಗ್ಗೆ ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರಿನಲ್ಲಿ ಹಲವು ವರ್ಷದಿಂದ ನನೆಗುದಿಗೆ ಬಿದ್ದಿರುವ ಫೆರಿಫೆರಲ್ ರಿಂಗ್ ರಸ್ತೆಯ ನಿರ್ಮಾಣ ಸಂಬಂಧ ಗುತ್ತಿಗೆ ಕರೆಯಲು ಸಂಪುಟ ಸಭೆ ಅನುಮೋದನೆ ನೀಡಿದೆ. ಸುಮಾರು 70 ಕಿ.ಮೀ. ದೂರದ ಫೆರಿಫೆರಲ್ ರಿಂಗ್ ರಸ್ತೆಗೆ ಭೂ ಸ್ವಾಧೀನ ಪರಿಹಾರ ಮೊತ್ತವನ್ನು ಖಾಸಗಿ ಕಂಪನಿ ಭರಿಸಲಿದ್ದು, 100 ಅಡಿ ಅಗಲದ ರಿಂಗ್ ರಸ್ತೆ ನಿರ್ಮಾಣದ ಬಳಿಕ ಐವತ್ತು ವರ್ಷ ಟೋಲ್ ಸಂಗ್ರಹಕ್ಕೆ ಖಾಸಗಿ ಕಂಪನಿಗೆ ಅವಕಾಶ ನೀಡಲಾಗಿದೆ. ಸುಪ್ರೀಂಕೋರ್ಟ್ ತೀರ್ಪಿನಂತೆ ಹಳೇ ದರಕ್ಕೆ ಜಮೀನು ವಶಪಡಿಸಿಕೊಳ್ಳಲಿದ್ದು, ವಿವಾದ ಉಂಟಾದಲ್ಲಿ ಮಾತುಕತೆ ಮೂಲಕ ಬಗೆ ಹರಿಸಲು ಅವಕಾಶವಿದೆ. ಈ ಸಂಬಂಧ ಶೀಘ್ರದಲ್ಲಿ ಟೆಂಡರ್ ಕರೆದು ಫೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಸಂಪುಟ ಸಭೆಯ ಮಹತ್ವದ ನಿರ್ಣಯಗಳು:
*ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಸಕ್ಕರೆ ಕಾರ್ಖಾನೆಯನ್ನು 40 ವರ್ಷ ಅವಧಿಗೆ ಖಾಸಗಿ ಕಂಪನಿಗೆ 320 ಕೋಟಿ ರೂ.ಗೆ ಗುತ್ತಿಗೆ.
*ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೃಷ್ಣ ನದಿ ಏತ ನೀರಾವರಿ ಮೊದಲ ಹಂತದ ಯೋಜನೆಗೆ 49 ಕೋಟಿ ರೂ. ಮಂಜೂರಾತಿ.
*ಕಲಬುರಗಿ ಜಿಲ್ಲೆ ಅಫ್ಜಲ್ಪುರ ತಾಲೂಕಿನಲ್ಲಿ 9 ಕಿ.ಮೀ. ರಸ್ತೆ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆಗೆ ಅನುಮೋದನೆ.
*ಕುಮುಟಾದಲ್ಲಿ ಮಿನಿ ವಿಧಾನಸೌಧ ಮೂರನೇ ಹಂತಸ್ತು ನಿರ್ಮಾಣಕ್ಕಾಗಿ ಹೆಚ್ಚುವರಿ ಅನುದಾನ ಒಟ್ಟು 28 ಕೋಟಿ ರೂ. ಮಂಜೂರಾತಿಗೆ ಅನುಮೋದನೆ.
*ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕಂಪನಿಗಳ ಶೇರ್ ಹೋಲ್ಡಿಂಗ್ ಮೇಲೆ ನೊಂದಣಿ ಮಾಡುವ ನಿಯಮಕ್ಕೆ ತಿದ್ದುಪಡಿ ತಂದು ಮಹಾರಾಷ್ಟ್ರ ಮಾದರಿ ಗರಿಷ್ಠ ದರ 25 ಕೋಟಿ ರೂ.ಗೆ ನಿಗದಿಗೆ ತೀರ್ಮಾನ.
*ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ 17 ಕೋಟಿ ರೂ. ಅನುದಾನ ಬಿಡುಗಡೆಗೆ ಮಂಜೂರು.
*ಬೆಳಗಾವಿ ಜಿಲ್ಲೆಯ ನಗರಾಭಿವೃದ್ಧಿ ಪ್ರಾಧಿಕಾರ ಕೈಗೆತ್ತಿಕೊಂಡಿರುವ 28 ಕೋಟಿ ರೂ. ಮೊತ್ತದ ಕಾಮಗಾರಿಗಳ ಪೈಕಿ ಆರು ಕಾಮಗಾರಿ ಬದಲಾವಣೆ.
*ವಿಜಯಪುರ ನಗರದ ಪಾಲಿಕೆ ವ್ಯಾಪ್ತಿಗೆ ಬರುವ 300 ಆಸ್ತಿಗಳನ್ನು ಮಾರಾಟಕ್ಕೆ ಅನುಮೋದನೆ
* ಬಸವ ಕಲ್ಯಾಣ ಅನುಭವ ಮಂಟಪ ನಿರ್ಮಾಣಕ್ಕೆ 560 ಕೋಟಿ ರೂ. ಮಂಜೂರಾತಿಗೆ ಅನುಮೋದನೆ.
*ರಾಜ್ಯದಲ್ಲಿ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಜಲ ಜೀವನ್ ಮಿಷನ್ ಕಾರ್ಯಕ್ರಮ ಅನುಷ್ಠಾನ.
*ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ 336 ಜನ ವಸತಿ ಪ್ರದೇಶಕ್ಕೆ ಕುಡಿಯುವ ನೀರಿನ ನಲ್ಲಿ ಸಂಪರ್ಕ ಕಾಮಗಾರಿಗೆ ಅನುಮೋದನೆ
*ಶಿವಮೊಗ್ಗ ಜಿಲ್ಲೆಯ ಗೋವಿಂದಪುರದ 12 ಗ್ರಾಮಗಳಿಗೆ ಕುಡಿಯುವ ನೀರು ಸೌಲಭ್ಯ,
*2011 ನೇ ಸಾಲಿನ ಕೆಪಿಎಸ್ಸಿ ಅಡಿ ನೇಮಕಾತಿ ಊರ್ಜಿತಗೊಳಿಸಿ ಬಿಲ್ ಪಾಸ್ ಮಾಡಲು ಸಂಪುಟ ಸಭೆ ಒಪ್ಪಿಗೆ.
Recommended Video