ಮರಾಠ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ವಿಜಯೇಂದ್ರ ಮಹತ್ವದ ಹೇಳಿಕೆ!
ಬೆಂಗಳೂರು, ನ. 23: ಬಸವಕಲ್ಯಾಣ ಉಪ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದ ಬಿಜೆಪಿಗೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರ ಹಿನ್ನೆಡೆಗೆ ಕಾರಣವಾಗಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬಸವಕಲ್ಯಾಣ ಭೇಟಿ ಹಾಗೂ ಮರಾಠ ಸಮುದಾಯದ ನಾಯಕರೊಂದಿಗಿನ ಅವರ ಭೇಟಿ ಬಳಿಕ ಮರಾಠ ಪ್ರಾಧಿಕಾರ ರಚನೆಗೆ ರಾಜ್ಯ ಸರ್ಕಾರ ಆದೇಶ ಮಾಡಿದೆ. ಆದರೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬರುವ ಡಿಸೆಂಬರ್ 5 ರಂದು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಈ ಎಲ್ಲ ವಿಚಾರಗಳ ಬಗ್ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಬಸವಕಲ್ಯಾಣ ಚುನಾವಣೆ, ಸಂಪುಟ ವಿಸ್ತರಣೆ ಕರಿತೂ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಅವರು ಏನು ಹೇಳಿದ್ದಾರೆ? ಮುಂದಿದೆ ಸಂಪೂರ್ಣ ಮಾಹಿತಿ.
ದೆಹಲಿಗೆ ಹೋಗಿದ್ದು ಬೇರೆ ಕೆಲಸಕ್ಕೆ
ತಮ್ಮ ದೆಹಲಿ ಭೇಟಿಯ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ನಾನು ದೆಹಲಿಗೆ ಹೋಗಿದ್ದು ಖಾಸಗಿ ಕಾರಣಕ್ಕೆ ಎಂದು ಹೇಳಿಕೆ ನೀಡಿದ್ದಾರೆ. ರಾಜಕೀಯ ಕೆಲಸದಿಂದ ನಾನು ದೆಹಲಿಗೆ ಹೋಗಿರಲಿಲ್ಲ. ವೈಯಕ್ತಿಕ ಕಾರ್ಯ ನಿಮಿತ್ತ ಹೋಗಿದ್ದೆ. ಪಕ್ಷದ ಬೇರೆ ನಾಯಕರನ್ನು ಭೇಟಿ ಮಾಡಲು ಹೋಗಿರಲಿಲ್ಲ ಎಂದು ಸ್ಷಷ್ಟನೆ ಕೊಟ್ಟಿದ್ದಾರೆ.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ದೆಹಲಿಯಲ್ಲಿ ಸಿಎಂ ಭೇಟಿ ಮಾಡದ ಕಾರಣಕ್ಕೆ ವಿಜಯೇಂದ್ರ ದೆಹಲಿಗೆ ತೆರಳಿ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಅದಕ್ಕೆ ವಿಜಯೇಂದ್ರ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಬಸವಕಲ್ಯಾಣ ಉಪ ಚುನಾವಣೆ
ಇನ್ನು ಬಸವಕಲ್ಯಾಣ ಉಪ ಚುನಾವಣೆ ಕುರಿತು ಮಾತನಾಡಿರುವ ವಿಜಯೇಂದ್ರ ಅವರು, ಬಸವಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡಲು ರಾಜ್ಯಾಧ್ಯಕ್ಷ ಕಟೀಲ್ ಅವರು ಸೂಚಿಸಿದ್ದಾರೆ. ನಾನು ಹಾಗೂ ಸಂಸದ ಭಗವಂತ ಖೂಬಾ ಅವರು ಬಸವಕಲ್ಯಾಣ ಕ್ಷೇತ್ರದಲ್ಲಿ ಉಪ ಚುನಾವಣೆ ಕೆಲಸ ಮಾಡುತ್ತೇವೆ. ಡಿಸಿಎಂ ಲಕ್ಷ್ಮಣ ಸವದಿ ಅವರಿಗೂ ರಾಜ್ಯಾಧ್ಯಕ್ಷರು ಸೂಚಿಸಿದ್ದಾರೆ. ರಾಜ್ಯಧ್ಯಕ್ಷರ ಸೂಚನೆಯಂತೆ ನಾವೆಲ್ಲರೂ ಬಸವಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ವಿಜಯೇಂದ್ರ ಅವರು ಮಹತ್ವದ ಮಾತನ್ನಾಡಿದ್ದಾರೆ.
ತಪ್ಪು ಕಲ್ಪನೆ ಮೂಡಿದೆ, ಅದು ಸರಿಯಲ್ಲ
ರಾಜ್ಯದಲ್ಲಿರುವ ಮರಾಠಿಗರ ಅಭಿವೃದ್ಧಿಗೆ ಪ್ರಾಧಿಕಾರ ಮಾಡಲಾಗಿದೆ. ಇದನ್ನು ಭಾಷೆ ಜೊತೆಗೆ ಲಿಂಕ್ ಮಾಡುವುದು ಎಷ್ಟು ಸರಿ? ಮರಾಠಿಗರೂ ಸಹ ರಾಜ್ಯದಲ್ಲಿಯೇ ಹುಟ್ಟಿ ವಾಸವಿದ್ದಾರೆ. ಎಲ್ಲವನ್ನೂ ವಿವಾದಕ್ಕೆ ಸೇರಿಸುವುದು ಸರಿಯಲ್ಲ. ಈ ಹಿಂದೆಯೆ ತಿರುವಳ್ಳುವರ್ ಹಾಗೂ ಸರ್ವಜ್ಞ ಅವರುಗಳ ಪ್ರತಿಮೆಗಳನ್ನು ನಿರ್ಮಿಸುವ ಮೂಲಕ ತಮಿಳುನಾಡಿನೊಂದಿಗೆ ಇದ್ದ ದಶಕಗಳ ವಿವಾದವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೌಹಾರ್ದಯುತವಾಗಿ ಮಾತನಾಡುವ ಮೂಲಕ ಬಗೆಹರಿಸಿದ್ದಾರೆ. ಈಗ ಮರಾಠ ಪ್ರಾಧಿಕಾರದ ರಚನೆ ಕುರಿತು ಕೆಲವು ತಪ್ಪು ಕಲ್ಪನೆ ಮೂಡಿದೆ, ಅದು ಸರಿಯಲ್ಲ ಎಂದು ವಿಜಯೇಂದ್ರ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮರಾಠಿ ಅಭಿವೃದ್ಧಿ ಪ್ರಾಧಿಕಾರದ ವಿಚಾರದಲ್ಲಿ ಕನ್ನಡ ಪರಸಂಘಟನೆಗಳಿಗೆ ತಪ್ಪು ಕಲ್ಪನೆಯಿದೆ ಎಂಬುದು ವಿಜಯೇಂದ್ರ ಅವರ ಹೇಳಿಕೆಯಲ್ಲಿ ವ್ಯಕ್ತವಾಗಿದೆ.
Recommended Video
ಸಂಪುಟ ವಿಸ್ತರಣೆ ವಿಳಂಬ ವಿಚಾರ
ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದರ ಕುರಿತು ಮಾತನಾಡಿರು ವಿಜಯೇಂದ್ರ ಅವರು, ಸಂಪುಟ ವಿಸ್ತರಣೆ ಕುರಿತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ನಮ್ಮ ಪಕ್ಷದ ವರಿಷ್ಠರು ಯಾವಾಗ ನಿರ್ಧಾರ ಮಾಡುತ್ತಾರೆ ಎಂಬುದನ್ನು ನೋಡಬೇಕು. ವರಿಷ್ಠರ ನಿರ್ಧಾರ ಹೊರಬಿದ್ದಾಗ ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಒಟ್ಟಾರೆ ಮರಾಠ ಅಭಿವೃದ್ಧಿ ಪ್ರಾಧಿಕಾರದ ರಚನೆಯಲ್ಲಿ ಯಾವುದೇ ತಪ್ಪಿಲ್ಲ. ಆದರೆ ಕನ್ನಡ ಪರ ಸಂಘಟನೆಗಳಿಗೆ ತಪ್ಪು ಕಲ್ಪನೆ ಉಂಟಾಗಿದೆ ಎಂದು ವಿಜಯೇಂದ್ರ ಅವರು ಹೇಳಿದ್ದಾರೆ.