ಲೋಕಸಭೆ ಚುನಾವಣೆ ರಾಜಾಹುಲಿ ಅಖಾಡಕ್ಕೆ; ಮುಂದಿನ ವಾರದಿಂದ ಯಡಿಯೂರಪ್ಪ ರಾಜ್ಯ ಪ್ರವಾಸ: ಹೇಗಿದೆ ತಯಾರಿ?
ಬೆಂಗಳೂರು, ಸೆಪ್ಟೆಂಬರ್ 09: 2024 ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ 20 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದೆ. ಇನ್ನೂ ಆಡಳಿತರೂಢ ಬಿಜೆಪಿ ಹಲವು ರಾಜ್ಯಗಳಲ್ಲೂ ಕೂಡ ಭರ್ಜರಿ ತಯಾರಿ ತಡೆದಿದ್ದು, ಕರ್ನಾಟಕದಲ್ಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ 20 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಅಖಾಡಕ್ಕಿಳಿದಿದ್ದಾರೆ.
ಹೌದು, ಲೋಕಸಭಾ ಚುನಾವಣೆ ಹಿನ್ನಲೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮುಂದಿನ ವಾರದಿಂದ ಅಖಾಡಕ್ಕಿಳಿದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 16ರಂದು ಕೋಲಾರದ ಕೂಡುಮಲೆ ಶ್ರೀ ವಿನಾಯಕನ ದರ್ಶನ ಪಡೆದು ರಾಜ್ಯದ ಪ್ರತಿ ಜಿಲ್ಲೆಗೆ ನಮ್ಮೆಲ್ಲ ಮುಖಂಡರ ಜೊತೆ ಪ್ರವಾಸ ಆರಂಭಿಸಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಹಲವು ಜಿಲ್ಲೆಗಳಲ್ಲಿ ಸರಕಾರದ ವಿರುದ್ಧ ತೀವ್ರ ಹೋರಾಟ ಮುಂದುವರೆಯಲಿದೆ. ಈ ಸರಕಾರ ಅಧಿಕಾರ ಬಿಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ರೈತ ವಿರೋಧಿ ಕಾಂಗ್ರೆಸ್ ಸರಕಾರವು ದಿನೇದಿನೇ ಹೆಚ್ಚು ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.
ಈ ಭ್ರಷ್ಟ ಸರಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ. ಇದು ಜನವಿರೋಧಿ ಮತ್ತು ರೈತವಿರೋಧಿ ಸರಕಾರ. ಸರಕಾರದ ವಿರುದ್ಧ ಹೋರಾಟದಲ್ಲಿ ಜನರೆಲ್ಲರೂ ಒಗ್ಗಟ್ಟಾಗಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು. ಈ ಸರಕಾರ ಜನಹಿತವನ್ನು ಸಂಪೂರ್ಣ ಮರೆತಿದೆ. ಇದರ ವಿರುದ್ಧ ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯುತ್ ಅಭಾವದಿಂದ ರೈತರ ಪಂಪ್ಸೆಟ್ ಆನ್ ಮಾಡಲಾಗುತ್ತಿಲ್ಲ. ದಿನಕ್ಕೆ ಮೂರ್ನಾಲ್ಕು ಗಂಟೆ ವಿದ್ಯುತ್ ಸಹ ಕೊಡುತ್ತಿಲ್ಲ. ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಜನಹಿತವನ್ನು ಸಂಪೂರ್ಣ ಮರೆತ ಭ್ರಷ್ಟ ಸರಕಾರದ ವಿರುದ್ಧ ಹೋರಾಟ ಪ್ರಾರಂಭವಾಗಿದೆ. ಮಳೆ ವಿಫಲವಾಗಿದೆ. ಕಾವೇರಿ ನದಿಯಲ್ಲಿ ನೀರಿನ ಕೊರತೆ ಕುರಿತು ಕಾವೇರಿ ಪ್ರಾಧಿಕಾರಕ್ಕೆ ತಿಳಿಸುವಲ್ಲಿ ಈ ಸರಕಾರವು ವಿಫಲವಾಗಿದೆ. ನಾವು ಕಾವೇರಿ ನೀರಿನ ವಿಚಾರವಾಗಿ ಹೋರಾಟವನ್ನು ತೀವ್ರಗೊಳಿಸಲಿದ್ದೇವೆ. ರೈತರ ಪರವಾಗಿ ನಿಲ್ಲುತ್ತೇವೆ ಎಂದು ಅವರು ತಿಳಿಸಿದರು.
ರಾಜ್ಯದ 180- 190 ತಾಲ್ಲೂಕುಗಳು ಬರದ ಪರಿಸ್ಥಿತಿ ಅನುಭವಿಸುತ್ತಿದ್ದು, ದನಕರುಗಳಿಗೆ ಮೇವಿಲ್ಲದ ದುಸ್ಥಿತಿ ಇದೆ. ರಾಜ್ಯದ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ರಾಜ್ಯ ಸರಕಾರವು ರಾಜ್ಯವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಮೀನಮೇಷ ಮಾಡುತ್ತಿದೆ. ಇದು ಅತ್ಯಂತ ಖಂಡನೀಯ. ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ. 2 ಸಾವಿರ ಬಿಲ್ ಇದ್ದುದು 4 ಸಾವಿರವಾಗಿದೆ. ವಿದ್ಯುತ್ ದರವನ್ನು ತೀವ್ರವಾಗಿ ಏರಿಸಿದ್ದೇ ಇದಕ್ಕೆ ಕಾರಣ ಎಂದು ಆಕ್ಷೇಪಿಸಿದರು. ಒಂದು ಕಡೆ ಜನರಿಗೆ ಸೌಕರ್ಯ ಕೊಡುವುದಾಗಿ ಹೇಳಿ ಇನ್ನೊಂದೆಡೆ ಜನರ ಜೀವನದ ಜೊತೆ ಈ ಸರಕಾರ ಚೆಲ್ಲಾಟ ಆಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.












Click it and Unblock the Notifications