ಇನ್ನೂ ಮೂರು ತಿಂಗಳು ಸಚಿವ ಸಂಪುಟ ವಿಸ್ತರಣೆ ಅನುಮಾನ
ಬೆಂಗಳೂರು, ಆಗಸ್ಟ್ 15: ಸಚಿವ ಸಂಪುಟ ವಿಸ್ತರಣೆಗೆ ಮೈತ್ರಿ ಸರ್ಕಾರಕ್ಕೆ ಸಮಯವೆ ಕೂಡಿ ಬರುತ್ತಿಲ್ಲ. ಆಷಾಡ ಮುಗಿದ ಮೇಲೆ ಹೊಸ ಶಾಸಕರಿಗೆ ಸಚಿವ ಸ್ಥಾನ ಸಿಗಬಹುದೆಂಬ ಸುದ್ದಿ ಮತ್ತೆ ಹುಸಿಯಾಗಿದೆ.
ಲೋಕಸಭೆ ಚುನಾವಣೆ ಮುಗಿಯುವವರೆಗೆ ಸಚಿವ ಸಂಪುಟ ವಿಸ್ತರಣೆ ಆಗುವುದು ಅನುಮಾನ ಎನ್ನುತ್ತಿವೆ ಹೊಸ ಬೆಳವಣಿಗೆ. ಸ್ವತಃ ಸಿದ್ದರಾಮಯ್ಯ ಅವರೇ ಈ ಸುಳಿವನ್ನು ನೀಡಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ, ಆ ನಂತರ ವಿಧಾನಸಭೆ ಉಪ ಚುನಾವಣೆ ಇದೆ, ಮೊದಲು ಚುನಾವಣೆಗಳೆಲ್ಲಾ ಮುಗಿಯಲಿ ಆ ನಂತರ ಅದರ ಬಗ್ಗೆ ಯೋಚನೆ ಮಾಡಿದರಾಯ್ತು ಎಂದಿದ್ದಾರೆ ಸಿದ್ದರಾಮಯ್ಯ.

ಚುನಾವಣೆಗಳು ಮುಗಿದ ಬಳಿಕವೇ ವಿಸ್ತರಣೆ
ಈ ಮೊದಲು ಆಷಾಢ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎನ್ನಲಾಗಿತ್ತು. ಆದರೆ ಈಗ ಅದು ಇನ್ನೂ ಮುಂದಕ್ಕೆ ಹೋಗಿದ್ದು ಸ್ಥಳೀಯ ಸಂಸ್ಥೆ ಚುನಾವಣೆ, ವಿಧಾನಸಭೆ ಉಪ ಚುನಾವಣೆ ಮುಗಿದ ಮೇಲೆ ವಿಸ್ತರಣೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಅಷ್ಟರ ಹೊತ್ತಿಗೆ ಲೋಕಸಭೆ ಚುನಾವಣೆಯೂ ಬಂದಿರುತ್ತದೆ ಹಾಗಾಗಿ ಅಲ್ಲಿಯ ವರೆಗೆ ಸಂಪುಟ ವಿಸ್ತರಣೆ ಆಗುವುದಿಲ್ಲ ಎನ್ನಲಾಗಿದೆ.

ಕಾಂಗ್ರೆಸ್ನ ಆರು ಸ್ಥಾನ
ಹೆಚ್ಚು ಸಚಿವ ಸ್ಥಾನ ಆಕಾಂಕ್ಷಿಗಳಿರುವ ಕಾಂಗ್ರೆಸ್ ಆರು ಸಚಿವ ಸ್ಥಾನಗಳನ್ನು ತನ್ನ ಬಳಿ ಉಳಿಸಿಕೊಂಡಿದೆ. ಜೆಡಿಎಸ್ ಬಳಿ ಎರಡು ಸ್ಥಾನಗಳಿವೆ. ಸಂಪುಟ ವಿಸ್ತರಣೆ ಕಸರತ್ತು ಕಾಂಗ್ರೆಸ್ಗೆ ಅಲಗಿನ ಮೇಲಿನ ನಡಿಗೆಯಾಗಿರುವ ಕಾರಣ ಜಾಗರೂಕತೆಯಿಂದ ಹೆಜ್ಜೆ ಇಡಲಾಗುತ್ತಿದೆ.

ಯಾರ್ಯಾರು ಆಕಾಂಕ್ಷಿಗಳು?
ಮೊದಲ ಆಕಾಂಕ್ಷಿ ಎಂ.ಬಿ.ಪಾಟೀಲ್, ಅವರ ಜೊತೆ ಎಚ್.ಕೆ.ಪಾಟೀಲ್, ಸತೀಶ ಜಾರಕಿಹೊಳಿ, ಎಂಟಿಬಿ ನಾಗರಾಜು, ಬಿಸಿ ಪಾಟೀಲ್, ಡಾ.ಸುಧಾಕರ್, ಎನ್.ಎ.ಹ್ಯಾರಿಸ್, ಅಭಯ್ ಸಿಂಗ್, ಮುನಿಯಪ್ಪ, ಲಕ್ಷ್ಮಿ ಹೆಬ್ಬಾಳ್ಕರ್ ಇನ್ನೂ ಹಲವರು ಆಕಾಂಕ್ಷಿಗಳು ಕಾಂಗ್ರೆಸ್ನಲ್ಲಿದ್ದಾರೆ.

ಎಂ.ಬಿ.ಪಾಟೀಲ್ಗೆ ಸ್ಥಾನ ಪಕ್ಕಾ
ಮೊದಲ ಸಚಿವ ಸಂಪುಟ ವಿಸ್ತರಣೆ ಆದಾಗಲೇ ಎಂ.ಬಿ.ಪಾಟೀಲ್ ಅವರು ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಜೊತೆ ಅತೃಪ್ತರನ್ನೆಲ್ಲಾ ಸೇರಿಸಿಕೊಂಡು ಸರ್ಕಾರಕ್ಕೆ ಅಭದ್ರ ಭಾವ ಮೂಡಿಸಿದ್ದರು. ಹಾಗಾಗಿ ಅವರಿಗೆ ಸಚಿವ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ.

ಸಂಪುಟ ವಿಸ್ತರಣೆ ಸುಳಿವು ನೀಡಿದ್ದ ಖಂಡ್ರೆ
ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಇತ್ತೀಚೆಗೆ ರಾಜ್ಯಕ್ಕೆ ಬಂದಿದ್ದಾಗ ಅವರೊಂದಿಗೆ ಸಭೆ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಷಾಢದ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದರು.












Click it and Unblock the Notifications