ಸಿದ್ದರಾಮಯ್ಯನವರೇ 'ನೀನೇ ಸಾಕಿದ ಗಿಣಿ, ನಿನ್ನಾ ಹದ್ದಾಗಿ ಕುಕ್ಕಿತಲ್ಲೋ'
Recommended Video
ಸಾರ್ವತ್ರಿಕ ಚುನಾವಣೆಯನ್ನೇ ನಾಚಿಸುವಂತೆ ಸಾಗುತ್ತಿದೆ, ಸದ್ಯದ ಅಸೆಂಬ್ಲಿ ಉಪಚುನಾವಣೆಯ ಭರಾಟೆ. ಮೂರು ಪಕ್ಷಗಳ ಆರೋಪ, ಪ್ರತ್ಯಾರೋಪ ಇನ್ನು ಉಪಚುನಾವಣೆಯ ಬಹಿರಂಗ ಪ್ರಚಾರ ಮುಕ್ತಾಯದ ಹೊತ್ತಿಗೆ ಇನ್ನೆಲ್ಲಿಗೆ ಬಂದು ನಿಲ್ಲುತ್ತೋ?
ಈ ಉಪಚುನಾವಣೆಯ ಫಲಿತಾಂಶದ ಮೇಲೆ, ಯಡಿಯೂರಪ್ಪನವರ ಸರಕಾರದ ಭವಿಷ್ಯ ನಿಂತಿದೆ. ಒಂದು ವೇಳೆ, ಸರಳ ಬಹುಮತಕ್ಕೆ ಬೇಕಾಗುವ ಸ್ಥಾನವನ್ನು ಬಿಜೆಪಿ ಗೆಲ್ಲಲಾಗದಿದ್ದರೆ, ರಾಜಕೀಯದ ಸಮೀಕರಣವೇ ಬದಲಾಗಲಿದೆ.
ವಿರೋಧ ಪಕ್ಷದ ನಾಯಕರಾಗಿರುವ, ಕಾಂಗ್ರೆಸ್ಸಿನ ಮಾಸ್ ಲೀಡರ್, ಸಿದ್ದರಾಮಯ್ಯನವರ ಮೇಲೆ ಇನ್ನಿಲ್ಲದ ಒತ್ತಡವಿದೆ. ಅದಕ್ಕೆ ಹಲವಾರು ಕಾರಣಗಳು. ಅದರಲ್ಲಿ ಒಂದು ಪ್ರಮುಖವಾದದ್ದು, ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದವರಲ್ಲಿ, ಕೆಲವರು ಸಿದ್ದರಾಮಯ್ಯನವರ ಶಿಷ್ಯರು ಎನ್ನುವ ಕಾರಣಕ್ಕಾಗಿ.
ಇದಕ್ಕೆ ಸಮರ್ಥವಾಗಿ ಸಿದ್ದರಾಮಯ್ಯ ಉತ್ತರವನ್ನು ನೀಡಿದ್ದರು. ಸಿದ್ದರಾಮಯ್ಯನವರ ಶಿಷ್ಯರೆಂದೇ ಗುರುತಿಸಿಕೊಂಡು, ರಾಜ್ಯ ರಾಜಕೀಯದಲ್ಲಿ ಇನ್ನೊಂದು ಮಜಲಿಗೆ ಏರಿದ್ದ, ಈಗ ಬಿಜೆಪಿಯಲ್ಲಿರುವ ಕೆಲವು ಅಭ್ಯರ್ಥಿ/ಮುಖಂಡರು, ಅವರ ವಿರುದ್ದವೇ ವಾಕ್ ಪ್ರಹಾರವನ್ನೇ ನಡೆಸುತ್ತಿದ್ದಾರೆ. ಅದರ ಕೆಲವೊಂದು ಸ್ಯಾಂಪಲ್..

ಸಿದ್ದರಾಮಯ್ಯ ಹೇಳಿದ್ದ ಮಾತು
"ನಮಗೆ ದ್ರೋಹ ಬಗೆದು ಪಕ್ಷವನ್ನು ಬಿಟ್ಟು ಯಾರು ಬಿಜೆಪಿ ಜತೆ ಹೋಗಿದ್ದಾರೋ, ಅವರನ್ನು ಪ್ರಳಯವಾದರೂ ಮತ್ತೆ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ" ಎಂದು ಸಿದ್ದರಾಮಯ್ಯ, ಹಲವು ಬಾರಿ ಹೇಳಿದ್ದರು. "ಪಕ್ಷಾಂತರಿಗಳಿಗೆ ಸುಪ್ರೀಂಕೋರ್ಟ್ ತೀರ್ಪು ಪಾಠವಾಗಲಿ" ಎನ್ನುವ ಮಾತನ್ನೂ ಸಿದ್ದರಾಮಯ್ಯ ನುಡಿದಿದ್ದರು.

ಅನರ್ಹಗೊಂಡಿರುವ ಬೈರತಿ ಬಸವರಾಜ್
"ನಮ್ಮನ್ನೆಲ್ಲರನ್ನೂ ಅನರ್ಹ ಮಾಡಿದ ಸ್ಪೀಕರ್ ರಮೇಶ್ ಕುಮಾರ್ ಮತ್ತು ಸಿದ್ದರಾಮಯ್ಯನವರನ್ನು ಆ ದೇವರು ಚೆನ್ನಾಗಿಟ್ಟಿರಲಿ. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ಬರುವುದಕ್ಕೆ ಮೊದಲೇ ನಾನು ಕಾಂಗ್ರೆಸ್ ನಲ್ಲಿದ್ದೇವೆ. ರಾಜಕಾರಣ ಇಲ್ಲದಿದ್ದದರೂ ಪರವಾಗಿಲ್ಲ, ನಾವು ನಮ್ಮ ಮನೆಯಲ್ಲಿ ಇರುತ್ತೇವೆ. ರಾಜಕಾರಣ ಮಾಡಿ ಬದುಕಬೇಕು ಎಂಬ ಅನಿವಾರ್ಯತೆ ನನಗಿಲ್ಲ" - ಬೈರತಿ ಬಸವರಾಜ್ ( ಕೆ.ಆರ್.ಪುರ, ಬೆಂಗಳೂರು)

ಅನರ್ಹಗೊಂಡಿರುವ ಡಾ.ಸುಧಾಕರ್
"ಪಕ್ಷಕ್ಕಾಗಿ ನಮ್ಮನ್ನು ನಂಬಿರುವ ನಾಯಕರಿಗಾಗಿ ನಿಮ್ಮ ನಾಯಕತ್ವವನ್ನು ಆರು ವರ್ಷಗಳ ಕಾಲ ಹೆಗಲ ಮೇಲೆ ಹೊತ್ತುಕೊಂಡು ನಾವು ನಿಮ್ಮನ್ನು ರಕ್ಷಣೆ ಮಾಡಿದೆವು. ನಿಮ್ಮ ವಿರುದ್ಧ ಯಾರು ಕೂಡ ಒಂದೂ ಮಾತನಾಡದಂತೆ ಹೋರಾಟ ಮಾಡಿದ ನಮ್ಮನ್ನೇ ನೀವು ಅನರ್ಹಗೊಳಿಸಿದಿರಲ್ಲ,
ನಿಮಗೆ ಹೃದಯ, ಮನಸ್ಸು ಇದೆಯೇ? ನಿಮ್ಮ ಹಗೆತನವನ್ನು ನಮ್ಮ ಮೇಲೆ ತೋರಿಸಬೇಡಿ. ನಿಮಗೆ ತಾಕತ್ತು ಇದ್ದರೆ ನಿಮ್ಮನ್ನು ರಾಜಕೀಯವಾಗಿ ಮುಗಿಸಿದವರ ಮೇಲೆ ನಿಮ್ಮ ಹಗೆತನ ತೋರಿಸಿ" - ಡಾ.ಕೆ. ಸುಧಾಕರ್ (ಚಿಕ್ಕಬಳ್ಳಾಪುರ)

ಅನರ್ಹಗೊಂಡಿರುವ ಎಂಟಿಬಿ ನಾಗರಾಜ್
ಕುರುಬ ಸಮುದಾಯಕ್ಕೆ ಅವರು ಏನೂ ಮಾಡಿಲ್ಲ. ಅಲ್ಲದೇ ಅವರೇ ಕುರುಬ ಸಮುದಾಯವನ್ನು ಹಾಳು ಮಾಡಿದ್ದಾರೆ. ಸಿದ್ದರಾಮಯ್ಯ ಯಾವ ಸೀಮೆ ನಾಯಕ? ಅವರು ಎಲ್ಲರೂ ನನ್ನ ಕೈ ಕೆಳಗೆ ಇರಬೇಕು ಅಂತ ಬಯಸೋ ನಾಯಕರಾಗಿದ್ದಾರೆ. ತಾಕತ್ತಿದ್ದರೆ ಸಿದ್ದರಾಮಯ್ಯ ನನ್ನ ಜೊತೆ ಚರ್ಚೆಗೆ ಮುಂದಾಗಲಿ ನಾನು ಉತ್ತರ ನೀಡಲು ಸಿದ್ಧನಿದ್ದೇನೆ.
ಎರಡನೇ ಹಂತದ ನಾಯಕರಾಗಿಯೇ ಇರಬೇಕು ಅಂತ ನಮ್ಮನ್ನ ತುಳಿದರು. 5 ವರ್ಷ ಮುಖ್ಯಮಂತ್ರಿ ಆದರು. ಸಮುದಾಯಕ್ಕೆ ಒಂದು ಮೆಡಿಕಲ್ ಕಾಲೇಜು ಮಾಡಿಕೊಡಲಿಲ್ಲ" - ಎಂಟಿಬಿ ನಾಗರಾಜ್ (ಹೊಸಕೋಟೆ, ಬೆಂಗಳೂರು ಗ್ರಾಮಾಂತರ)

ಅನರ್ಹಗೊಂಡಿರುವ ಮುನಿರತ್ನ ನಾಯ್ಡು
ಬಿಜೆಪಿ ಸರ್ಕಾರ ಇವತ್ತು ಬೀಳುತ್ತೆ, ಇನ್ನೆರಡು ತಿಂಗಳಿಗೆ ಬೀಳುತ್ತೆ, ಮಧ್ಯಂತರ ಚುನಾವಣೆ ಬರುತ್ತೆ ಎಂದು ಹೇಳುತ್ತಾರೆ. ಇವರು ಕಾಲಜ್ಞಾನಿಗಳಾಗಿಬಿಟ್ಟಿದ್ದಾರೆ. ಈ ಕಾಲ ಜ್ಞಾನ ಸಮ್ಮಿಶ್ರ ಸರ್ಕಾರ ಇದ್ದಾಗ ಇರಬೇಕಿತ್ತು.
ನಮ್ಮ ಶಾಸಕರಿಗೆ ಬೇಸರವಾದಾಗ ಇರಬೇಕಿತ್ತು. ಈಗೇನೂ ಎಲ್ಲರೂ ಕಾಲ ಜ್ಞಾನ ಹೇಳುವವರೇ ಆಗಿಹೋಗಿದ್ದಾರೆ. ಈ ಕಾಲ ಜ್ಞಾನ ಮೊದಲೇ ಇದ್ದಿದ್ದರೆ ಮೈತ್ರಿ ಸರ್ಕಾರ ಉಳಿಸಬಹುದಿತ್ತೋ ಏನೋ" - ಮುನಿರತ್ನ ನಾಯ್ಡು (ರಾಜರಾಜೇಶ್ವರಿ ನಗರ, ಬೆಂಗಳೂರು)












Click it and Unblock the Notifications