ಎಲ್. ಆರ್. ಶಿವರಾಮೇ ಗೌಡ, ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು, ಫೆಬ್ರವರಿ 16: ಮಂಡ್ಯದ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ, ಸುಪ್ರೀಂಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಎಲ್. ಆರ್. ಶಿವರಾಮೇಗೌಡ ಜೆಡಿಎಸ್ ಪಕ್ಷದಲ್ಲಿದ್ದರು, ಬಳಿಕ ಬಿಜೆಪಿ ಸೇರಿದ್ದರು.ಅವರು ಪುತ್ರ ಎಲ್. ಎಸ್. ಚೇತನ್ ಗೌಡ ಜೊತೆ ಭಾನುವಾರ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. 2024ರ ಡಿಸೆಂಬರ್ನಲ್ಲಿಯೇ ಅವರು ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿದ್ದರು.
ಭಾನುವಾರ ಕೆಪಿಸಿಸಿ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಎಲ್. ಆರ್. ಶಿವರಾಮೇಗೌಡ, ಎಲ್. ಎಸ್. ಚೇತನ್ ಗೌಡ ಮತ್ತು ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಪಕ್ಷ ಸೇರಿದರು. ಡಿ. ಕೆ. ಶಿವಕುಮಾರ್ ಮೂವರು ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಡಿಸೆಂಬರ್ನಲ್ಲಿ ಮಾತನಾಡಿದ್ದ ಎಲ್. ಆರ್. ಶಿವರಾಮೇಗೌಡ, "ಈಗಾಗಲೇ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಶೀಘ್ರವೇ ನಾನು ಅಧಿಕೃತವಾಗಿ ಮಗನ ಜೊತೆ ಪಕ್ಷಕ್ಕೆ ಸೇರ್ಪಡೆ ಆಗುತ್ತೇನೆ" ಎಂದು ಘೋಷಣೆ ಮಾಡಿದ್ದರು.
ಬ್ರಿಜೇಶ್ ಕಾಳಪ್ಪ ಪಕ್ಷಕ್ಕೆ ವಾಪಸ್: ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದ ಬ್ರಿಜೇಶ್ ಕಾಳಪ್ಪ ಬಳಿಕ ಆಮ್ ಆದ್ಮಿ ಪಕ್ಷವನ್ನು ಸೇರಿದ್ದರು. ಆಮ್ ಆದ್ಮಿ ಪಕ್ಷ ಅವರಿಗೆ ರಾಷ್ಟ್ರೀಯ ವಕ್ತಾರ ಸ್ಥಾನವನ್ನು ನೀಡಿತ್ತು ಡಿಸೆಂಬರ್ 2023ರಲ್ಲಿ ಬ್ರಿಜೇಶ್ ಕಾಳಪ್ಪ ಎಎಪಿಗೆ ರಾಜೀನಾಮೆ ನೀಡಿದ್ದರು. ಈಗ ಕಾಂಗ್ರೆಸ್ಗೆ ವಾಪಸ್ ಆಗಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಬ್ರಿಜೇಶ್ ಕಾಳಪ್ಪ ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 600 ಮತಗಳನ್ನು ಪಡೆದು ಅವರು ಚುನಾವಣೆಯಲ್ಲಿ ಸೋಲು ಕಂಡಿದ್ದರು. 2022ರ ಸೆಪ್ಟೆಂಬರ್ನಲ್ಲಿ ಅವರು ಕಾಂಗ್ರೆಸ್ ಬಿಟ್ಟು ಎಎಪಿ ಸೇರಿದ್ದರು.
ಬ್ರಿಜೇಶ್ ಕಾಳಪ್ಪ ವಿದ್ಯಾರ್ಥಿಯಾಗಿದ್ದಾಗಲೇ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾಗಿ ಹಲವು ಟಿವಿ ವಾಹಿನಿಗಳ ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ.
ಸುಪ್ರೀಂಕೋರ್ಟ್ ವಕೀಲರಾಗಿ, ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರರಾಗಿ, ಹರ್ಯಾಣ ಸರ್ಕಾರದ ಅಡ್ವೊಕೇಟ್ ಜನರಲ್ ಆಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಕಾವೇರಿ, ಕೃಷ್ಣಾ ನದಿ ನೀರಿನ ಹಂಚಿಕೆ ವಿವಾದದಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ್ದಾರೆ.
ಎಲ್. ಆರ್. ಶಿವರಾಮೇಗೌಡ: ಎಲ್. ಆರ್. ಶಿವರಾಮೇಗೌಡರು ಮಂಡ್ಯದ ಮಾಜಿ ಸಂಸದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಜೊತೆ ಹಲವು ದಿನಗಳಿಂದ ವೇದಿಕೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. 2024ರ ನವೆಂಬರ್ನಲ್ಲಿ ನಡೆದ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೇಶ್ವರ ಪರ ಪ್ರಚಾರದಲ್ಲಿ ಅವರು ಪಾಲ್ಗೊಂಡಿದ್ದರು. ಹಾಸನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿಯೂ ಪಾಲ್ಗೊಂಡಿದ್ದರು.
ಎಲ್. ಆರ್. ಶಿವರಾಮೇಗೌಡ 1989, 1994ರಲ್ಲಿ ನಾಗಮಂಗಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 144,875 ಮತಗಳನ್ನು ಪಡೆದು ಜೆಡಿಎಸ್ನ ಚಲುವರಾಯಸ್ವಾಮಿ ವಿರುದ್ಧ ಸೋತಿದ್ದರು.
2018ರ ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಶಿವರಾಮೇಗೌಡ ಜೆಡಿಎಸ್ ಅಭ್ಯರ್ಥಿಯಾದರು. ಚುನಾವಣೆ ಗೆದ್ದರು. ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರನ್ನು ಉಪ ಚುನಾವಣೆ ಅಭ್ಯರ್ಥಿ ಎಂದು ದೇವೇಗೌಡರು ಘೋಷಣೆ ಮಾಡಿದ್ದರು.












Click it and Unblock the Notifications