ಸೈಕಲ್ ಓಡಿಸಿ ಒದೆ ತಿಂದಿದ್ದ ಮಗಳು ಅರುಣಾದೇವಿ ಕಂಡಂತೆ ಅಪ್ಪ, ಯಡಿಯೂರಪ್ಪ
ಮೈಸೂರು, ಜುಲೈ 26: "ನಾನು ಕಣ್ಣು ಬಿಟ್ಟಾಗಿಂದಿನಿಂದಲೂ ನನ್ನಪ್ಪ ರಾಜಕಾರಣಿಯೇ. ನೋಡಿದರೆ ಅವರು ಶಾಂತ ಸ್ವಭಾವ ಎಂದು ಅನಿಸುತ್ತದೆ. ಆದರೆ ನನ್ನಪ್ಪ ಕೋಪಿಷ್ಠ. ಅವರನ್ನು ಕಂಡರೆ ನಮಗೆ ಭಯವಾಗುತ್ತಿತ್ತು. ನಾವು ಸಣ್ಣ ತಪ್ಪು ಮಾಡಿದರೂ ಅವರು ಸಹಿಸುತ್ತಿರಲಿಲ್ಲ.
"ನಾವು ಅವರನ್ನು ನೋಡಬೇಕೆಂದು ಅನಿಸಿದಾಗಲೆಲ್ಲ ಮನೆಯಲ್ಲಿರುತ್ತಿಲ್ಲ. ಸಮಾಜಸೇವೆಯಲ್ಲಿ ಆಷ್ಟರ ಮಟ್ಟಿಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು ನಮ್ಮಪ್ಪ" ಎಂದು ತಂದೆ ಯಡಿಯೂರಪ್ಪ ಅವರನ್ನು ನೆನೆಸಿಕೊಂಡು ಗದ್ಗದಿತರಾಗುತ್ತಾರೆ ಮಗಳು ಅರುಣಾದೇವಿ.
ಯಡಿಯೂರಪ್ಪನವರು ಶುಕ್ರವಾರ ಸಂಜೆ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲು ಎಲ್ಲ ಸಿದ್ಧತೆ ನಡೆದಿದೆ. ರಾಜಕೀಯ ನಾಯಕರಾಗಿ ಯಡಿಯೂರಪ್ಪ ಹೇಗೆ ಎಂಬ ಬಗ್ಗೆ ಒಂದು ಚಿತ್ರ ಕಣ್ಣೆದುರು ಇದೆ. ಆದರೆ ಮಕ್ಕಳಿಗೆ ಪ್ರೀತಿಯ ತಂದೆಯಾಗಿ, ಅಪ್ಪನಾಗಿ ಯಡಿಯೂರಪ್ಪ ಹೇಗಿದ್ದರು ಎಂದು ಬಿ. ವೈ. ಅರುಣಾದೇವಿ ಅವರು ಒನ್ ಇಂಡಿಯಾ ಕನ್ನಡಕ್ಕೆ ಹೇಳಿದ್ದು ಹೀಗೆ:

ಅಪ್ಪನ ಬಾಲ್ಯವನ್ನು ಅಮ್ಮನೇ ಹೇಳಿದ್ದು
ಬಾಲ್ಯದಲ್ಲಿ ಅವರು ಊರಿನ ಮುದ್ದು ಮಗನಾಗಿ ಬೆಳೆದವರು. ತಾಯಿ ನಮಗೆ ಅವರ ಬಗ್ಗೆ ತಿಳಿಸುತ್ತಿದ್ದರು. ಈ ಕಾರಣಕ್ಕಾಗಿ ನನ್ನನ್ನು ಬೂಕನಕೆರೆಯ ಹುಡುಗನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ನಮ್ಮ ತಾತ ಯಾವುದೇ ಕಾರಣಕ್ಕೂ ಅಪ್ಪನನ್ನು ತಾಯಿ ಇಲ್ಲದ ಕಂದ ಎಂದು ಬೇಸರ ಬರದಂತೆ ನೋಡಿಕೊಂಡರು. ಅವರು ಆಗಲೇ ತುಂಟ ಹುಡುಗ ಆಗಿದ್ದವರು. ನಮ್ಮಪ್ಪನಿಗೆ ಸಾಮಾನ್ಯ ಜ್ಞಾನವನ್ನು ಸಣ್ಣವರಿದ್ದಾಗಲೇ ಕಲಿಯಬೇಕೆಂದು ತಾತ ಹೇಳುತ್ತಿದ್ದರು. ಹಾಗಾಗಿ ಅಪ್ಪನನ್ನು ತೋಟ, ಗದ್ದೆ, ಅಂಗಡಿಗೆಲ್ಲಾ ಕಳುಹಿಸುತ್ತಿದ್ದರು. ಅಪ್ಪನಿಗೆ ಅವರ ತಾಯಿ ಸಣ್ಣವರಿದ್ದಾಗಲೇ ತೀರಿಹೋದರು. ಆ ನಂತರ ನೋಡಿಕೊಂಡದ್ದು ಅಪ್ಪನ ಅಕ್ಕಂದಿರು.

ನಮ್ಮಪ್ಪ ಕಾಲೇಜು ದಿನಗಳಲ್ಲೇ ನಟೋರಿಯಸ್ ಆಗಿ ಬೆಳೆದವರು
ನಮ್ಮ ತಂದೆ ಸ್ನೇಹಿತರಾದ- ಮೈಸೂರಿನಲ್ಲಿರುವ ಶಿವಶಂಕರ್ ಹೇಳಿದ್ದು, ಅವರು ಆಗಿನ ಕಾಲದಲ್ಲೇ ಮದುವೆ ಮಾಡಿಸುವುದು, ಹೆಣ್ಣು ಹುಡುಕುವ ಕೆಲಸವನ್ನು ಮೈಸೂರು- ಮಂಡ್ಯದಲ್ಲಿ ಓದಬೇಕಾದರೆ ಮಾಡುತ್ತಿದ್ದರು. ಹಾಗೆ ನೋಡಿದರೆ ನಮ್ಮಪ್ಪ ಕಾಲೇಜು ದಿನದಲ್ಲೇ ನಟೋರಿಯಸ್ ಆಗಿ ಬೆಳೆದರು ಅಂತನಿಸುತ್ತದೆ. ಅಲ್ಲದೇ ಅಪ್ಪಂಗೆ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಚಿತ್ರವೆಂದರೆ ತುಂಬಾ ಇಷ್ಟ. ಟೈಂ ಸಿಕ್ಕಾಗೆಲ್ಲಾ ಹೋಗುತ್ತಿದ್ದರು.

ಸಂಘಕ್ಕೆ ಸೇರಿದ್ದು ಮೈಸೂರಿನಲ್ಲಿ
ಅಪ್ಪ ಆರೆಸ್ಸೆಸ್ ಸಂಘ ಶುರು ಮಾಡಿದ್ದು ಮೈಸೂರಿನಲ್ಲಿ. ಕಾಲೇಜು ದಿನದಲ್ಲಿ ಶಾಖೆಗೆ ಅವರು ಕಟ್ಟುನಿಟ್ಟಾಗಿ ಹೋಗುತ್ತಿದ್ದರು. ಅದಾದ ಬಳಿಕ ಶಿಕಾರಿಪುರದಲ್ಲಿ ಸಂಘದ ಕೆಲಸವನ್ನು ಮಾಡಿದ್ದು. ಇದೇ ವೇಳೆ ಅಪ್ಪ ಹಡ್ಸನ್ ಅಂಡ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ನಮ್ಮ ಮನೆ ನೆಂಟರೊಬ್ಬರು ಅಪ್ಪನನ್ನು ಶಿಕಾರಿಪುರಕ್ಕೆ ರೈಸ್ ಮಿಲ್ ಕ್ಲರ್ಕ್ ಕೆಲಸಕ್ಕೆ ಕಳುಹಿಸಿದರು. ಅಲ್ಲಿ ಸಹ ಕೆಲಸ ಶುರು ಮಾಡಿದರು.

ತಾಯಿ ಮೈತ್ರಾ ದೇವಿ ಆಗರ್ಭ ಶ್ರೀಮಂತರು
ವೀರಭದ್ರ ಶಾಸ್ತ್ರಿಯವರ ಮಗಳೇ ನನ್ನ ತಾಯಿ ಮೈತ್ರಾ ದೇವಿ. ಅದೇ ಶಾಸ್ತ್ರಿಯವರ ರೈಸ್ ಮಿಲ್ ನಲ್ಲಿ ಅಪ್ಪ ಕೆಲಸ ಮಾಡುತ್ತಿದ್ದರು. ಆಗಿನ ಕಾಲದಲ್ಲೇ ಅವರು ಶ್ರೀಮಂತರು. ಮನೆ ಅಳಿಯನೇಬೇಕೆಂಬ ಕಾರಣಕ್ಕೆ ಅಪ್ಪನನ್ನು ತಾತ ವೀರಭದ್ರಶಾಸ್ತ್ರಿಯವರು ಮದುವೆಯಾಗಲು ಒಪ್ಪಿಸಿದರು. ಶಾಸ್ತ್ರಿ ಎಂಬ ನಾಮಾಂಕಿತವನ್ನು ತಾಯಿ ಕುಟುಂಬಕ್ಕೆ ಕೊಟ್ಟವರೇ ಮೈಸೂರು ಮಹಾರಾಜರು. ಈಗಲೂ ನಮ್ಮ ಮನೆಯಲ್ಲಿ ಅರಸರು ಕೊಟ್ಟ ಆಯುಧವನ್ನು ಪೂಜಿಸುತ್ತಾರೆ.

ಸಕತ್ ಒದೆ ಬಿದ್ದ ದಿನವನ್ನು ಯಾವತ್ತೂ ಮರೆಯಲ್ಲ
ಗಣಪತಿ ಹಬ್ಬದಿಂದ ಶಿಕಾರಿಪುರದಲ್ಲಿ ಸಂಘಟನೆ ಶುರು ಮಾಡಿದರು ಅಪ್ಪ. ಊರ ತುಂಬಾ ಪೆಂಡಾಲು ಹಾಕಿ ಎಲ್ಲಾ ಜಾತಿ- ಧರ್ಮವನ್ನು ಒಟ್ಟಾಗಿ ಸೇರಿಸಿ, ಪೂಜೆ ನಡೆಸಿದ ಅಪ್ಪನನ್ನು ನಾನು ಈಗಲೂ ಮರೆಯುವುದಿಲ್ಲ. ಒಮ್ಮೆ ನಾನು ಅಪ್ಪನ ಜೇಬಿನಿಂದ 50 ಪೈಸೆ ತೆಗೆದುಕೊಂಡು, ಸೈಕಲ್ ಬಾಡಿಗೆಗೆ ಪಡೆದು ಓಡಿಸುತ್ತಿದ್ದೆ. ಅದನ್ನು ನೋಡಿದ ಅಪ್ಪನಿಂದ ನನಗೆ ಸಕತ್ ಒದೆ ಬಿದ್ದ ದಿನವನ್ನು ಯಾವತ್ತೂ ಮರೆಯಲ್ಲ. ಅದೇ ಅಪ್ಪ ಮುಂದೆ ಇಡೀ ರಾಜ್ಯದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸೈಕಲ್ ವಿತರಿಸುವ ಯೋಜನೆ ತಂದರು.

ಕಷ್ಟದ ಬಗ್ಗೆ ಹೇಳಿಕೊಟ್ಟಿದ್ದು ನಮ್ಮಪ್ಪ- ಅಮ್ಮ
ಮನೆಯಲ್ಲಿ ಎಲ್ಲವೂ ಇತ್ತು. ಆಗ ನಾನಿನ್ನೂ ನಾಲ್ಕನೇ ಕ್ಲಾಸ್, ನನಗೂ- ನನ್ನಕ್ಕನಿಗೂ ಬ್ಯಾಗ್ ಕೊಟ್ಟು ಸಂತೆಯಲ್ಲಿ ಮಾರಿಕೊಂಡು ಬನ್ನಿ ಅಂತಿದ್ದರು. ಅಲ್ಲದೇ ನಮ್ಮನ್ನು ದೊಡ್ಡ ಕಾಲೇಜಿಗೆ ಸೇರಿಸದೆ ಸಾಮಾನ್ಯರು ಓದುವ ಕಾಲೇಜಿನಲ್ಲಿ, ಹಾಸ್ಟೆಲ್ ನಲ್ಲಿ ಓದಿಸಿದ್ದರು. ನಾನು ಬೆಂಗಳೂರಿನ ಮಹಾರಾಣಿ ಕಾಲೇಜು ಹಾಸ್ಟೆಲ್ ನಲ್ಲಿದ್ದುಕೊಂಡು ಬಿಎಸ್ ಸಿ ಓದಿದೆ. ನನಗೆ ಮೆಸ್ ಬಿಲ್ ಕೊಟ್ಟು, 200 ರುಪಾಯಿ ಕೊಡುತ್ತಿದ್ದರು. ಅಲ್ಲದೇ ಖರ್ಚು ಮಾಡಿದ ಲೆಕ್ಕವನ್ನು ಸಹ ಮರೆಯದೇ ಕೇಳುತ್ತಿದ್ದರು ನಮ್ಮಪ್ಪ. ರಾಘು, ವಿಜಯೇಂದ್ರ ಜನಸೇವಾ ವಿದ್ಯಾಕೇಂದ್ರದಲ್ಲಿ, ತಂಗಿ ಉಮಾ ದಾವಣಗೆರೆಯಲ್ಲಿಯೇ ಓದಿದರು.

ಅಪ್ಪನನ್ನು ಮನೆಗಿಂತ ಈಗ ಟಿವಿಯಲ್ಲಿ ನೋಡುವುದೇ ಹೆಚ್ಚು
14 ವರ್ಷದ ಹಿಂದೆ ಶಿಕಾರಿಪುರದಲ್ಲಿ ಅಪ್ಪನ ಷಷ್ಠ್ಯಬ್ಧಿ ಕಾರ್ಯಕ್ರಮ ನಡೆಸಿದ್ದೆವು. ಆಗ ನಮಗೆಲ್ಲಾ ಅಪ್ಪ ಹೇಳಿದ್ದು: "ಇನ್ನು ಮುಂದೆ ನನ್ನ ಜೀವನ ಸಮಾಜಕ್ಕೆ ಮೀಸಲು. ಇನ್ನು ಮುಂದೆ ನನ್ನಿಂದ ಏನನ್ನು ಅಪೇಕ್ಷಿಸಬೇಡಿ". ಅಂದಿನಿಂದ ಇಂದಿನವರೆಗೂ ನಮಗೆ ಅಪ್ಪ ಸಿಗುವುದು ತೀರಾ ಕಡಿಮೆ. ನಮಗೂ ಅಪ್ಪ ಬೇಕೆನಿಸಿದರೆ ಟಿವಿಯಲ್ಲಷ್ಟೇ ನೋಡುವುದು. "ಇದೇ ಬಟ್ಟೆ ಹಾಕಿಕೊಳ್ಳಬೇಕು. ಮನೆಯ ಪ್ರತಿಯೊಂದು ವಸ್ತು ಇಟ್ಟ ಜಾಗದಲ್ಲಿಡಬೇಕು. ಗಲೀಜು ಮಾಡಬಾರದು" ಎಂದು ಹೇಳುತ್ತಿದ್ದರು. ಇದರಿಂದ ಅಮ್ಮನಿಗೆ ಮಾತ್ರ ಸುಸ್ತಾಗಿರುತ್ತಿತ್ತು. ಅಪ್ಪನಿಗೆ ಮನೆಯ ಬಗ್ಗೆ ಗಮನ ತುಂಬಾ ಕಡಿಮೆ ಇತ್ತು.

ವಿಧಾನಸೌಧದ ಮುಂದೆ ನಿಲ್ಲಿಸಿ ನಾನು ಸಿಎಂ ಆಗ್ತೀನಿ ಅಂದಿದ್ದರು
ನಾನು ಡಿಗ್ರಿ ಮೊದಲ ವರ್ಷವಿದ್ದಾಗ ನಮ್ಮನ್ನು ಬೆಂಗಳೂರಿನ ವಿಧಾನಸೌದಕ್ಕೆ ಕರೆದುಕೊಂಡು ಹೋಗಿದ್ದರು. ಅಂದು ವಿಧಾನಸೌಧಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಅಂದು ನಮಗೆ ಹುಲ್ಲು ಹಾಸನ್ನು ತೋರಿಸಿ, ನಾನು ಇಲ್ಲಿ ಕೂತು ಸಮಾಜಸೇವೆ ಮಾಡುತ್ತೇನೆ ಎಂದಿದ್ದರು. ಹಾಗೆಯೇ ಮಾಡಿದಂಥ ಹಠವಾದಿ ಅವರು.

ನಮ್ಮಪ್ಪಂಗೆ ಮುದ್ದೆ ಮಾಡಿದರೆ ಕೋಪ
ಅಪ್ಪ ಊಟದ ವಿಷಯದಲ್ಲೂ ಸಕತ್ ಸ್ಟ್ರಿಕ್ಟ್. ಅವರಿಗೆ ಶೇಂಗಾ, ಈರುಳ್ಳಿ ಹಾಕಿ ಮಾಡಿದ ಮಸಾಲೆ ರೊಟ್ಟಿ ಫೆವರಿಟ್. ಹಿತಕವರೆ ಸಾರು, ಪಲ್ಯ ಅಂದರೆ ಪಂಚಪ್ರಾಣ. ಆದರೆ ಮುದ್ದೆ ಮಾಡಿದರೆ ಕೋಪ ಬರುತ್ತದೆ. ಅವರನ್ನು ಸಮಾಧಾನ ಪಡಿಸಬೇಕೆಂದರೆ ತುಂಬಾ ಕಷ್ಟ. ನಮ್ಮಪ್ಪ ಕುರುಕಲು ತಿಂಡಿ ಪ್ರಿಯ. ನಿಪ್ಪಟ್ಟು ಅಂದರೆ ಎಲ್ಲಿ ಅಂತಾ ಕೇಳ್ತಾರೆ. ಒಮ್ಮೆ ಅಮ್ಮ ಮನೆಯಲ್ಲಿ ಇರಲಿಲ್ಲ. ನಾವೆಲ್ಲ ಸಣ್ಣವರು. ಅಪ್ಪ ನಮಗೋಸ್ಕರ ಎಲ್ಲಾ ತರಕಾರಿ ಹಾಕಿ ಉಪ್ಪಿಟ್ಟು ಮಾಡಿದ್ದರು. ನಮಗೆಲ್ಲಾ ತಟ್ಟೆ ತುಂಬಾ ಹಾಕಿ, ತಿನ್ರೋ, ತಿನ್ರೋ, ಕಷ್ಟಪಟ್ಟು ಮಾಡಿದ್ದೀನಿ, ಅಮ್ಮ ಇದ್ದರೆ ತಿಂತೀರಾ ಎಂದು ಹೇಳಿದ್ದನ್ನು ನೆನಪಿಸಿಕೊಂಡರೆ ನಗು ಬರುತ್ತದೆ.

ಮೀನಾಕ್ಷಿ ಭವನ್ ಮಸಾಲೆ ದೋಸೆ ಅವರಿಗೆ ಫೇವರಿಟ್
ಮಸಾಲೆ ದೋಸೆ ಅದರಲ್ಲೂ ಚಾಲುಕ್ಯ ಹೋಟೆಲ್, ಮೀನಾಕ್ಷಿ ಭವನ್, ಮೈಲಾರಿ, ಎಂಟಿಆರ್ ಹೋಟೆಲ್ ದೋಸೆ ಅಂದರೆ ಅವರಿಗೆ ತುಂಬಾ ಇಷ್ಟ. ಮನೆಯಲ್ಲಿ ತಿಂಡಿ ತಿಂದರೂ ಮೀನಾಕ್ಷಿ ಭವನ್ ತಿಂಡಿ ಅಂದರೆ ಮತ್ತೆ ತಿನ್ನಲು ರೆಡಿ ನಮ್ಮಪ್ಪ. ಅವರಿಗೆ ನಾವು ಗಾಢ ಬಣ್ಣದ ಬಟ್ಟೆ ಹಾಕೋದು ಇಷ್ಟ ಇಲ್ಲ. ಅವರ ಜತೆ ಇರುವಾಗ ನಾವೆಲ್ಲರೂ ತಿಳಿ ಬಣ್ಣದ ಬಟ್ಟೆಯನ್ನೇ ಧರಿಸುತ್ತೇವೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications