ಉಪಚುನಾವಣೆ ರಾಜಕೀಯ: ಧರ್ಮ ಸಂಕಟದಲ್ಲಿ ಸಿಲುಕಿದರೇ ಸುತ್ತೂರು ಶ್ರೀಗಳು
ಉಪಚುನಾವಣೆಯಲ್ಲಿ ಸುತ್ತೂರು ಮಠದ ಶ್ರೀಗಳ ಆಶೀರ್ವಾದ ಪಡೆದು ಎರಡೂ ಪಕ್ಷದ ಅಭ್ಯರ್ಥಿಗಳು ಸಕ್ರಿಯ ಪ್ರಚಾರ ನಡೆಸುತ್ತಿದ್ದಾರೆ. ಶ್ರೀಗಳು ತಮ್ಮ ಪರವಾಗಿದ್ದಾರೆಂದು ಪ್ರಚಾರ ನಡೆಸುತ್ತಿರುವುದು, ಶ್ರೀಗಳನ್ನು ಧರ್ಮ ಸಂಕಟಕ್ಕೆ ಸಿಲುಕುವಂತೆ ಮಾಡಿದೆ.
ಜಾತಿ ಸಮೀಕರಣವೇ ಅಂತಿಮವಾಗಿರುವ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಒಂದೊಂದು ಸಮುದಾಯಕ್ಕೂ ಒಂದೊಂದು ಮಠ. ಹಾಗೇ, ಆ ಸಮುದಾಯವನ್ನು ಓಲೈಸಬೇಕಾದರೆ ಆ ಮಠದ ಶ್ರೀಗಳ ಆಶೀರ್ವಾದ ಪಡೆದುಕೊಂಡು ಬರುವುದೊಂದು ವಾಡಿಕೆ.
ಇದೇ ಜಾತಿ ಸಮೀಕರಣ ಎನ್ನುವ ಪ್ರಭಲ ಅಸ್ತ್ರದಲ್ಲೇ ನಡೆಯುತ್ತಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ವೀರಶೈವ/ಲಿಂಗಾಯಿತ ಮತ, ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ನಿರ್ಣಾಯಕ ವೋಟ್ ಬ್ಯಾಂಕ್.
ಚಾಮರಾಜನಗರ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಉಪಚುನಾವಣೆ ನಡೆಯುವ ಎರಡೂ ಕ್ಷೇತ್ರಗಳಿಗೂ ಹತ್ತಿರುವಾಗಿರುವುದು ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ನಾಡಿನ ಪ್ರಮುಖ ಲಿಂಗಾಯಿತ ಮಠ ಸುತ್ತೂರು ಮಠ.
ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಮಠದ ಹೆಸರನ್ನು ಉತ್ತುಂಗಕ್ಕೇರಿಸುತ್ತಿರುವ ಹಾಲೀ ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿಯವರ ಆಶೀರ್ವಾದ ಪಡೆದು ಎರಡೂ ಪಕ್ಷದ ಅಭ್ಯರ್ಥಿಗಳು ಸಕ್ರಿಯ ಪ್ರಚಾರ ನಡೆಸುತ್ತಿದ್ದಾರೆ.
ಶ್ರೀಗಳ ಆಶೀರ್ವಾದವನ್ನು ಬಳಸಿಕೊಂಡು ಸುತ್ತೂರು ಶ್ರೀಗಳು ತಮ್ಮ ಪರವಾಗಿದ್ದಾರೆಂದು ಪ್ರಚಾರ ನಡೆಸುತ್ತಿರುವುದು, ಶ್ರೀಗಳನ್ನು ಧರ್ಮ ಸಂಕಟಕ್ಕೆ ಸಿಲುಕುವಂತೆ ಮಾಡಿದೆ.
ಶ್ರೀಗಳ ಆಶೀರ್ವಾದ ಪಡೆದು ಬಂದಿದ್ದೇನೆ
ಸ್ವಾಮೀಜಿಯವ ಆಶೀರ್ವಾದ ಪಡೆದು ಚುನಾವಣಾ ಪ್ರಚಾರಕ್ಕೆ ಬಂದಿದ್ದೇನೆ. ಎಲ್ಲದಕ್ಕಿಂತಲೂ ಮಿಗಿಲಾಗಿ ಸುತ್ತೂರು ಶ್ರೀಗಳ ಆಶೀರ್ವಾದವನ್ನು ಪಡೆದುಕೊಂಡು ನಿಮ್ಮ ಮುಂದಿದ್ದೇನೆ ಎಂದು ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹಾದೇವ ಪ್ರಸಾದ್ ಹೇಳಿದ್ದಾರೆ. ಈ ಹಿಂದೆ ಶ್ರೀಗಳ ಅಣತಿಯಂತೆ ಚುನಾವಣಾ ಕಣಕ್ಕೆ ಇಳಿದಿದ್ದೇನೆಂದು ಗೀತಾ ಹೇಳಿದ್ದರು.
ಗೀತಾ ಮಹಾದೇವ ಪ್ರಸಾದ್ ಮಠದ ಮಗಳು, ಡಿಕೆಶಿ ಹೇಳಿಕೆ
ಶ್ರೀಗಳ ಪಾದಾರವಿಂದಕ್ಕೆ ನನ್ನ ಪ್ರಣಾಮಗಳು. ಮಹಾದೇವ ಪ್ರಸಾದ್ ಮಠದ ಮಗ, ಗೀತಾ ಮಹಾದೇವ ಪ್ರಸಾದ್ ಮಠದ ಮಗಳು. ಗೀತಾ ಈಗ ಕಷ್ಟದಲ್ಲಿದ್ದಾರೆ, ಪೂಜ್ಯ ಶ್ರೀಗಳು ಮಗಳ ರಕ್ಷಣೆಗೆ ಬರಬೇಕು ಎಂದು ಇಂಧನ ಸಚಿವ ಡಿ ಕೆ ಶಿವಕುಮಾರ್ ಗುರುವಾರ (ಮಾ 30) ಹೇಳಿದ್ದರು.
ಯಡಿಯೂರಪ್ಪ ಬೇಸರ
ಗೀತಾ ಮತ್ತು ಡಿಕೆಶಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ದಯವಿಟ್ಟು ಇದಕ್ಕೆಲ್ಲಾ ಶ್ರೀಗಳನ್ನು ಎಳೆದು ತರಬೇಡಿ. ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಅವರನ್ನೂ ಮಠಕ್ಕೆ ಕರೆದುಕೊಂಡು ಹೋಗಿ, ನಾವೂ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದುಕೊಂಡು ಬಂದಿದ್ದೇವೆ - ಯಡಿಯೂರಪ್ಪ.
ಶ್ರೀಗಳ ಹೆಸರನ್ನು ಎಳೆದು ತರಬೇಡಿ, ಬಿಎಸ್ವೈ ಮನವಿ
ಶ್ರೀಗಳು ಆಶೀರ್ವಾದ ಮಾಡಿದ್ದಾರೆಂದು ಅವರು ಆ ಪಕ್ಷದ ಪರವಾಗಿ ಅಂತಲ್ಲ. ಎಲ್ಲಾ ಭಕ್ತರಿಗೂ ಶ್ರೀಗಳು ಆಶೀರ್ವಾದ ಮಾಡುತ್ತಾರೆ. ಚುನಾವಣಾ ರಾಜಕೀಯಕ್ಕೆ ಸುತ್ತೂರು ಶ್ರೀಗಳ ಹೆಸರನ್ನು ಬಳಸಿಕೊಳ್ಳಬಾರದು ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಭಕ್ತ ವಲಯದಲ್ಲಿ ಅಸಮಾಧಾನ
ಉಪಚುನಾವಣೆಯಲ್ಲಿ ಮಠದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮಠದ ಭಕ್ತ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ತಾವು ಯಾವುದೇ ಪಕ್ಷದ ಪರವಾಗಿಲ್ಲ ಮತ್ತು ಮಠಕ್ಕೆ ಬರುವ ಭಕ್ತರಿಗೆ ಆಶೀರ್ವಾದ ಮಾಡುವುದಷ್ಟೇ ನನ್ನ ಕೆಲಸ ಎಂದು ಹಲವು ಬಾರಿ ಸುತ್ತೂರು ಶ್ರೀಗಳು ಸ್ಪಷ್ಟ ಪಡಿಸಿದ್ದರು.