ಮಂಗಳೂರಲ್ಲಿ ನಿಗೂಢ ಸ್ಫೋಟ; ಗೃಹ ಸಚಿವ ವಿಡಿಯೋ ಹೇಳಿಕೆ
ಬೆಂಗಳೂರು, ನವೆಂಬರ್ 20; ಮಂಗಳೂರು ನಗರದ ಗರೋಡಿಯಲ್ಲಿ ಶನಿವಾರ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿದೆ. ಇದು ಭಯೋತ್ಪಾದನೆ ಕೃತ್ಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಖಚಿತಪಡಿಸಿದ್ದಾರೆ.
ಭಾನುವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣದ ಬಗ್ಗೆ ಮಾತನಾಡಿದರು, "ಮಂಗಳೂರಿನಲ್ಲಿ ನಿನ್ನೆ ರಿಕ್ಷಾ ಒಂದರಲ್ಲಿ ಘಟಿಸಿದ ಸ್ಫೋಟದಲ್ಲಿ ಗಾಯಗೊಂಡ ವ್ಯಕ್ತಿಗೆ ಉನ್ನತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ" ಎಂದರು.
ಮಂಗಳೂರಿನಲ್ಲಿ ನಿನ್ನೆ ರಿಕ್ಷಾ ಒಂದರಲ್ಲಿ ಘಟಿಸಿದ ಸ್ಫೋಟದಲ್ಲಿ ಗಾಯಗೊಂಡ ವ್ಯಕ್ತಿಗೆ ಉನ್ನತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಮ್ಮ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೇಂದ್ರದ ಭದ್ರತಾ ಪಡೆಗಳ ಜೊತೆಗೆ ಸಹ ಮಾತುಕತೆ ಆಗಿದ್ದು ಅವರೂ ಕೂಡ ಕಾರ್ಯಚರಣೆಗೆ ಇಳಿದಿದ್ದಾರೆ.@CMofKarnataka pic.twitter.com/GrWbHszxOB
— Araga Jnanendra (@JnanendraAraga) November 20, 2022
"ನಮ್ಮ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೇಂದ್ರದ ಭದ್ರತಾ ಪಡೆಗಳ ಜೊತೆಗೆ ಸಹ ಮಾತುಕತೆ ಆಗಿದ್ದು ಅವರೂ ಕೂಡ ಕಾರ್ಯಚರಣೆಗೆ ಇಳಿದಿದ್ದಾರೆ" ಎಂದು ಗೃಹ ಸಚಿವರು ವಿವರಣೆ ನೀಡಿದ್ದಾರೆ.

ಭಾನುವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಟ್ವೀಟ್ ಮಾಡಿ, "ಈ ಘಟನೆ ಆಕಸ್ಮಿಕವಾಗಿ ನಡೆದಿದ್ದಲ್ಲ. ಗಂಭೀರ ಹಾನಿ ಉಂಟು ಮಾಡುವ ಉದ್ದೇಶದಿಂದಲೇ ಈ ಕೃತ್ಯ ನಡೆಸಲಾಗಿದೆ. ರಾಜ್ಯದ ಪೊಲೀಸರು ಕೇಂದ್ರದ ತನಿಖಾ ಏಜೆನ್ಸಿಗಳ ಜೊತೆ ಸೇರಿ ಇದರ ಬಗ್ಗೆ ತನಿಖೆ ನಡೆಸುತ್ತಿವೆ" ಎಂದು ಹೇಳಿದ್ದಾರೆ.
ಗರೋಡಿಯಲ್ಲಿ ಶನಿವಾರ ಚಲಿಸುತ್ತಿದ್ದ ಆಟೋದಲ್ಲಿ ಲಘು ಸ್ಫೋಟ ಸಂಭವಿಸಿತ್ತು. ಬಳಿಕ ದಟ್ಟವಾದ ಹೊಗೆ ಕಾಣಿಸಿಕೊಂಡಿತ್ತು. ಆಟೋದಲ್ಲಿದ್ದ ಚಾಲಕ ಮತ್ತು ಪ್ರಯಾಣಿಕ ಗಾಯಗೊಂಡಿದ್ದಾರೆ. ಅವರಿಬ್ಬರ ಹೆಸರನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ರಿಕ್ಷಾದಲ್ಲಿದ್ದ ಕುಕ್ಕರ್ ಸ್ಫೋಟಗೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಪೊಲೀಸರು ಇದನ್ನು ಖಚಿತಪಡಿಸಿಲ್ಲ. ಕಂಕನಾಡಿ ಪೊಲೀಸರು ಸ್ಥಳದಲ್ಲಿ ಮಹಜರು ನಡೆಸುತ್ತಿದ್ದಾರೆ. ಎನ್ಐಎ ಅಧಿಕಾರಿಗಳು ಸಹ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಯಾಣಿಕ ಆಟೋಗೆ ಎಲ್ಲಿ ಹತ್ತಿದ್ದ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಟೋ ಚಾಲಕ ಮತ್ತು ಪ್ರಯಾಣಿಕ ಇನ್ನೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಅವರು ಮಾತನಾಡುವಂತೆ ಆದ ಮೇಲೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಸಿದ್ದರಾಮಯ್ಯ ಟ್ವೀಟ್; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, 'ಮಂಗಳೂರು ಬಾಂಬು ಸ್ಪೋಟ ಮತ್ತೊಮ್ಮೆ ರಾಜ್ಯದ ಗುಪ್ತಚರ ವಿಭಾಗ ಮತ್ತು ಗೃಹ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸಿದೆ. ಈ ಘಟನೆಯ ಬಗ್ಗೆ ಊಹಾಪೋಹಗಳ ಸುದ್ದಿಗಳನ್ನು ನಂಬಿ ಉದ್ರಿಕ್ತರಾಗದೆ ಜನತೆ ಸಂಯಮ ಮತ್ತು ಎಚ್ಚರದಿಂದ ಇರಬೇಕೆಂದು ರಾಜ್ಯದ ಜನರಲ್ಲಿ ಕೇಳಿಕೊಳ್ಳುತ್ತಿದ್ದೇನೆ' ಎಂದು ಹೇಳಿದ್ದಾರೆ.
'ರಾಜ್ಯ ಪೊಲೀಸ್ ಮಹಾನಿರ್ದೇಶಕರೇ ಭಯೋತ್ಪಾದಕ ಕೃತ್ಯ ಎಂದು ದೃಢೀಕರಿಸಿರುವ ಮಂಗಳೂರು ನಗರದ ಬಾಂಬು ಸ್ಪೋಟದ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕಳವಳಕಾರಿಯಾದ ಈ ಘಟನೆಯ ಬಗ್ಗೆ ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು' ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.












Click it and Unblock the Notifications