ಸಚಿವ ಸಂಪುಟ ವಿಸ್ತರಣೆ : ಕಾಂಗ್ರೆಸ್ ಶಾಸಕರಿಗೆ ಕಾದಿದೆ ನಿರಾಸೆ?
ಬೆಂಗಳೂರು, ಡಿಸೆಂಬರ್ 17 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದೆ. ಹೈಕಮಾಂಡ್ ತೆಗೆದುಕೊಳ್ಳಬಹುದಾದ ನಿರ್ಧಾರದಿಂದ ಸಂಪುಟ ವಿಸ್ತರಣೆಗೆ ಪಟ್ಟು ಹಿಡಿದಿದ್ದ ಕಾಂಗ್ರೆಸ್ ನಾಯಕರಿಗೆ ನಿರಾಸೆಯಾಗುವ ಸಾಧ್ಯತೆ ಇದೆ.
ಹೌದು....ಡಿಸೆಂಬರ್ 22ರಂದು ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 21ರಂದು ಕರ್ನಾಟಕದ ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಸಂಪುಟ ವಿಸ್ತರಣೆ : ಕರ್ನಾಟಕ ನಾಯಕರಿಗೆ ರಾಹುಲ್ ಗಾಂಧಿ ಕರೆ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ 8 ಸಚಿವ ಸ್ಥಾನಗಳು ಖಾಲಿ ಇವೆ. ಇವುಗಳ ಪೈಕಿ ಕಾಂಗ್ರೆಸ್ಗೆ 6, ಜೆಡಿಎಸ್ಗೆ 2 ಸ್ಥಾನ ಸಿಗಲಿದೆ. ಕಾಂಗ್ರೆಸ್ ಪಕ್ಷ ಈಗ 4 ಸ್ಥಾನಗಳನ್ನು ಮಾತ್ರ ಭರ್ತಿ ಮಾಡಲು ಚಿಂತನೆ ನಡೆಸುತ್ತಿದೆ.
ಸಂಪುಟ ವಿಸ್ತರಣೆ ಜೊತೆ ಪುನಾರಚನೆ : ಇಬ್ಬರು ಸಂಪುಟದಿಂದ ಹೊರಕ್ಕೆ?
ಕಾಂಗ್ರೆಸ್ ಪಾಲಿನ ಎಲ್ಲಾ 6 ಸ್ಥಾನಗಳನ್ನು ಭರ್ತಿ ಮಾಡಬೇಕು ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ. ಆದರೆ, ಎರಡು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲು ನಾಯಕರು ಚಿಂತನೆ ನಡೆಸಿದ್ದಾರೆ. ಹೈಕಮಾಂಡ್ ಮುಂದೆಯೂ ಇದೇ ವಾದವನ್ನು ಮಂಡಿಸಲಿದ್ದಾರೆ. ಇದರಿಂದಾಗಿ ಕೆಲವು ಶಾಸಕರಿಗೆ ನಿರಾಸೆಯಾಗುವ ಸಾಧ್ಯತೆ ಇದೆ.....
ಸಂಪುಟ ವಿಸ್ತರಣೆ : ಮೌನ ಮುರಿದ ರಾಮಲಿಂಗಾ ರೆಡ್ಡಿ!
ಡಿಸೆಂಬರ್ 21ರಂದು ಸಭೆ
ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕದ ಬಗ್ಗೆ ಡಿಸೆಂಬರ್ 21ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ಕರ್ನಾಟಕದ ನಾಯಕರು ಸಭೆ ನಡೆಸಲಿದ್ದಾರೆ. ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂತಾದ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿಸೆಂಬರ್ 22ರಂದು ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದೆ.
ನಾಲ್ಕು ಸ್ಥಾನ ಮಾತ್ರ ಭರ್ತಿ
ಕಾಂಗ್ರೆಸ್ ಪಕ್ಷಕ್ಕೆ 6 ಸಚಿವ ಸ್ಥಾನಗಳು ಸಿಕ್ಕಿವೆ. ಇವುಗಳಲ್ಲಿ ಇಬ್ಬರು ಹಿರಿಯ ಶಾಸಕರ ಸಹಿತ ನಾಲ್ವರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದಾಗಿ ಅಸಮಾಧಾನ ಉಂಟಾಗುವ ನಿರೀಕ್ಷೆಯೂ ಇದೆ. 6 ಸ್ಥಾನಗಳಿಗಾಗಿ 12ಕ್ಕೂ ಅಧಿಕ ಶಾಸಕರು ಲಾಬಿ ನಡೆಸುತ್ತಿದ್ದಾರೆ.
ಅಸಮಾಧಾನ ಶಮನಕ್ಕೆ ಸೂತ್ರ
ಸಂಪುಟ ವಿಸ್ತರಣೆ ಬಳಿಕ ಉಂಟಾಗುವ ಅಸಮಾಧಾನವನ್ನು ಬಗೆಹರಿಸಲು ಕಾಂಗ್ರೆಸ್ನಿಂದ 6, ಜೆಡಿಎಸ್ನಿಂದ ನಾಲ್ವರು ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗುತ್ತದೆ. ಕಾಂಗ್ರೆಸ್ನ 20 ಮತ್ತು ಜೆಡಿಎಸ್ನ 10 ಶಾಸಕರನ್ನು ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲು ಸಮನ್ವಯ ಸಮತಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಯಾರ-ಯಾರ ಹೆಸರು?
ಸಂಪುಟದಲ್ಲಿ 6 ಸ್ಥಾನಗಳು ಖಾಲಿ ಇವೆ, ಇವುಗಳನ್ನು ಪಡೆಯಲು 12 ಕ್ಕೂ ಅಧಿಕ ಆಕಾಂಕ್ಷಿಗಳಿದ್ದಾರೆ. ಹಿರಿಯ ಶಾಸಕರಾದ ಎಚ್.ಕೆ.ಪಾಟೀಲ, ರಾಮಲಿಂಗಾ ರೆಡ್ಡಿ, ಎಂ.ಬಿ.ಪಾಟೀಲ್, ಈ.ತುಕಾರಾಂ, ಸಿ.ಎಸ್.ಶಿವಳ್ಳಿ, ಬಿ.ಸಿ.ಪಾಟೀಲ್, ಸಂಗಮೇಶ್, ಸುಧಾಕರ್ ಅವರ ಹೆಸರುಗಳು ಸಚಿವ ಸ್ಥಾನಕ್ಕೆ ಕೇಳಿಬರುತ್ತಿವೆ. ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಅವರ ಹೆಸರು ಸಹ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿದೆ.
ಉತ್ತರ ಕರ್ನಾಟಕಕ್ಕೆ ಒಂದು ಸ್ಥಾನ
ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಆದ್ಯತೆ ಸಿಕ್ಕಿಲ್ಲ ಎಂಬ ಕೂಗು ಇದೆ. ಆದ್ದರಿಂದ, ಉತ್ತರ ಕರ್ನಾಟಕ ಭಾಗದಿಂದ ಎಂ.ಬಿ.ಪಾಟೀಲ ಅಥವ ಎಸ್.ಆರ್.ಪಾಟೀಲ ಅವರು ಸಂಪುಟ ಸೇರುವ ನಿರೀಕ್ಷೆ ಇದೆ. ಡಿಸೆಂಬರ್ 18ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲೂ ಸಂಪುಟ ವಿಸ್ತರಣೆಗೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.