ಬಾದಾಮಿ ಚಾಲುಕ್ಯರ ಇತಿಹಾಸದತ್ತ ಇಣುಕುನೋಟ
ಚಾಲುಕ್ಯರು ಮೂಲತಃ ವಿಷ್ಣುವಿನ ಉಪಾಸಕರಾಗಿದ್ದರೂ ಶೈವ, ಜೈನ ಮತ್ತು ಬುದ್ದ ಧರ್ಮಗಳ ಪ್ರಚಾರಕ್ಕೆ ಸಾಕಷ್ಟು ಉತ್ತೇಜನ ಕೊಟ್ಟರು. ಚಾಲುಕ್ಯರ ಮೊದಲ ಪುಲಿಕೇಶಿಗಿಂತ ಹೆಚ್ಚಾಗಿ ಆತನ ಮೊಮ್ಮಗ ಎರಡನೇ ಪುಲಕೇಶಿಯ ವೀರ ವಿಕ್ರಮಗಳು ನೆನಪಿನಲ್ಲಿ ಉಳಿಯುವಂಥವು. ಈ ಸಾಮಾಜ್ಯವನ್ನು ವಿಸ್ತರಿಸಿ ಸಮಗ್ರ ದಕ್ಷಿಣ ಭಾರತದ ಏಕೈಕ ಛತ್ರಾಧಿಪತಿ, ದಕ್ಷಿಣ ಪಥೇಶ್ವರನೆಂದು ಘೋಷಿಸಿಕೊಂಡ ಚಾಲುಕ್ಯರ ಪರಮಾಧಿಕಾರದ ಆ ಕಾಲದಲ್ಲಿ ಕರ್ನಾಟಕವು ಭಾರತದ ಇತರ ದೊರೆಗಳ ದೃಷ್ಟಿಯಿಂದ ಮಾತ್ರವೇ ಅಲ್ಲದೇ ಪರದೇಶಗಳ ದೃಷ್ಟಿಯಲ್ಲಿಯೂ ಕೂಡಾ ಮಹಾರಾಜಕೀಯ ಶಕ್ತಿಯಾಗಿ ವಿಜೃಂಭಿಸಿತು.
ಆಸ್ಥಾನದಲ್ಲಿ ದಾಮೋದರ ರವಿಕೀರ್ತಿ, ಭಾರವಿಯಂತಹ ಮಹಾಕವಿಗಳು ಆಶ್ರಯ ಪಡೆದಿದ್ದರು. ಚಾಲುಕ್ಯರ ಕೊಡುಗೆ ರಾಜಕೀಯಕ್ಕಿಂತ ಸಂಸ್ಕೃತಿಗೆ ಹೆಚ್ಚು ಸಂದಿದೆ. ಕಲೆ ಸಾಹಿತ್ಯ ಶಿಲ್ಪವಸ್ತುಗಳಿಗೆ ಇವರು ಉದಾರವಾದ ಪೋಷಣೆ ಕೊಟ್ಟರು. ಭಾರತದ ವಾಸ್ತುಶಿಲ್ಪಗಳಲ್ಲಿ ಚಾಲುಕ್ಯ ಶೈಲಿ ಗಣನೀಯವಾದದ್ದು. ಮುಂದೆ ಇದನ್ನು ಇನ್ನು ಸೊಗಸುಗೊಳಿಸಿದ ಹೊಯ್ಸಳರು ಬೇಲೂರು-ಹಳೆಬೀಡು ದೇಗುಲಗಳಲ್ಲಿ ಮೈ ಮರೆಯಿಸುವಂತಹ ಅತ್ಯದ್ಬುತವಾದ ಶಿಲ್ಪಕಲಾ ಶೈಲಿಯನ್ನು ಮೆರೆದುದು ನಿಜ. ಕರ್ನಾಟಕದ ಇತಿಹಾಸದಲ್ಲಿ ಚಾಲುಕ್ಯರ ಅಧ್ಯಾಯ ಸ್ವರ್ಣಯುಗವಾಗಿ ಇತಿಹಾಸಕಾರರಿಂದ ಬರುತ್ತದೆ. [ಮೂರು ದಿನಗಳ ಚಾಲುಕ್ಯ ಉತ್ಸವ]

ಚಾಲುಕ್ಯ ಶಿಲ್ಪದಂಥದ ಶ್ರೇಷ್ಠ ಕೇಂದ್ರಗಳಾದ ಬದಾಮಿ, ಐಹೊಳೆ, ಪಟ್ಟದಕಲ್ಲು ಹಾಗೂ ಮಹಾಕೂಟಗಳಿಗೆ ಆಗಿನಿಂದಲೂ ಅಖಿಲ ಭಾರತ ಕೀರ್ತಿ ಇತ್ತಲ್ಲದೇ ಇಲ್ಲಿಯ ವಿದ್ಯಾಪೀಠಗಳಿಗೆ ದೇಶದ ನಾನಾ ಭಾಗಗಳಿಂದ ಜನರು ಕಲಾಭ್ಯಾಸಕ್ಕಾಗಿ ಬರುತ್ತಿದ್ದರು.
ಲಾಡಖಾನ, ದುರ್ಗಾ, ಮಾಲಗತ್ತಿ ಶಿವಾಲಯ, ಮಲ್ಲಿಕಾರ್ಜುನ, ವಿರೂಪಾಕ್ಷ, ಗಳಗನಾಥ, ಬೂತನಾಥ, ಗುಹಾಂತರ ದೇವಾಲಯಗಳು ಮತ್ತಿತರ ನೂರಾರು ದೇವಾಲಯಗಳು ವಾಸ್ತು ಶಿಲ್ಪಕಲೆಯು ಈ ನಾಡಿನಲ್ಲಿ ಹೇಗೆ ವಿವಿಧ ಪ್ರಯೋಗಗಳನ್ನು ಶೈಲಿಗಳನ್ನು ಒಳಗೊಂಡು ಬೆಳೆಯಿತೆಂಬುದನ್ನು ಸಾರುತ್ತದೆ. ಒಂದು ದೃಷ್ಠಿಯಿಂದ ಈ ಎಲ್ಲ ದೇವಾಲಯಗಳು ಮುಕ್ತ ವಸ್ತು ಸಂಗ್ರಹಾಲಯಗಳಂತೆ ರಮಣೀಯವಾಗಿವೆ. ಹೀಗಾಗಿ ಚಾಲುಕ್ಯರು ಕರ್ನಾಟಕ ಸಾಂಸ್ಕೃತಿಕ ವೈಭವಕ್ಕೆ ಅಮೋಘ ತಳಹದಿ ಹಾಕಿದ್ದಾರೆ. ಇಂಥ ತಳಹದಿಯನ್ನು ನಮಗೆ ಮುಂದುವರೆಸಿಕೊಂಡು ಹೋಗುವ ವಿಚಾರ ದೂರವೇ ಉಳಿದರೂ ಸಹ ಇದ್ದದ್ದನ್ನೇ ಸಂರಕ್ಷಿಸಿದರೆ ಮಹತ್ಸಾದನೆ ಮಾಡಿದಂತಾಗುತ್ತದೆ.
ಈ ನಿಟ್ಟಿನಲ್ಲಿ ಧಾರವಾಡ ವಲಯದ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಕೈಗೊಂಡ ಸಂರಕ್ಷಣಾ ಹಾಗೂ ಸೌಂದರ್ಯೀಕರಣ ಕಾಮಗಾರಿಗಳು ಈ ಸ್ಥಳಗಳನ್ನು ಅಂತಾರಾಷ್ಟ್ರೀಯ ಪ್ರಶಂಸೆಗೆ ಒಳಪಟ್ಟಿದೆ. ಭಾರತೀಯ ಪುರಾತತ್ವ ಇಲಾಖೆಯ ಧಾರವಾಡ ವಲಯದ ಅಧೀಕ್ಷಕರಾದ ಡಾ. ಎಸ್.ವಿ. ವೆಂಕಟೇಶಯ್ಯ ಆಡಳಿತಾವಧಿಯಲ್ಲಿ ಇಡೀ ಉತ್ತರ ಕರ್ನಾಟಕ ಸ್ಮಾರಕಗಳಿಗೆ ಪುನರ್ಜೀವನ ದೊರೆತಂತಾಗಿದೆ.

ಪುರಾತತ್ವ ಇಲಾಖೆಯು ಕೈಗೊಂಡ ಬಾದಾಮಿ ಸ್ಮಾರಕಗಳ ಸುತ್ತಲಿನ ಸೌಂದರ್ಯೀಕರಣ ಕಾರ್ಯವು ಖ್ಯಾತ ಚಲನಚಿತ್ರ ನಿರ್ದೇಶಕರನ್ನು ಕೈಬೀಸಿ ಕರೆಯುತ್ತಿದೆ. ಪಟ್ಟದಕಲ್ಲಿನಲ್ಲಿ ದುಸ್ಥಿತಿಯಲ್ಲಿದ್ದ ಜೈನ ದೇವಾಲಯವನ್ನು ಪುನರುಜ್ಜಿವನಗೊಳಿಸಿ ಸಂರಕ್ಷಿಸಿದ ಮಹತ್ಕಾರ್ಯಕ್ಕೆ ಯುನೆಸ್ಕೋ ಪ್ರಶಂಸನೀಯ ಪ್ರಶಸ್ತಿ ಪತ್ರ ನೀಡಿದೆ. ಹಿರಿಯ ಪುರಾತತ್ವ ಇಂಜಿನಿಯರ್ ಸೋಮಲ್ ನಾಯಕ ಕೈಗೊಂಡ ಇಂಥ ಅತ್ಯುತ್ತಮ ಕಾರ್ಯಗಳಿಗೆ ಬದಾಮಿಯ ಕೆಲ ಸಾರ್ವಜನಿಕರು ಅಷ್ಟೇ ಪ್ರೋತ್ಸಾಹ ನೀಡಿದ್ದರು. ಯುವ ಕಲಾವಿದ ಇಷ್ಟಲಿಂಗ ಶಿರಸಿ ನೀಡಿದ ಪ್ರೋತ್ಸಾಹ ಹಾಗೂ ಸೇವೆ ಇತರ ಯುವಕರಿಗೂ ಮಾದರಿಯಾಗಬೇಕಿದೆ.
(ಲೇಖಕ ಡಾ. ವೀರೇಶ್ ಆರ್. ಹಿರೇಮಠ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್ಡಿಎಂ ಕಾಲೇಜಿನ ಮಾಸ್ ಕಮ್ಯೂನಿಕೇಷನ್ ಮತ್ತು ಜರ್ನಲಿಸಂ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿದ್ದಾರೆ.)












Click it and Unblock the Notifications