ಲೋಕಸಭಾ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮಹತ್ವದ ಹೇಳಿಕೆ ನೀಡಿದ ಬಿ ವೈ ವಿಜಯೇಂದ್ರ
ಬೆಂಗಳೂರು, ಜನವರಿ 12: ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಲೋಕಸಭಾ ಚುನಾವಣೆ 2024ರ ಸಿದ್ಧತಾ ಸಭಯೂನ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದಿದೆ.
ಈ ಸಭೆಯ ಬಳಿಕ ಬಿ ವೈ ವಿಜಯೇಂದ್ರ ಮಾತನಾಡಿ, ಅತಿ ಶೀಘ್ರದಲ್ಲೇ ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಆಗಬೇಕು ಎಂಬ ಆಶಯ ನಮ್ಮದು. ಆಗ ಕಾರ್ಯಕರ್ತರಿಗೂ ಗೊಂದಲ ಇರುವುದಿಲ್ಲ. ಇದೇ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಅತಿ ಶೀಘ್ರವೇ ದೆಹಲಿಗೆ ತೆರಳುತ್ತೇನೆ. ವರಿಷ್ಠರನ್ನು ಭೇಟಿ ಮಾಡುತ್ತೇನೆ. ಕೇಂದ್ರದ ವರಿಷ್ಠರ ಜೊತೆ ಇದರ ಕುರಿತು ಚರ್ಚಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.

ಭ್ರಷ್ಟ, ದುಷ್ಟ, ರೈತವಿರೋಧಿ, ಬಡವರ ವಿರೋಧಿ ಸರಕಾರವನ್ನು ಲೋಕಸಭಾ ಚುನಾವಣೆಯಲ್ಲಿ ಮಣಿಸಬೇಕಿದೆ. ಆದ್ದರಿಂದ ವರಿಷ್ಠರನ್ನು ಭೇಟಿ ಮಾಡಿ ಅತಿ ಶೀಘ್ರವೇ ಅಭ್ಯರ್ಥಿಗಳ ಕುರಿತು ಸ್ಪಷ್ಟತೆ ಕೊಡಲು ಮನವಿ ಮಾಡಲಿದ್ದೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ತನ್ನ ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡತಕ್ಕ ಫಲಿತಾಂಶವನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದ ಎಲ್ಲ 28 ಸ್ಥಾನಗಳನ್ನು ಬಿಜೆಪಿ ಗೆಲ್ಲುವಂತೆ ಮಾಡಿ ಮೋದಿಜೀ ಅವರಿಗೆ ಬೆಂಬಲ ನೀಡುವ ವಿಶ್ವಾಸ ಇದೆ. ಪಕ್ಷದ ಎಲ್ಲ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಒಗ್ಗಟ್ಟಾಗಿ, ಒಂದಾಗಿ ಕಾರ್ಯ ನಿರ್ವಹಿಸುತ್ತೇವೆ. ಆ ಮೂಲಕ ಮುಂದಿನ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಲಿದ್ದೇವೆ. ರಾಜ್ಯದಲ್ಲಿ 14 ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಇದ್ದರೂ ರಾಜ್ಯದ ಹಣಕಾಸಿನ ಸ್ಥಿತಿ ಅಧೋಗತಿಗೆ ಹೋಗುತ್ತಿದೆ. ಸರಕಾರಿ ನೌಕರರಿಗೆ ಸಂಬಳ ಕೊಡಲು ಇವರಿಗೆ ಆಗುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ನೀಡಲು ಇವರಿಂದ ಆಗುತ್ತಿಲ್ಲ. ಶಾಸಕರಿಗೆ ಒಂದು ರೂಪಾಯಿ ಅನುದಾನ ಕೊಡಲೂ ಆಗುತ್ತಿಲ್ಲ. ಇದರ ನಡುವೆ ಕೋಟ್ಯಂತರ ರೂಪಾಯಿ ದುರುಪಯೋಗ ಪಡಿಸಿಕೊಂಡರು ಎಂದು ಹೇಳಿದರು.
ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದವರು 18-20 ಸ್ಥಾನ ಗೆಲ್ಲುವ ಭ್ರಮೆಯಲ್ಲಿದ್ದರು. ಸಚಿವರನ್ನು ಲೋಕಸಭೆ ಚುನಾವಣೆ ಕಣಕ್ಕಿಳಿಸುವ ಚರ್ಚೆ ಆಗುತ್ತಿತ್ತು. ಈಗ ಬಿಜೆಪಿ ಪರ ವಾತಾವರಣ ಗಮನಿಸಿದ ಆಡಳಿತ ಪಕ್ಷದ ಯಾವನೇ ಸಚಿವರೂ ಚುನಾವಣೆಗೆ ನಿಲ್ಲಲು ತಯಾರಿಲ್ಲ ಎಂಬ ಸ್ಥಿತಿ ಇದೆ ಎಂದು ತಿಳಿಸಿದರು.
ಮಂತ್ರಿಯಾಗಿ ಸೋತರೆ ಮುಖಭಂಗ ಆಗುವ ಆತಂಕ, ಸತ್ಯದ ಅರಿವಾಗಿದೆ. ಆದ್ದರಿಂದ ಯಾವುದೇ ಸಚಿವರು ಸ್ಪರ್ಧೆಗೆ ಮುಂದಾಗುತ್ತಿಲ್ಲ. ಎಲ್ಲ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ವಾತಾವರಣ ಇದೆ. ನಮ್ಮ ಸಂಸದರೂ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ. ಈ ಕುರಿತು ಅಂತಿಮವಾಗಿ ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ. ದೆಹಲಿ ಮಟ್ಟದಲ್ಲಿ ಜೆಡಿಎಸ್ ಅನ್ನು ಎನ್ಡಿಎಗೆ ಸೇರಿಸಿಕೊಂಡಿದ್ದೇವೆ. ನಮ್ಮ ಪಕ್ಷದ ಹಿರಿಯರು, ಜೆಡಿಎಸ್ ಪಕ್ಷದ ಹಿರಿಯರು ಚರ್ಚೆ ಮಾಡುತ್ತೇವೆ ಎಂದು ಸೀಟು ಹಂಚಿಕೆ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ರಾಜ್ಯ, ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರ ನಡುವೆ ಸಮಸ್ಯೆ ಬರದಂತೆ ಸಮನ್ವಯತೆ ಸಾಧಿಸಲಿದ್ದೇವೆ ಎಂದು ನುಡಿದರು. ಸುಮಲತಾ ಅವರ ಜೊತೆಗೂ ಚರ್ಚಿಸುತ್ತೇನೆ. ಬಳಿಕ ತೀರ್ಮಾನ ಮಾಡುವುದಾಗಿ ಹೇಳಿದರು.
4 ಮತ್ತು 5 ಲೋಕಸಭಾ ಕ್ಷೇತ್ರವಿರುವ ಒಟ್ಟು 8 ಕ್ಲಸ್ಟರ್ಗಳ ಸಂಸದರು, ಕ್ಷೇತ್ರದ ಶಾಸಕರು, ಮಾಜಿ ಶಾಸಕರು, ಪಕ್ಷದ ಪ್ರಮುಖರ ಜೊತೆ ಸುದೀರ್ಘ ಚರ್ಚೆ ಮಾಡಿದ್ದೇವೆ. ರಾಜ್ಯ, ದೇಶದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿದ್ದರೂ ಈಗ ಸಾಕಷ್ಟು ಬದಲಾವಣೆ ಆಗಿದೆ. ಮೋದಿಜೀ ಅವರ ಜನಪ್ರಿಯತೆಯಿಂದ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಬರಲಿದೆ. ರಾಜ್ಯದಲ್ಲೂ ಅದಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.












Click it and Unblock the Notifications