ಮತದಾನಕ್ಕೆ ಊರಿನೆಡೆಗೆ ತೆರಳಲು ಸಿದ್ಧತೆ: ಬಸ್ ಸೀಟುಗಳು ಫುಲ್!
ಬೆಂಗಳೂರು, ಮೇ.4: ರಾಜ್ಯಾದ್ಯಂತ ಮೇ 12 ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳ ಮುಕ್ಕಾಲು ಭಾಗ ಸೀಟುಗಳು ಬುಕ್ಕಿಂಗ್ ಆಗಿವೆ.
ಕಳೆದ ಒಂದು ತಿಂಗಳಿಂದಲೇ ಬಸ್ಗಳ ಬುಕಿಂಗ್ ಪ್ರಾರಂಭವಾಗಿದೆ. ಕಟ್ಟಡ ಕಾರ್ಮಿಕರಿಂದ ಹಿಡಿದು ಐಟಿ ಉದ್ಯೋಗಿಗಳವರೆಗೂ ಬೆಂಗಳೂರು ಬಿಟ್ಟು ಊರುಗಳೆಡೆಗೆ ತೆರಳಲು ತಯಾರಿ ನಡೆಸಿದ್ದಾರೆ. ಅದರಲ್ಲೂ ಮೇ 12 ರಂದು ಖಾಸಗಿ ರಜೆಯನ್ನೂ ಕೂಡ ಘೋಷಿಸಲಾಗಿದೆ. ಈಗಾಗಲೇ ಶೇ.60ರಿಂದ 70ರಷ್ಟು ಬುಕಿಂಗ್ ಆಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶ
ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳಲ್ಲಿ ಪ್ರಯಾಣಿಸಲು 30 ದಿನಗಳು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಲು ಅವಕಾಶವಿದೆ. ಏಪ್ರಿಲ್ ಕೊನೆ ವಾರದಿಂದಲೇ ಟಿಕೆಟ್ಗಳಿಗೆ ಬೇಡಿಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಶೇ 100ರಷ್ಟು ಬಸ್ಗಳ ಟಿಕೆಟ್ಗಳು ಬುಕ್ಕಿಂಗ್ ಆಗುವ ಲಕ್ಷಣಗಳು ಇವೆ. ಊರಿಗೆ ಹೋಗಬೇಕೆಂದು ಅಂದುಕೊಂಡವರಿಗೆ ಸಾರಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ.
ನಿತ್ಯ ಕಲಬುರ್ಗಿ, ವಿಜಯಪುರ, ರಾಯಚೂರು, ಬೆಳಗಾವಿ, ಕೊಪ್ಪಳ, ಯಾದಗಿರಿ, ಬೀದರ್, ಮಂಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಬಸ್ಗಳು ಹೋಗುತ್ತವೆ. ಮತದಾನಕ್ಕೂ ಎರಡು ದಿನ ಮುನ್ನ ಹೊರಡಲಿರುವ ಬಸ್ಗಳ ಶೇ 60 ರಷ್ಟು ಸೀಟುಗಳು ಬುಕ್ಕಿಂಗ್ ಆಗಿವೆ. ವಿಶೇಷ ತಿಂಗಳಲ್ಲೂ ಈ ರೀತಿ ಬುಕ್ಕಿಂಗ್ ಆಗುವುದಿಲ್ಲ. ಚುನಾವಣೆ ಇದ್ದಿದ್ದಕ್ಕೆ ಇಷ್ಟು ಬುಕ್ಕಿಂಗ್ಗಳು ಬಂದಿದೆ ಎಂದು ಖಾಸಗಿ ಬಸ್ ಮಾಲೀಕರೊಬ್ಬರು ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಿಗೆ ಮೇ 10 ಹಾಗೂ 11ರಂದು ಹೊರಡುವ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಕಂಪನಿ ಬಸ್ಗಳು ಮತ್ತು ರೈಲುಗಳ ಬಹುತೇಕ ಸೀಟುಗಳನ್ನು ರಾಜಕೀಯ ಪಕ್ಷಗಳ ಕಾರ್ಯಕರ್ತರೇ ಕಾಯ್ದಿರಿಸುತ್ತಿದ್ದಾರೆ.
ಮೇ 11ರ ಸಂಜೆಯಿಂದಲೇ ಖಾಸಗಿ ವಾಹನಗಳಲ್ಲಿ ವಲಸಿಗ ಮತದಾರರು ತಮ್ಮೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ. ಅವರೆಲ್ಲ ತಡರಾತ್ರಿ ಅಥವಾ ಮರು ದಿನ ಮೇ 12ರಂದು ಊರು ತಲುಪಲಿದ್ದಾರೆ. ಮತದಾರರ ಪ್ರಯಾಣಕ್ಕಾಗಿ ಕ್ರೂಸರ್ ವಾಹನಗಳನ್ನೇ ಹೆಚ್ಚಾಗಿ ಕಾಯ್ದಿರಿಸಲಾಗಿದೆ.