Budget 2023: ಚುನಾವಣೆ ವರ್ಷದಲ್ಲಿ ಜನರನ್ನು ಮರಳು ಮಾಡಲು ಕೇಂದ್ರದಿಂದ ಯೋಜನೆಗಳ ಘೋಷಣೆ- ಎಚ್ಡಿಕೆ
ಸಂಸತ್ನಲ್ಲಿ 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಕೇಂದ್ರ ಜನರನ್ನು ಮರಳು ಮಾಡುತ್ತಿದೆ ಎಂದಿದ್ದಾರೆ.
ದಾವಣಗೆರೆ, ಫೆಬ್ರವರಿ 1: ಸಂಸತ್ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. 2023-2024ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಯಿಸಿದ್ದಾರೆ.
ದಾವಣಗೆರೆಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಜೆಟ್ನಲ್ಲಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ಈ ಯೋಜನೆಗಳು ಅನುಷ್ಠಾನಗೊಳ್ಳುವುದು ಮುಂದಿನ ಸರ್ಕಾರ ಬಂದ ಮೇಲೆ ಅಲ್ಲಿಯ ವರೆಗೂ ಏನೂ ಆಗುವುದಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಮಾಡಬೇಕು ಎಂದು ನಾವು ಯಾವ ವರ್ಷದಲ್ಲಿ ಅರ್ಜಿ ಕೊಟ್ಟಿದ್ದೇವೆ. ಈಗ ಚುನಾವಣೆ ವರ್ಷದಲ್ಲಿ ಘೋಷಣೆ ಮಾಡಿ ಎಷ್ಟರ ಮಟ್ಟಿಗೆ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಾರೆ. ಇಂದು ಘೋಷಣೆ ಮಾಡಿರುವುದು ತುಪ್ಪ ಸವರುವ ಕೆಲಸ ಎಂದು ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
Budget 2023; ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ: ಕೇಂದ್ರ ಬಜೆಟ್ ನಲ್ಲಿ ಮೀಸಲು
ಜನರನ್ನು ಮರಳು ಮಾಡಲು ಕೇಂದ್ರ ಸರ್ಕಾರ ಯೋಜನೆಗಳನ್ನು ಘೋಷಣೆ ಮಾಡಿದೆ. ಈ ಯೋಜನೆಗಳು ಅನುಷ್ಠಾನಗೊಳ್ಳುತ್ತದೆಯೋ ಇಲ್ಲವೋ ಎನ್ನುವುದನ್ನು ಮುಂದಿನ ದಿನಗಳಲ್ಲಿ ನೋಡೋಣ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ದುಡ್ಡು ಇಟ್ಟಿರುವುದನ್ನು ಅಭಿನಂದಿಸುತ್ತೇನೆ. ಈಗಲಾದರೂ ಕರ್ನಾಟಕ ಭರಪೀಡಿತ ಪ್ರದೇಶ ಎಂದು ಕೇಂದ್ರ ಸರ್ಕಾರಕ್ಕೆ ಅರಿವಾಗಿದೆ ಅಲ್ವಾ ಎಂದರು.
ಮಾತು ಮುಂದುವರಿಸಿದ ಅವರು, ಇದು ನಿಜಕ್ಕೂ ಕಾರ್ಯಸಾಧನೆ ಆಗುವುದು ಕೊಟ್ಟಂತಹ ಯೋಜನೆಗಳು ಜನರಿಗೆ ತಲುಪಿದಾಗ, ಕಾರ್ಯಕ್ರಮಗಳಿಗೆ ಹಣ ಬಿಡುಗಡೆಯಾಗಿ, ನಿಗದಿತ ಅವಧಿಗೆ ಕಾರ್ಯಗಳನ್ನು ಮುಗಿಸಿದಾಗ ಆಗ ನಾವು ಇದರ ಬಗ್ಗೆ ಚರ್ಚೆ ಮಾಡಬಹುದು. ಇದೆಲ್ಲಾ ಪ್ರಾರಂಭಿಕ ಹಂತ ಎಂದು ಹೇಳಿದರು.