Prajwal Revanna Case: ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಂಚಿಕೆ; ಬೋಧಿಸತ್ವ ಅಂಬೇಡ್ಕರ್ ಸೇವಾ ಸಮಿತಿ ಪ್ರತಿಭಟನೆ
ಬೆಂಗಳೂರು, ಮೇ 10: ಹಾಸನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಹರಿಯಬಿಟ್ಟಿರುವ ಕಿಡಿಗೇಡಿಗಳನ್ನು ಬಂಧನ ಮಾಡುವಂತೆ ಒತ್ತಾಯಿಸಿ ಬೋಧಿಸತ್ವ ಅಂಬೇಡ್ಕರ್ ಸೇವಾ ಸಮಿತಿಯ ಮುಖಂಡರು, ಕಾರ್ಯಕರ್ತೆಯರು ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್.ಆನಂದ್ ಹಾಗೂ ಇನ್ನಿತರೆ ಮುಖಂಡರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಕೂಡ ಪಾಲ್ಗೊಂಡು, ಹಾಸನ ಸೇರಿದಂತೆ ರಾಜ್ಯಾದ್ಯಂತ ಪೆನ್ ಡ್ರೈವ್ ಮತ್ತು ಅಶ್ಲೀಲ ವಿಡಿಯೋಗಳನ್ನು ಹಂಚಿದ ಕಿಡಿಗೇಡಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಅವರನ್ನು ಈವರೆಗೆ ಬಂಧನ ಮಾಡದಿರುವ ರಾಜ್ಯ ಸರಕಾರದ ನಿರ್ಲಕ್ಷ್ಯವನ್ನು ಉಗ್ರವಾಗಿ ಖಂಡಿಸಿದರು.

ಸರಕಾರ ಹಾಗೂ ಎಸ್ಐಟಿ ವಿರುದ್ಧ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೆ; ಈ ಪ್ರಕರಣವನ್ನು ಸರಿಯಾದ ದಿಕ್ಕಿನಲ್ಲಿ ಎಸ್ ಐಟಿ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿಲ್ಲ ಎಂದು ನೇರ ಆರೋಪ ಮಾಡಿದರು.
ಇದು ಅತ್ಯಂತ ಸೂಕ್ಷ್ಮ ಪ್ರಕರಣ. ಇಲ್ಲಿ ನೊಂದ ಮಹಿಳೆಯರನ್ನು ಮತ್ತಷ್ಟು ನೋವಿಗೆ ತಳ್ಳುವ ಕೆಲಸವನ್ನು ಸ್ವತಃ ಸರಕಾರ, ತನಿಖಾ ತಂಡ ಮಾಡುತ್ತಿದೆ. ಇದು ಮಹಿಳೆಯರನ್ನು ಹತ್ತಿಕ್ಕುವ ಪ್ರಯತ್ನ. ವಿಡಿಯೋಗಳನ್ನು ಪೆನ್ ಡ್ರೈವ್ ಗಳಲ್ಲಿ ತುಂಬಿಸಿ ಎಲ್ಲೆಡೆ ಹರಿಯಬಿಟ್ಟಿರುವುದು ಮೃಗೀಯ ವರ್ತನೆ ಹಾಗೂ ಅಮಾನವೀಯ ಎಂದು ಅವರು ಕಿಡಿಕಾರಿದರು.
ಎಸ್ ಐಟಿ ತನಿಖೆ ಬಗ್ಗೆ ನಮಗೆ ವಿಶ್ವಾಸವಿಲ್ಲ. ಆದ್ದರಿಂದ ಕೂಡಲೇ ಸರಕಾರ ಈ ಪ್ರಕರಣವನ್ನು ಸಿಬಿಐ ತನಿಖಗೆ ಒಪ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು. ಒಂದು ವೇಳೆ ಸರಕಾರ ನಿರ್ಲಕ್ಷ್ಯ ದೋರಣೆ ತಾಳಿದರೆ ಉಗ್ರವಾಗಿ ಪ್ರತಿಭಟಿಸುತ್ತೇವೆ ಎಂದು ಅವರು ಎಚ್ಚರಿಕೆ ಕೊಟ್ಟರು.












Click it and Unblock the Notifications