ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ; ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ!
ಬೆಂಗಳೂರು, ಅ. 20: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದಂತೆ ಉಪ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ. ಮೊದಲಿಗೆ ವಿಜಯಪುರ ಜಿಲ್ಲೆ ಸಿಂದಗಿ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿರುವ ಬಿಎಸ್ವೈ, ನಾಳೆ ಅ. 21ರಂದು ಅದೇ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ನಂತರ ಹಾನಗಲ್ ಉಪ ಚುನಾವಣೆ ಪ್ರಚಾರಕ್ಕೆ ತೆರಳಲಿದ್ದಾರೆ.
ಯಡಿಯೂರಪ್ಪ ಅವರ ಚುನಾವಣಾ ಭಾಷಣ ಎಂದರೆ ಒಂದು ಖದರ್ ಇರುತ್ತದೆ. ಹೀಗಾಗಿಯೇ 'ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು' ಎಂಬ ಮಾತಿತ್ತು. ಆದರೆ ಆ ಖದರ್ ಇಂದಿನ ಪ್ರಚಾರದಲ್ಲಿ ಕಂಡು ಬಂದಿಲ್ಲ ಎಂಬ ಚರ್ಚೆಯನ್ನು ಪ್ರಚಾರ ಭಾಷಣ ಆಲಿಸಿದ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಮಾತನಾಡಿಕೊಂಡಿದ್ದು ಕಂಡು ಬಂದಿದೆ.
ವಿಜಯಪುರ ಜಿಲ್ಲೆ ಸಿಂದಗಿಯ ಮೊರಟಗಿ, ಗೋಲಗೇರಿ ಸೇರಿದಂತೆ ಹಲವೆಡೆ ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರ ಮಾಡಿದ್ದಾರೆ. ಯಡಿಯೂರಪ್ಪ ಭಾಷಣದ ಖದರ್ ಹೇಗಿತ್ತು? ಯಡಿಯೂರಪ್ಪ ರಾಜಕೀಯ ನಿವೃತ್ತಿ ಮಾತನ್ನು ಆಡಿದ್ದು ಯಾಕೆ? ಮುಂದಿದೆ ಮಾಹಿತಿ!
ರೈತರ ಬೆಳೆಗೆ ಬೆಂಬಲ ಬೆಲೆ!
ಸಿಂದಗಿಯ ಮೊರಟಗಿ ಗ್ರಾಮದಲ್ಲಿ ಅಭ್ಯರ್ಥಿ ರಮೇಶ್ ಭೂಸನೂರ ಪರವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಚಾರ ಮಾಡಿದ್ದಾರೆ. ತಮ್ಮ ಸರ್ಕಾರದ ಕೊಡುಗೆಗಳನ್ನು ಜನರಿಗೆ ವಿವರಿಸಿದ ಯಡಿಯೂರಪ್ಪ, "ನನ್ನ ನಿರೀಕ್ಷೆ ಮೀರಿ ಜನರು ಸೇರಿದ್ದೀರಿ. ಇದು ಬಿಜೆಪಿಗೆ ಪ್ರದಾನಿ ಮೋದಿಗೆ ಹಾಗೂ ನಮಗೆ ತೋರಿದ ಪ್ರೀತಿ. ರೈತರ ಬೆಳೆಗೆ ಬೆಂಬಲ ಬೆಲೆ ನೀಡಲಾಗಿದೆ. ತೋಟಗಾರಿಕಾ ಬೆಳೆಗಳಿಗೂ ಸಹಾಯ ಮಾಡಿದ್ದೇವೆ. ಎಲ್ಲ ಕಡೆ ಉತ್ತಮ ಮಳೆಯಾಗಿ, ಉತ್ತಮ ಬೆಳೆ ಬಂದಿದೆ. ಈ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ರಮೇಶ್ ದೊಡ್ಡ ಅನಂತರದ ಗೆಲುವು ಕಾಣುತ್ತಾರೆ" ಎಂಬ ಭರವಸೆಯನ್ನು ಯಡಿಯೂರಪ್ಪ ವ್ಯಕ್ತಪಡಿಸಿದರು.
ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದ ಬಿಎಸ್ವೈ
ಮೊರಟಗಿ ಬಳಿಕ ಗೋಲಗೇರಿಯಲ್ಲಿ ಯಡಿಯೂರಪ್ಪ ಪ್ರಚಾರ ಮಾಡಿದರು. "ಗೋಲಗೇರಿ ಗ್ರಾಮದಲ್ಲಿ ಬೃಹತ್ ಮೆರವಣಿಗೆ ಹಾಗೂ ಜನಸ್ತೋಮ ನೋಡಿದ್ರೆ ನಾನು ಶಿಕಾರಿಪುರದಲ್ಲಿದ್ದೆನೋ ಅಥವಾ ಇಲ್ಲಿದ್ದೇನೋ ಎನಿಸಿತು. ಹಣದ ಬಲದಿಂದ ಗೆಲ್ತೇವೆ ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ಗೆ ಜನ ಪಾಠ ಕಲಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಇನ್ನೂ ಉಳಿದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಕರ್ನಾಟಕದಲ್ಲೂ ಕಾಂಗ್ರೆಸ್ಗೆ ಸ್ಥಳ ಇಲ್ಲ ಎಂಬುದನ್ನು ತೋರಿಸಬೇಕಿದೆ. ಮುಸ್ಲಿಂ ಬಂಧುಗಳಿಗೆ ಸೌಲಭ್ಯ ಕೊಡದೆ, ಕೇವಲ ಹಿಂದೂಗಳಿಗೆ ಮಾತ್ರ ಕೊಟ್ಟಿರುವುದನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಾನು ಎಂದೂ ಜಾತಿ ರಾಜಕಾರಣ ಮಾಡಿಲ್ಲ" ಎಂದು ಖಡಕ್ ಮಾತು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಸ್ಥಾನ?
ಬರುವ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ನಾನು ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇನೆ ಎಂದು ಹೇಳಿದ ಯಡಿಯೂರಪ್ಪ ಅವರು, "ಬಡವರ ಮನೆಯಲ್ಲಿ ಹೆಣ್ಣು ಹುಟ್ಟಿದಾಗ ಕಣ್ಣೀರು ಹಾಕಬಾರದು ಎಂದು ಭಾಗ್ಯಲಕ್ಷ್ಮೀ ಯೋಜನೆ ತಂದಿದ್ದೇವೆ. ಯುವಕರು ಯುವತಿಯರು ಸ್ವಂತ ಉದ್ಯೋಗ ಮಾಡಬೇಕು ಎಂಬ ಕಾರಣಕ್ಕೆ ಬ್ಯಾಂಕ್ನಲ್ಲಿ ಸಾಲ ಕೊಡುವ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಮೋದಿ, ನಾವು ಮುಸ್ಲಿಂ ಬಂಧುಗಳಿಗೆ ಅನ್ಯಾಯ ಮಾಡಿರುವ ಒಂದು ಉದಾಹರಣೆ ಇದ್ದರೆ ಕೊಡಿ. ಆದರೂ ಮುಸ್ಲಿಂ ಬಂಧುಗಳು ನಮ್ಮಿಂದ ದೂರ ನಿಂತಿದ್ದೀರಿ. ನೀವೆಲ್ಲ ರಮೇಶ್ಗೆ ಓಟ ಹಾಕುವ ಮೂಲಕ ಗೆಲ್ಲಿಸಿ" ಎಂದರು.
ಗಮನ ಸೆಳೆಯುತ್ತಿದೆ ಯಡಿಯೂರಪ್ಪ ಪ್ರಚಾರ
ನಾಳೆಯೂ ಸಿಂದಗಿ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಚುನಾವಣಾ ಪ್ರಚಾರ ಮಾಡಲಿದ್ದಾರೆ. ನಂತರ ಹಾಗನಲ್ಗೆ ತೆರಳಿ ಉಪ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಅ. 20, 21 ರಂದು ಎರಡು ದಿನಗಳ ಕಾಲ ಸಿಂದಗಿಯಲ್ಲಿ ಪ್ರಚಾರ ಮಾಡಿದ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಅವರು ಅ. 22 ಹಾಗೂ 23ರಂದು ಎರಡು ದಿನ ಹಾವೇರಿ ಜಿಲ್ಲೆ ಹಾನಗಲ್ ಉಪ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಒಟ್ಟಾರೆ ಎರಡೂ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಅವರ ಪ್ರಚಾರದಿಂದ ಏನಾಗಬಹುದು ಎಂಬುದು ಕುತೂಹಲ ಮೂಡಿಸಿದೆ. ಜೊತೆಗೆ ವಿರೋಧ ಪಕ್ಷಗಳ ನಾಯಕರು ಕೂಡ ಯಡಿಯೂರಪ್ಪ ಅವರ ಪ್ರಚಾರದ ಬಗ್ಗೆ ಗಮನ ಕೊಟ್ಟಿದ್ದಾರೆ. ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಬಹುತೇಕ ಖಚಿತ ಎಂಬ ವರದಿಗಳಿವೆ. ಅದೇ ರೀತಿ ಹಾನಗಲ್ ಕ್ಷೇತ್ರದಲ್ಲಿ ಮತದಾರರ ಒಲವು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮೇಲಿದೆ ಎಂಬ ವರದಿಗಳಿವೆ. ಹೀಗಾಗಿ ಯಡಿಯೂರಪ್ಪ ಅವರ ಪ್ರಚಾರ ಗಮನ ಸೆಳೆಯುತ್ತಿದೆ.