ಅತೃಪ್ತ ಕಾಂಗ್ರೆಸ್ ಶಾಸಕರಿಂದ ಸಭೆ, ಮುಂದಿನ ನಡೆ ನಿಗೂಢ
ಬೆಂಗಳೂರು, ಡಿಸೆಂಬರ್ 22: ಸಚಿವ ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ಇತ್ತ ಕಾಂಗ್ರೆಸ್ನಲ್ಲಿ ಅಸಮಾಧಾನವೂ ಸ್ಪೋಟಗೊಂಡಿದೆ. ಸಚಿವ ಸ್ಥಾನ ಕೈತಪ್ಪಿದ ಹಲವು ಶಾಸಕರು ಪಕ್ಷದ ವಿರುದ್ಧ ಬಂಡಾಯದ ಸೂಚನೆ ನೀಡಿದ್ದಾರೆ.
ಸಚಿವ ಭೀಮಾನಾಯ್ಕ, ಆನಂದ್ ಸಿಂಗ್, ಬಿ.ಸಿ.ಪಾಟೀಲ್, ಆರ್.ಶಂಕರ್, ಎನ್.ಎ.ಹ್ಯಾರಿಸ್, ಶಾಮನೂರು ಶಿವಶಂಕರಪ್ಪ ಅವರುಗಳು ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಇಂದು ಸಂಜೆ ಹೊಸ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಮುಗಿದ ನಂತರ ಅತೃಪ್ತ ಶಾಸಕರಾದ ಬಿ.ಸಿ.ಪಾಟೀಲ್, ಆನಂದ್ ಸಿಂಗ್, ಭೀಮಾಶಂಕರ್ ಅವರುಗಳು ಸಭೆ ಸೇರಲಿದ್ದು, ಇನ್ನೂ ಕೆಲವು ಅತೃಪ್ತ ಶಾಸಕರನ್ನು ಜೊತೆ ಮಾಡಿಕೊಳ್ಳಲಿದ್ದಾರೆ.

ಎಸ್.ಆರ್.ಪಾಟೀಲ್ ಭೇಟಿ ಸಾಧ್ಯತೆ
ಎಸ್.ಆರ್.ಪಾಟೀಲ್ ಅವರನ್ನು ಅತೃಪ್ತ ಶಾಸಕರ ಗುಂಪಿನ ನೇತೃತ್ವ ವಹಿಸುವಂತೆ ಕೇಳುವ ಸಾಧ್ಯತೆ ಇದೆ. ದಕ್ಷಿಣ ಕರ್ನಾಟಕದ ಸುಧಾಕರ್ ಅವರನ್ನು, ಎನ್.ಎ.ಹ್ಯಾರಿಸ್ ಅವರನ್ನು ಅತೃಪ್ತ ಶಾಸಕರು ಇಂದು ಭೇಟಿಯಾಗಿ ಮಾತನಾಡುವ ಸಂಭವ ಹೆಚ್ಚಿದೆ.

ರಮೇಶ್ ಜಾರಕಿಹೊಳಿ ಸೇರ್ಪಡೆಗೊಂಡರೆ ಸಂಕಷ್ಟ
ಸಭೆ ಸೇರಲಿರುವ ಅತೃಪ್ತರು ತಮ್ಮ ಮುಂದಿನ ನಡೆಯ ಬಗ್ಗೆ ನಿರ್ಧರಿಸಲಿದ್ದಾರೆ. ಈ ಅತೃಪ್ತರ ಪಡೆಗೆ ರಮೇಶ್ ಜಾರಕಿಹೊಳಿ ಜೊತೆ ಆದರೆ ಸರ್ಕಾರಕ್ಕೆ ಆತಂಕ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಆದರೆ ಸಿದ್ದರಾಮಯ್ಯ ಅವರು ಅಸಾಧಾನ ಶಮನ ಮಾಡುವ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ ಆದ್ದರಿಂದ ಪರಿಸ್ಥಿತಿ ಕೈಮೀರದಂತೆ ತಡೆಯುವ ಸಾಧ್ಯತೆ ಇದೆ.

ಅತೃಪ್ತರನ್ನು ವಿಶ್ವಾಸಕ್ಕೆ ಪಡೆವ ಜವಾಬ್ದಾರಿ
ಅತೃಪ್ತ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರುಗಳು ಸಿದ್ದರಾಮಯ್ಯ ನೇತೃತ್ವದಲ್ಲಿ ಮಾಡಬೇಕಾಗಿದೆ. ಸಿದ್ದರಾಮಯ್ಯ ಅವರು ನಿನ್ನೆಯಷ್ಟೆ ರಮೇಶ್ ಜಾರಕಿಹೊಳಿ ಅವರೊಂದಿಗೆ ಮಾತನಾಡಿದ್ದಾರೆ. ಉಳಿದ ಅತೃಪ್ತ ಶಾಸಕರೊಂದಿಗೆ ನಾಳೆ ಮಾತನಾಡುವ ನಿರೀಕ್ಷೆ ಇದೆ.

ಎಂಟು ಮಂದಿ ಸಚಿವರಾಗಲು ತಯಾರು
ಎಂಟು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜಭವನದಲ್ಲಿ ಸಕಲ ಸಿದ್ದತೆ ಮುಗಿದಿದ್ದು, ಸಂಜೆ 5:20 ಕ್ಕೆ ಸರಿಯಾಗಿ ಎಂಟು ಮಂದಿ ಶಾಸಕರು ಸಚಿವರಾಗಿ ಬಡ್ತಿ ಪಡೆಯಲಿದ್ದಾರೆ. ಅವರಿಗೆ ಖಾತೆಗಳನ್ನು ನಾಳೆ ಅಥವಾ ನಾಡಿದ್ದು ಹಂಚಿಕೆ ಮಾಡಲಾಗುತ್ತದೆ.












Click it and Unblock the Notifications