Railway Budget 2026: 'ಕೇಂದ್ರವು ಬೆಂಗಳೂರು- ಪುಣೆ ಹೈಸ್ಟೀಡ್ ರೈಲು ಕಾರಿಡಾರ್ ಕೈ ಬಿಟ್ಟಿದೆ'
ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು- ಚೆನ್ನೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಭಿವೃದ್ಧಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಇದರಿಂದ ಕರ್ನಾಟಕಕ್ಕೆ ಹೆಚ್ಚು ಪ್ರಯೋಜನವೇನೂ ಇಲ್ಲ. ಇದರ ಬದಲು ಬೆಂಗಳೂರು-ಪುಣೆ ನಡುವೆ ಇಂಥ ಕಾರಿಡಾರ್ ಬರಬೇಕು. ಇದಕ್ಕಾಗಿ ರಾಜ್ಯದ ಮತ್ತು ಮಹಾರಾಷ್ಟ್ರದ ಸಂಸದರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು ಎಂದು ಬಜೆಟ್ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಪ್ರತಿಕ್ರಿಯಿಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿದ 2026-27ನೇ ಸಾಲಿನ ಬಜೆಟ್ ಕುರಿತು ಸಚಿವರು ಮಾತನಾಡಿದರು. ಈ ಯೋಜನೆ ಬಿಟ್ಟರೆ ಕರ್ನಾಟಕಕ್ಕೆ ಆಗಲಿ, ಬೆಂಗಳೂರಿಗೆ ಆಗಲಿ ವಿಶೇಷ ಯೋಜನೆ, ಅನುದಾನ ಘೋಷಣೆ ಆಗಿಲ್ಲ. ತೆರಿಗೆ ಪಾಲು ಇತರ, ಉಪನಗರ ರೈಲು, ಮೆಟ್ರೋ ಯೋಜನೆಗಳು ಹಾಗೂ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಘೋಷಣೆ ಆಸೆ ನಿರಾಸೆ ಆಗಿದೆ. ಈ ಬಗ್ಗೆ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪವೇ ಆಗಿಲ್ಲ. ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು ಹೈಸ್ಪೀಡ್ ರೈಲು ಯೋಜನೆಯಿಂದ ರಾಜ್ಯಕ್ಕೆ ಹೆಚ್ಚು ಅನುಕೂಲ ಇಲ್ಲ ಎಂದು ವಿವರಿಸಿದ್ದಾರೆ.

ಈಗ ಘೋಷಿಸಿರುವ ಎರಡೂ ಮಾರ್ಗಗಳಲ್ಲಿ ರೈಲುಗಳು ಕರ್ನಾಟಕದೊಳಗೆ ನೂರು ಕಿಲೋ ಮೀಟರ್ ಕೂಡ ಓಡುವುದಿಲ್ಲ. ಇದನ್ನು ಪ್ರಧಾನಿ ಮೋದಿ ಸರ್ಕಾರ ಪರಿಗಣಿಸಿಲ್ಲದೆ ಇರುವುದು ದುರ್ದೈವದ ಸಂಗತಿ ಎಂದು ಅವರು ಅಸಮಾಧಾನ ಹೊರ ಹಾಕಿದರು.
ನೀರಾವರಿ ಯೋಜನೆಗಳ ಪ್ರಸ್ತಾಪವೇ ಆಗಿಲ್ಲ
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಘೋಣಿಸಿರುವ 5,600 ಕೋಟಿ ರೂಪಾಯಿ ನೆರವನ್ನು ಬಿಡುಗಡೆ ಮಾಡಬೇಕು ಎನ್ನುವುದು ನಮ್ಮ ಆಗ್ರಹವಾಗಿತ್ತು. ಬಜೆಟ್ಟಿನಲ್ಲಿ ಇವುಗಳ ಪ್ರಸ್ತಾಪವೇ ಇಲ್ಲ. ಮಿಕ್ಕಂತೆ ರೈತ ಸಮುದಾಯಕ್ಕೆ ನೆರವಾಗುವಂತಹ ಒಂದು ಯೋಜನೆಯೂ ಇದರಲ್ಲಿ ಇಲ್ಲ ಎಂದು ಅವರು ಬೊಟ್ಟು ಮಾಡಿದ್ದಾರೆ.
ಕ್ವಿನ್ ಸಿಟಿ ಪರಿಕಲ್ಪನೆಯಿಂದ ಕೇಂದ್ರ ಯೋಜನೆಗಳು ಪ್ರಭಾವಿತ
ಈ ಬಜೆಟ್ ರಾಜ್ಯದ ಪಾಲಿಗೆ ಎಂದಿನಂತೆಯೇ ನಿರಾಶಾದಾಯಕವಾಗಿದೆ. ಆದರೆ, ಅದು ಪ್ರಕಟಿಸಿರುವ ವಿಶ್ವವಿದ್ಯಾಲಯ ಟೌನ್ ಶಿಪ್ ಗಳ ನಿರ್ಮಾಣ ಮತ್ತು 5 ಪ್ರಾದೇಶಿಕ ವೈದ್ಯಕೀಯ ಪ್ರವಾಸೋದ್ಯಮ ಹಬ್ ಅಭಿವೃದ್ಧಿ ಯೋಜನೆಗಳು ನಮ್ಮ ಕ್ವಿನ್ ಸಿಟಿ ಪರಿಕಲ್ಪನೆಯಿಂದ ಪ್ರಭಾವಿತವಾಗಿವೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಎರಡು ರಕ್ಷಣಾ ಕಾರಿಡಾರ್ ಬಗ್ಗೆ ಚಕಾರ ಎತ್ತಿಲ್ಲ
ನಾವು ರಾಜ್ಯಕ್ಕೆ ಎರಡು ರಕ್ಷಣಾ ಕಾರಿಡಾರ್ ಯೋಜನೆಗಳನ್ನು ಮಂಜೂರು ಮಾಡಬೇಕು ಎಂದು ಕೋರಿದ್ದೆವು. ರಾಜ್ಯದಲ್ಲಿರುವ ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮ ಕಾರ್ಯಪರಿಸರ ಅತ್ಯುತ್ತಮವಾಗಿರುವ ಹಿನ್ನೆಲೆಯಲ್ಲಿ ಇದನ್ನು ಬಜೆಟ್ನಲ್ಲಿ ಪರಿಗಣಿಸಬೇಕಾಗಿತ್ತು. ಆದರೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಚಕಾರವನ್ನೂ ಎತ್ತಿಲ್ಲ. ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.
ಕ್ವಿನ್ ಸಿಟಿ ಯೋಜನೆ ಒಟ್ಟು 5 ಸಾವಿರ ಎಕರೆಯಲ್ಲಿ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ 2 ಸಾವಿರ ಎಕರೆಯಲ್ಲಿ ಇದು ಅನುಷ್ಠಾನಗೊಳ್ಳುತ್ತಿದ್ದು, ಕೆಲಸಗಳು ಪ್ರಗತಿಯಲ್ಲಿವೆ. ಇಲ್ಲಿ ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳ ಕ್ಯಾಂಪಸ್, ಗುಣಮಟ್ಟದ ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು ಎಲ್ಲವೂ ಬರಲಿವೆ. ಈಗಾಗಲೇ ಈ ನಿಟ್ಟಿನಲ್ಲಿ ಹಲವು ಒಡಂಬಡಿಕೆಗಳು ಆಗಿವೆ. ಇನ್ನು ಎರಡು ವರ್ಷಗಳಲ್ಲಿ ಇವೆಲ್ಲವೂ ಸಂಪೂರ್ಣ ಜಾರಿಗೆ ಬರಲಿವೆ. ಕೇಂದ್ರ ಸರ್ಕಾರ ಬಜೆಟ್ಟಿನಲ್ಲಿ ಈಗ ಇಂತಹುದೇ ಯೋಜನೆಗಳನ್ನು ಘೋಷಿಸುವ ಮೂಲಕ ನಮ್ಮನ್ನು ಅನುಸರಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಕರ್ನಾಟಕದ ಮಾದರಿ ಅನುಸರಿಸಿದ ಕೇಂದ್ರ ಸರ್ಕಾರ
ಬಯೋಫಾರ್ಮಾ ಹಬ್ ಯೋಜನೆ ಕೂಡ ನಮ್ಮ ಉಪಕ್ರಮಗಳ ಪ್ರತಿಫಲನವೇ ಆಗಿದೆ. ಇದಕ್ಕಾಗಿ ನಾವು ರಾಜ್ಯದಲ್ಲಿ ಪ್ರತ್ಯೇಕ ವಿಷನ್ ಗ್ರೂಪನ್ನೇ ರಚಿಸಿದ್ದೇವೆ. ಕೇಂದ್ರ ಸರ್ಕಾರ ಬಜೆಟ್ನಲ್ಲಿ ಕರ್ನಾಟಕದ ಅಭಿವೃದ್ಧಿ ಚಿಂತನೆಯ ಮಾದರಿಗಳನ್ನು ಅನುಕರಿಸುತ್ತಿರುವುದು ಸ್ಪಷ್ಟವಾಗಿದೆ. ತೆರಿಗೆ ಪಾಲು, ಕೈಗಾರಿಕಾ ಬೆಳವಣಿಗೆ ಇತ್ಯಾದಿಗಳಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚು ಲಾಭದಾಯಕ ಯೋಜನೆಗಳನ್ನು ಕೊಡಬೇಕು ಎಂದು ಅಪೇಕ್ಷಿಸುವುದು ನಮ್ಮ ನ್ಯಾಯಬದ್ಧ ಹಕ್ಕಾಗಿದೆ ಎಂದು ಪಾಟೀಲ ಅವರು ತಿಳಿಸಿದ್ದಾರೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಹಿರಿಯ ನಾಗರಿಕರಿಗೆ ರೈಲ್ವೇ ನಿಯಮಗಳು 2026: ರಿಯಾಯಿತಿ ಇಲ್ಲದಿದ್ದರೂ ಸೌಲಭ್ಯಗಳು ಮುಂದುವರಿಕೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು










Click it and Unblock the Notifications