ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕಕ್ಕೆ ಆಷಾಢ ಅಡ್ಡಿ!
ಬೆಂಗಳೂರು, ಜುಲೈ 23 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲು ಬಯಸುತ್ತಿರುವ ಶಾಸಕರ ಆಷಾಢ ಕಳೆಯುವ ತನಕ ಕಾಯಬೇಕಾಗಿದೆ. ಹೌದು, ಆಷಾಢ ಮುಗಿದ ಮೇಲೆ ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ನಂತರ ಮಾತನಾಡಿದ ಅವರು, 'ತಕ್ಷಣ ಸಂಪುಟ ವಿಸ್ತರಣೆ ಮಾಡಬೇಕು ಎಂದುಕೊಂಡಿದ್ದೆವು. ಆದರೆ, ಆಷಾಢ ಮಾಸ ಬಂದಿದ್ದರಿಂದ ತಡವಾಗಿದೆ' ಎಂದರು.
ರಾಹುಲ್ ಗಾಂಧಿ ಭೇಟಿಯಾದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ
'ಆಷಾಢ ಮಾಸ ಮುಗಿದ ಮೇಲೆ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ ಮಾಡಲಾಗುತ್ತದೆ. ಇದಕ್ಕೆ ರಾಹುಲ್ ಗಾಂಧಿ ಅವರು ಒಪ್ಪಿಗೆಯನ್ನು ನೀಡಿದ್ದಾರೆ' ಎಂದು ಸಿದ್ದರಾಮಯ್ಯ ಹೇಳಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಸಿದ್ದರಾಮಯ್ಯ ಸ್ಪಷ್ಟನೆ
'30 ನಿಗಮ ಮಂಡಳಿಗಳಿಗೆ ಏಕಕಾಲದಲ್ಲಿ ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಕಾಂಗ್ರೆಸ್ 20, ಜೆಡಿಎಸ್ 10 ನಿಗಮ-ಮಂಡಳಿಗಳನ್ನು ಹಂಚಿಕೊಂಡಿವೆ' ಎಂದು ಸಿದ್ದರಾಮಯ್ಯ ತಿಳಿಸಿದರು.
'ಲೋಕಸಭೆ ಚುನಾವಣೆ ಬಗ್ಗೆಯೂ ಚರ್ಚೆ ನಡೆದಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತೇವೆ. ಯಾರೂ ಸಹ ಲೋಕಸಭೆ ಚುನಾವಣೆಯಲ್ಲಿನ ಮೈತ್ರಿಗೆ ವಿರೋಧ ವ್ಯಕ್ತಪಡಿಸಿಲ್ಲ' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದಾಗ 25 ಸಚಿವರನ್ನು ಕುಮಾರಸ್ವಾಮಿ ಅವರು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಕಾಂಗ್ರೆಸ್ನಿಂದ 6, ಜೆಡಿಎಸ್ನಿಂದ ಒಬ್ಬರು ಶಾಸಕರು ಇನ್ನು ಸಂಪುಟ ಸೇರಬಹುದಾಗಿದೆ.