ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಅದು ನಿಮ್ಮ ಪಕ್ಷದ ಹಣೆಬರಹ
ಬೆಂಗಳೂರು, ನ 20: ಮುಖ್ಯಮಂತ್ರಿ ಯಡಿಯೂರಪ್ಪ ಎರಡು ದಿನದ ಹಿಂದೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ನಂತರ, ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಕಾವು ಬಿಜೆಪಿ ವಲಯದಲ್ಲಿ ಜೋರಾಗಿ ನಡೆಯುತ್ತಿದೆ.
ಈ ಬಗ್ಗೆ ಕಿಡಿಕಾರಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಿಮ್ಮ ಈ ಸರ್ಕಸ್ ನಲ್ಲಿ ರಾಜ್ಯದ ಆಡಳಿತ ದಿಕ್ಕೆಟ್ಟು ಹೋಗಿದೆ ಎಂದು ಕಿಡಿಕಾರಿದ್ದಾರೆ. ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಅದು ನಿಮ್ಮ ಪಕ್ಷದ ಹಣೆಬರಹ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ಸಂಪುಟ ವಿಸ್ತರಣೆಯೋ, ಪುನಾರಚನೆಯೋ, @CMofKarnataka ಬದಲಾವಣೆಯೋ -ಇವೆಲ್ಲ ನಿಮ್ಮ ಪಕ್ಷದ ಹಣೆಬರಹ. ಈ ಸರ್ಕಸ್ ನಲ್ಲಿ ರಾಜ್ಯದ ಆಡಳಿತ ದಿಕ್ಕೆಟ್ಟು ಹೋಗಿದೆ. ಶೀಘ್ರವಾಗಿ ಏನಾದರೂ ನಿರ್ಧಾರ ಕೈಗೊಂಡು ಈಗಿನ ಬಿಕ್ಕಟ್ಟು ಕೊನೆಗೊಳಿಸಿ, ಆಡಳಿತದ ಕಡೆ ಗಮನಕೊಟ್ಟು ರಾಜ್ಯವನ್ನು ಉಳಿಸಿ" ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

"ಹಿಂದೆಲ್ಲ @BJP4Karnataka ನಾಯಕರು, ಹೈಕಮಾಂಡ್ ಸಂಸ್ಕೃತಿ, ಮೂಲನಿವಾಸಿಗಳು-ವಲಸೆಗಾರರು, ಕುಟುಂಬ ರಾಜಕಾರಣ ಎಂಬೀತ್ಯಾದಿ ಪದಗಳನ್ನು ಜೋಡಿಸಿ ಹಗಲು ರಾತ್ರಿ ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದರು. ಈಗ ಅದೇ ಆರೋಪಗಳನ್ನು ಪರಸ್ಪರ ಮಾಡ್ಕೊಂಡು ಬತ್ತಲಾಗುತ್ತಿದ್ದಾರೆ"ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಬಿಹಾರ ಮತ್ತು ವಿವಿಧ ರಾಜ್ಯಗಳಲ್ಲಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋತ ನಂತರ, ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಕಾರ್ಯಶೈಲಿಯ ಬಗ್ಗೆ ಕಾಂಗ್ರೆಸ್ಸಿನಲ್ಲಿ ದೊಡ್ಡ ಕೂಗು ಎದ್ದಿದೆ. ಕಾಂಗ್ರೆಸ್ಸಿನ ಹಲವು ಹಿರಿಯ ಮುಖಂಡರು, ಆತ್ಮಾವಲೋಕನದ ಬಗ್ಗೆ ಮಾತನಾಡುತ್ತಿದ್ದಾರೆ.
ಇದೇ ತಿಂಗಳ ಅಂತ್ಯದಲ್ಲಿ ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆಯಲ್ಲಿನ ಸೋಲಿನ ಪರಾಮರ್ಶೆ ಮಾಡಿಕೊಳ್ಳಲು, ನಗರದ ಹೊರವಲಯದ ರೆಸಾರ್ಟ್ ಒಂದರಲ್ಲಿ, ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡರು ಸಭೆ ಸೇರಲಿದ್ದಾರೆ.












Click it and Unblock the Notifications