ಗಡಿವಿವಾದ; ಬಸವರಾಜ ಬೊಮ್ಮಾಯಿಯವರು ದುರ್ಬಲ ಮುಖ್ಯಮಂತ್ರಿ : ಸಿದ್ದರಾಮಯ್ಯ
ಬಾಗಲಕೋಟೆ,ಡಿಸೆಂಬರ್ 15: ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ಗಡಿ ವಿವಾದ ಈಗಾಗಲೇ ಮುಗಿದ ಅಧ್ಯಾಯ. ಆದರೆ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ದುರ್ಬಲ ಮುಖ್ಯಮಂತ್ರಿ ಆಗಿರುವುದರಿಂದ ಮತ್ತೆ ಮತ್ತೆ ಈ ಗಡಿ ವಿವಾದ ಮುನ್ನೆಲೆಗೆ ಬಂದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆಯನ್ನು ಅಮಿತ್ ಶಾ ಕರೆಯುವ ಅಗತ್ಯವಿರಲಿಲ್ಲ. ರಾಜಕಾರಣಕ್ಕಾಗಿ ಮಹಾರಾಷ್ಟ್ರದವರು ಗಡಿಕ್ಯಾತೆ ತೆಗೆಯುತ್ತಿದ್ದಾರೆ.
ಸದ್ಯಗಡಿ ವಿಷಯದಲ್ಲಿ ಸಮಸ್ಯೆಯೇ ಇಲ್ಲ. ನೆಲ, ಜಲ, ಭಾಷೆಯ ವಿಷಯದಲ್ಲಿ ನಾವು ರಾಜಿಯಾಗುವ ಪ್ರಶ್ನೆಯೇ ಇಲ್ಲ. ಕರ್ನಾಟಕದ ಅಂಗವಾಗಿರುವ ಬೆಳಗಾವಿಯ ಒಂದಿಂಚು ಜಾಗವನ್ನೂ ಬಿಟ್ಟು ಕೊಡುವ ಪ್ರಶ್ನೆ ಇಲ್ಲ. ರಾಜ್ಯ ಸರ್ಕಾರ ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಪುಂಡಾಟಿಕೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಇನ್ನೂ 2023 ರ ವಿಧಾನಸಭಾ ಚುನಾವಣಾ ಕುರಿತು ಈಗಾಗಲೇ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ನಾಯಕ ಜೊತೆಗೆ ಚರ್ಚೆಯನ್ನ ನಡೆಸಿದ್ದು, ಪಕ್ಷ ಸಂಘಟನೆ, ಅಭ್ಯರ್ಥಿಗಳ ಆಯ್ಕೆಯ ಮಾದರಿ, ಹಾಗೂ ಚುನಾವಣಾ ಕಾರ್ಯತಂತ್ರಗಳ ಕುರಿತು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.
ಡಿಕೆಶಿ ಸಿದ್ದು ಎರಡು ತಂಡಗಳಾಗಿ ರಾಜ್ಯ ಪ್ರವಾಸ
ಇನ್ನೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಚುನಾವಣಾ ಸಿದ್ಧತೆಗಾಗಿ ಮುಂದಿನ 75 ದಿನಗಳಲ್ಲಿ ಪಕ್ಷ ಏನೇನು ಮಾಡಬೇಕು ಎಂಬುದರ ಕುರಿತು ದೆಹಲಿಯಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿದ್ದೇವೆ. ಅದರಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಜನವರಿ 15ರೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಬಿಡುಗಡೆಯಾಗಲಿದೆ ಎಂದರು.
ಅಲ್ಲದೇ ಡಿಸೆಂಬರ್ 30ರಂದು ವಿಜಯಪುರದಲ್ಲಿ ಕೃಷ್ಣಾ ಮೇಲ್ದಂಡೆ, ಜ.2ರಂದು ಹುಬ್ಬಳ್ಳಿಯಲ್ಲಿ ಮಹದಾಯಿಗಾಗಿ ಆಗ್ರಹಿಸಿ ಬೃಹತ್ ಸಮಾವೇಶ ನಡೆಸಲಾಗುವುದು. ಜ.8ರಂದು ಎಸ್ಸಿ, ಎಸ್ಟಿ ಸಮಾವೇಶ ನಡೆಸಲಿದ್ದೇವೆ. ಜ.9ರಿಂದ 22 ಜಿಲ್ಲೆಗಳಲ್ಲಿ ಕಾಂಗ್ರೆಸ್ ನಾಯಕರು ಜಂಟಿಯಾಗಿ ಪ್ರವಾಸ ಮಾಡಿ, ಬಿಜೆಪಿ ಸರ್ಕಾರದ ದುರಾಡಳಿತದ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಿದ್ದೇವೆ. ಬಳಿಕ, ಚುನಾವಣೆ ಹಿನ್ನೆಲೆಯಲ್ಲಿ ಎರಡು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡಲಿದ್ದೇವೆ.
ಒಂದು ತಂಡದ ನಾಯಕತ್ವವನ್ನು ನಾನು ವಹಿಸಲಿದ್ದೇನೆ. ಇನ್ನೊಂದು ತಂಡಕ್ಕೆ ಡಿ.ಕೆ.ಶಿವಕುಮಾರ ಮತ್ತು ಇತರ ಹಿರಿಯರು ಮುಖಂಡತ್ವ ವಹಿಸಲಿದ್ದಾರೆ. ಸಮಯದ ಅಭಾವದಿಂದಾಗಿ ಎರಡು ತಂಡಗಳಲ್ಲಿ, ಪ್ರತ್ಯೇಕ ಬಸ್ಸುಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದೇವೆ. ನಾನು ಉತ್ತರ ಕರ್ನಾಟಕ ಭಾಗದಲ್ಲಿ ಯಾತ್ರೆ ಕೈಗೊಂಡರೆ, ದಕ್ಷಿಣ ಕರ್ನಾಟಕ ಭಾಗಕ್ಕೆ ಡಿ.ಕೆ.ಶಿವಕುಮಾರ ಅವರ ತಂಡ ತೆರಳಲಿದೆ ಎಂದು ಹೇಳಿದರು.