ಗುತ್ತಿಗೆದಾರರ ಹಿಂದೆ ಯಾರ್ಯಾರಿದ್ದಾರೆ ಅಂತ ಗೊತ್ತಿದೆ ಎಂಬ ಡಿಕೆಶಿ ಹೇಳಿಕೆಗೆ ವಿಜಯೇಂದ್ರ ತಿರುಗೇಟು
ಬೆಂಗಳೂರು, ಆಗಸ್ಟ್ 10: ಗುತ್ತಿಗೆದಾರರ ಹಿಂದೆ ಯಾರ್ಯಾರಿದ್ದಾರೆ ಅಂತ ಗೊತ್ತಿದೆ ಎಂಬ ಡಿಕೆಶಿ ಹೇಳಿಕೆಗೆ ವಿಜಯೇಂದ್ರ ತಿರುಗೇಟು ನೀಡಿದ್ದು, ಅವರದ್ದೇ ಸರ್ಕಾರ ಇದೆ, ಅವರದ್ದೇ ತನಿಖೆ ಸಂಸ್ಥೆಗಳಿವೆ. ಯಾರ್ಯಾರು ಹಿಂದೆ ಇದಾರೆ ಅಂತ ಬಹಿರಂಗ ಪಡಿಸಬಹುದು ಎಂದು ಹೇಳಿದ್ದಾರೆ.
ಯಾರೂ ಅವರನ್ನು ತಡೆಯುತ್ತಿಲ್ಲ, ಆದರೆ ಈ ವಿಚಾರ ಹೇಳಿಕೊಂಡು ಡಿಕೆಶಿ ತಮ್ಮ ಜವಾಬ್ದಾರಿಯಿಂದ ತಪ್ಪುಸಿಕೊಳ್ಳಲು ಸಾಧ್ಯವಿಲ್ಲ. ಡಿಕೆಶಿ ಅವರು ತಮ್ಮ ಮೇಲೆ ಬಂದಿರುವ ಆರೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಹಿರಿಯ ನಾಯಕರು ಈ ವಿಚಾರ ಗಂಭೀರವಾಗಿ ತಗೊಂಡಿದ್ದಾರೆ. ನಾಳೆ ನಾಡಿದ್ದು ಹೋರಾಟದ ಬಗ್ಗೆ ಚರ್ಚೆ ಮಾಡ್ತಾರೆ ಎಂದರು.

ನಾವು ಹತಾಷರಾಗಿ ಕಾಂಗ್ರೆಸ್ ಮೇಲೆ ಆರೋಪಿಸ್ತಿಲ್ಲ, ಆ ಪ್ರಶ್ನೆ ಉದ್ಭವವಾಗಿಲ್ಲ. ನಾವು ಶಾಶ್ವತವಾಗಿ ಅಧಿಕಾರದಲ್ಲಿ ಇರಬೇಕೆಂಬ ಭ್ರಮೆ ಇಲ್ಲ. ಆಗ ನಾವು ಅಧಿಕಾರದಲ್ಲಿ ಇದ್ವಿ, ಈಗ ಕಾಂಗ್ರೆಸ್ ಇದೆ, ನಾಳೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಈಗ ಮೂರ್ನಾಲ್ಕು ಮಂತ್ರಿಗಳ ಮೇಲೆ ಕಮೀಷನ್ ಆರೋಪ ಬಂದಿದೆ. ಮುಂದೆ ಮತ್ತಷ್ಟು ಮಂತ್ರಿಗಳ ಮೇಲೆ ಆರೋಪ ಬರಬಹುದು ಎಂದರು.
ಕಾಂಗ್ರೆಸ್ ನವ್ರು ಭ್ರಷ್ಟಾಚಾರ ಬಗ್ಗೆ ಮಾತಾಡ್ತಾರೆ ಅಂದ್ದೆ ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದಂತೆ. ಈಗ ಅವರದ್ದೇ ಸರ್ಕಾರದಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬರ್ತಿದೆ. ಈ ಸರ್ಕಾರ ಗ್ಯಾರಂಟಿಗಳಿಗೆ ಸಾಲ ಮಾಡ್ತಿದೆ. ರಾಜ್ಯವನ್ನು ಸಾಲದಲ್ಲಿ ಮುಳುಗಿಸ್ತಿದಾರೆ. ಮುಂದೆ 80-90 ಸಾವಿರ ಕೋಟಿ ಸಾಲ ಮಾಡುವ ಪರಿಸ್ಥಿತಿ ಉದ್ಭವ ಆಗುತ್ತೆ ಎಂದರು.
ರಾಜ್ಯದ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ನವರಿಗೆ ಚಿಂತೆ ಇಲ್ಲ. ಕೇಂದ್ರದ ಕಾಂಗ್ರೆಸ್ ಗೆ ಈ ಸರ್ಕಾರ ಎಟಿಎಂ ಆಗಿದೆ. ಮುಂದಿನ ಲೋಕ ಸಭೆ ಚುನಾವಣೆ ದೃಷ್ಟಿಯಿಂದ ಹಣ ಸಂಗ್ರಹ ಮಾಡ್ತಿದಾರೆ. ತಮ್ಮ ಜೇಬನ್ನು ತುಂಬಿಸಿಕೊಳ್ಳುವ ಕಡೆ ಗಮನ ಕೊಟ್ಟಿದ್ದಾರೆ, ಅಭಿವೃದ್ಧಿ ಕಡೆಗಣಿಸಿದ್ದಾರೆ. ಈ ಸರ್ಕಾರ ಬಂದು ಮೂರು ತಿಂಗಳಗಾಗಿದೆ. ಗುತ್ತಿಗೆದಾರರು ಮೂರ್ನಾಲ್ಕು ಮಂತ್ರಿಗಳ ಮೇಲೆಯೇ ನೇರವಾಗಿ ಕಮೀಷನ್ ಆರೋಪ ಮಾಡ್ತಿದಾರೆ. ಗ್ಯಾರಂಟಿ ಕೊಡ್ತೀವಿ ಅಂತ ಜನರ ಕಿವಿ ಮೇಲೆ ಹೂ ಇಟ್ಟು ಅಧಿಕಾರ ಪಡೆದರು. ಈಗ ಜನರಿಗೆ ಮೋಸ ಮಾಡಿ ಭ್ರಷ್ಟಾಚಾರದಲ್ಲಿ ತೊಡಗಿದಾರೆ ಎಂದರು.
ಎರಡು ಮೂರು ತಿಂಗಳಲ್ಲೇ ಈ ಪರಿಸ್ಥಿತಿ ಬಂದಿದೆ. ಮುಂದೆ ಇನ್ಯಾವ ಪರಿಸ್ಥಿತಿ ಬರುತ್ತೆ ಅಂತ ಕಾದು ನೋಡಿ. ಜನ ಈ ಸರ್ಕಾರದ ಮೇಲೆ ಶಾಪ ಹಾಕ್ತಿದಾರೆ. ನಾವು ಏಮಾರಿದೀವಿ ಅಂತ ಜನರಿಗೆ ಅರ್ಥ ಆಗಿದೆ. ಜನ ಎಲ್ಲವನ್ನೂ ಗಮನಿಸ್ತಿದಾರೆ. ಹೊಸ ಸರ್ಕಾರ ಬಂದಾಗ ಯಾರೇ ಲಂಚ ಕೇಳಿದ್ರೂ ನನ್ನ ಗಮನಕ್ಕೆ ತನ್ನಿ ಅಂತ ಡಿಕೆಶಿ ಹೇಳಿದರು. ಡಿಕೆಶಿ ಗಮನಕ್ಕೆ ತಂದ್ರೆ ಯಾವ ಪರಿಸ್ಥಿತಿ ಬರುತ್ತೆ ಅಂತ ಗುತ್ತಿಗೆದಾರರಿಗೆ ಅರ್ಥ ಆಗಿದೆ ಎಂದರು.
ಕಾಂಗ್ರೆಸ್ನವರು ತಮ್ಮ ಜೇಬೂ ತುಂಬಿಸಿಕೊಂಡು, ಕೇಂದ್ರದ ಕಾಂಗ್ರೆಸ್ನವರ ಜೇಬನ್ನೂ ತುಂಬುತ್ತಿದಾರೆ. ವಿಪಕ್ಷಗಳ ಶಾಸಕರು ಬಿಟ್ಬಿಡಿ, ಆಡಳಿತ ಪಕ್ಷದ ಸದಸ್ಯರೇ ತಮ್ಮ ಕ್ಷೇತ್ರದಲ್ಲಿ ತಲೆ ಎತ್ಕೊಂಡು ಓಡಾಡಕ್ಕೆ ಆಗ್ತಿಲ್ಲ. ಕಾಂಗ್ರೆಸ್ ಶಾಸಕರಿಗೆ ಒಂದು ರಸ್ತೆ ಮಾಡಿಸಲು, ಟಿಸಿ ಹಾಕಿಸಲು ಅನುದಾನ ಇಲ್ಲ. ಅವರ ಪಕ್ಷದ ಶಾಸಕರಿಗೇ ಹಣ ಕೊಡ್ತಿಲ್ಲ. ಆಡಳಿತ ಪಕ್ಷದ ಶಾಸಕರು ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಇಲ್ಲ ಎಂದು ಹೇಳಿದರು.
ಈ ಸರ್ಕಾರ ಯಾವ ದಿಕ್ಕಿಗೆ ಸಾಗ್ತಿದೆ? ರಾಜ್ಯವನ್ನು ಸಾಲದ ಕೂಪಕ್ಕೆ ತಳ್ತಿದಾರೆ. ಯಡಿಯೂರಪ್ಪ, ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಕೊಟ್ಟ ಅನುದಾನದಲ್ಲಿ ಕೆಲಸ ಆಗಿದೆ. ಜನ ಈಗಲೂ ಕೂಡಾ ಇದನ್ನು ನೆನಪಿಸಿಕೊಳ್ತಿದಾರೆ. ಈ ವರ್ಷ ಶಾಸಕರಿಗೆ ಅನುದಾನ ನಿರೀಕ್ಷೆ ಮಾಡಕ್ಕಾಗಲ್ಲ. ಕಾಂಗ್ರೆಸ್ ಶಾಸಕರು ಅಬ್ಬೇಪಾರಿಗಳಾಗಿದ್ದಾರೆ, ಜನ ಅಸಹಾಯಕರಾಗಿದ್ದಾರೆ ಎಂದು ಆರೋಪಿಸಿದರು.
ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಇದಾರೆ. ನಮಗೆ ಅಧ್ಯಕ್ಷರು ಇಲ್ಲ ಅಂತ ಏನಿಲ್ಲ. ಸರಕಾರದ ವಿರುದ್ಧ ಹೋರಾಟ ಬಗ್ಗೆ ನಿನ್ನೆ ಸಂಸದರ ಜತೆ ಕಟೀಲ್ ಅವರು ಚರ್ಚೆ ನಡೆಸಿದ್ದಾರೆ. ಸರ್ಕಾರದ ಲೋಪದೋಷಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇದರ ವಿರುದ್ಧ ಹೋರಾಟ ಮಾಡ್ತೇವೆ ಎಂದು ಹೇಳಿದರು.












Click it and Unblock the Notifications