ಸಿಎಂ ಬೊಮ್ಮಾಯಿ ಬದಲಾವಣೆ ಸುದ್ದಿ: ಬಿ.ವೈ.ವಿಜಯೇಂದ್ರ ಸ್ಪಷ್ಟನೆ
ದಾವಣಗೆರೆ, ನ 11: ಬಿಟ್ ಕಾಯಿನ್ ಹಗರಣ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಮಧ್ಯೆ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಕಾಂಗ್ರೆಸ್ ನಾಯಕರು, ಬಿಜೆಪಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ದ ಸತತ ಆರೋಪವನ್ನು ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ, ಸಿಎಂ ಬೊಮ್ಮಾಯಿ ದೆಹಲಿಗೆ ಪ್ರಯಾಣಿಸಿ, ಪ್ರಧಾನಿ, ಅಮಿತ್ ಶಾ ಮತ್ತು ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ದಾ ಅವರನ್ನು ಭೇಟಿಯಾಗುತ್ತಿದ್ದಾರೆ.
ಕಲಬುರಗಿಯಲ್ಲಿ ಮಾತನಾಡುತ್ತಿದ್ದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, "ಬಿಜೆಪಿಯಲ್ಲಿ ಈ ಬಾರಿಯೂ ಮೂರು ಮುಖ್ಯಮಂತ್ರಿಗಳಾಗಲಿದ್ದಾರೆ"ಎನ್ನುವ ಮೂಲಕ, ಸಿಎಂ ಬೊಮ್ಮಾಯಿ ತಲೆದಂಡವಾಗಲಿದೆ ಎಂದು ಹೇಳಿದ್ದರು. ಮತ್ತೋರ್ವ ಕಾಂಗ್ರೆಸ್ ಮುಖಂಡ ಶಿವರಾಜ್ ತಂಗಡಗಿ ಕೂಡಾ ಅದೇ ದಾಟಿಯಲ್ಲಿ ಮಾತನಾಡಿದ್ದರು.
ಬಿಟ್ ಕಾಯಿನ್ ವಿಚಾರದಲ್ಲಿ ಅನಾಮಿಕ ವ್ಯಕ್ತಿಯೋರ್ವರು ಪ್ರಧಾನಿ ಮೋದಿಗೆ ಪತ್ರವನ್ನು ಬರೆದಿದ್ದಾರೆ ಎನ್ನುವ ಸುದ್ದಿಯ ನಡುವೆ, ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ಒಂದೇ ಸಮನೆ ಮುಗಿ ಬೀಳುತ್ತಿದ್ದಾರೆ. ಈ ಬಗ್ಗೆ ದಾವಣಗೆರೆಯಲ್ಲಿ ವಿಜಯೇಂದ್ರ ಸ್ಪಷ್ಟನೆಯನ್ನು ನೀಡಿದ್ದಾರೆ.

ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಹೆಸರೇ ಕೇಳಿ ಬರುತ್ತಿದೆ
"ರಾಜ್ಯದ ಆಡಳಿತವನ್ನು ಕುಂಠಿತಗೊಳಿಸಲು ಕಾಂಗ್ರೆಸ್ ನಾಯಕರು ಈ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಹೆಸರೇ ಕೇಳಿ ಬರುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತಲೆದಂಡವಾಗಲಿದೆ ಎನ್ನುವ ಸುದ್ದಿ ಕಪೋಕಲ್ಪಿತ. ಯಾವುದೇ ಆಧಾರವಿಲ್ಲದೇ, ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ"ಎಂದು ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿ. ಈ ಬಗ್ಗೆ ಸಂದೇಹ ಬೇಡ
"ಹಾಲೀ ಸರಕಾರದ ಅವಧಿ ಮುಗಿಯಲು ಇನ್ನೂ ಒಂದೂವರೆ ವರ್ಷದ ಮೇಲಿದೆ, ಅಲ್ಲಿಯವರೆಗೆ ಬಸವರಾಜ ಬೊಮ್ಮಾಯಿಯವರೇ ನಮ್ಮ ಮುಖ್ಯಮಂತ್ರಿ. ಈ ಬಗ್ಗೆ ಸಂದೇಹ ಬೇಡ, ಕಾಂಗ್ರೆಸ್ ಪಕ್ಷದ ಪಿತೂರಿಯಿಂದ ಇಂತಹ ಸುದ್ದಿಗಳು ಹರಿದಾಡುತ್ತಿದೆ. ಮುಂದಿನ ಸಿಎಂ ಯಾರಾಗಬೇಕು ಎನ್ನುವುದನ್ನು ಜನರು ಮತ್ತು ನಮ್ಮ ಪಕ್ಷದ ನಾಯಕರು ನಿರ್ಧರಿಸಿದ್ದಾರೆ. ಆ ಬಗ್ಗೆ ಈಗೇಕೆ ಅವಸರ"ಎಂದು ವಿಜಯೇಂದ್ರ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಯಾವುದೇ ಆಧಾರವಿಲ್ಲದೇ ಬಿಜೆಪಿ ಮೇಲೆ ಆರೋಪ
"ಬಿಟ್ ಕಾಯಿನ್ ಹಗರಣ ನಮ್ಮ ಕಾಲದಲ್ಲಿ ನಡೆದದ್ದು ಅಲ್ಲ, ನಾಲ್ಕು ವರ್ಷಗಳ ಹಿಂದೆ ನಡೆದಿರುವಂತದ್ದು. ಕಾಂಗ್ರೆಸ್ ನಾಯಕರು ಯಾವುದೇ ಆಧಾರವಿಲ್ಲದೇ ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ದೆಹಲಿಗೆ ಹೋಗಿರುವುದಕ್ಕೆ ಬೇರೆ ಬಣ್ಣ ಕಟ್ಟುವ ಅವಶ್ಯಕತೆಯಿಲ್ಲ, ಮೇಲ್ನೋಟಕ್ಕೆ ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು ಇದರಲ್ಲಿ ಕೇಳಿ ಬರುತ್ತಿದೆ. ಇದನ್ನು ಮುಚ್ಚಿ ಹಾಕಲು ನಮ್ಮ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದಾರೆ"ಎಂದು ವಿಜಯೇಂದ್ರ ಈ ಸಂದರ್ಭದಲ್ಲಿ ಹೇಳಿದ್ದಾರೆ. ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಇಬ್ಬರು ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು ಇದೆ ಎನ್ನುವ ಅಂಶ ಈಗ ಬಿಜೆಪಿ ನಾಯಕರುಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.
Recommended Video

ಬೊಮ್ಮಾಯಿ ಮಾತನಾಡುವುದನ್ನು ನೋಡಿದರೆ, ಅವರ ಮೇಲೆಯೇ ಅನುಮಾನ
"ಬಿಟ್ ಕಾಯಿನ್ ಹಗರಣದಲ್ಲಿ ಯಾರೇ ಭಾಗಿಯಾಗಿರಲಿ ಅದು ಬಿಜೆಪಿ ಅವರೇ ಆಗಿರಲಿ, ಕಾಂಗ್ರೆಸ್ ಅವರೇ ಆಗಲಿ ಮೊದಲು ಬುಕ್ ಮಾಡಲಿ. ಹೆಸರು ಹೇಳಲಿ, ರಾಜ್ಯ ಮತ್ತು ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಎಸ್ಕೇಪ್ ಆಗಲು ಏನೇನೋ ಹೇಳಿಕೆ ನೀಡಬಾರದು. ಹೆಸರು ಹೇಳಲು ಆಗಿಲ್ಲ ಎಂದರೆ ಬಿಟ್ಟು ಕೊಡಲಿ, ನಾವು ನೋಡಿಕೊಳ್ಳುತ್ತೇವೆ. ಬೊಮ್ಮಾಯಿ ಮಾತನಾಡುವುದನ್ನು ನೋಡಿದರೆ, ಅವರ ಮೇಲೆಯೇ ಅನುಮಾನ ಬರುತ್ತದೆ. ಅವರೇ ಸಿಕ್ಕಿಹಾಕಿಕೊಂಡ ಹಾಗೇ ನಡೆದುಕೊಳ್ಳುತ್ತಿದ್ದಾರೆ. ನಾನು ಎಲ್ಲೂ ಬೊಮ್ಮಾಯಿಯವರ ಹೆಸರು ಪ್ರಸ್ತಾವಿಸಿಲ್ಲ"ಎಂದು ಸಿದ್ದರಾಮಯ್ಯ ಕೂಡಾ ಹೇಳಿದ್ದರು.












Click it and Unblock the Notifications