Voter Data Theft: ಚಿಲುಮೆ ಸಂಸ್ಥೆಯಲ್ಲಿ ಹಣದ ಬ್ಲ್ಯಾಕ್ ಆಂಡ್ ವೈಟ್ ದಂಧೆ- ಡಿಕೆಶಿ ಗಂಭೀರ ಆರೋಪ
ಬೆಂಗಳೂರು, ನವೆಂಬರ್ 19: ಚಿಲುಮೆ ಸಂಸ್ಥೆಯಲ್ಲಿ ಹಣವನ್ನು ಬ್ಲ್ಯಾಕ್ ಆಂಡ್ ವೈಟ್ ಮಾಡುವ ದಂಧೆ ನಡೆಯುತ್ತಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿ ಅವರು, ಮತದಾರರ ಮಾಹಿತಿ ಅಕ್ರಮದ ಬಗ್ಗೆ ನಾವು ಎಲ್ಲ ವಿಚಾರವನ್ನು ಜನರ ಮುಂದೆ ಇಟ್ಟಿದ್ದೇವೆ. ಮತದಾರರ ಪಟ್ಟಿಯಲ್ಲೂ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದೇವೆ. ಈ ವಿಚಾರವಾಗಿ ಸರ್ಕಾರ ಪ್ರಮುಖ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನಿನ್ನೆ ಪೊಲೀಸರು ದಾಳಿ ನಡೆಸಿ ಕೆಲವು ದಾಖಲೆ ವಶಪಡಿಸಿಕೊಂಡಿದ್ದು, ಅಲ್ಲಿ ನೋಟು ಏಣಿಕೆ ಯಂತ್ರಗಳು ಲಭ್ಯವಾಗಿವೆ.
ಟ್ರಸ್ಟ್ ಗಳಲ್ಲಿ 2 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ದೇಣಿಗೆಯಾಗಿ ಪಡೆಯುವಂತಿಲ್ಲ. ಚೆಕ್ ಮೂಲಕವೇ ಪಡೆಯಬೇಕು. ಹೀಗಿರುವಾಗ ಅಲ್ಲಿ ನೋಟು ಏಣಿಕೆ ಯಂತ್ರ ಯಾಕಿತ್ತು? ಆ ಕಚೇರಿಯಲ್ಲಿ ಕಪ್ಪು ಹಣ ಬಿಳಿ ಹಣವಾಗಿ ಪರಿವರ್ತನೆಯಾಗುತ್ತಿತ್ತು. ಈ ವಿಚಾರವಾಗಿ ಮುಂದೆ ದಾಖಲೆ ಸಮೇತ ಮಾತನಾಡುತ್ತೇವೆ ಎಂದರು.

ಈಗಾಗಲೇ ಎಲ್ಲ ಅಕ್ರಮ ನಡೆಸಿದ ಅಧಿಕಾರಿಗಳನ್ನು ಬಂಧಿಸಬೇಕು. ಇಲ್ಲದೇ ಹೋದರೆ ಸುಮ್ಮನಿರಲ್ಲ ಎಂದು ಡಿ. ಕೆ. ಶಿವಕುಮಾರ ಎಚ್ಚರಿಕೆ ನೀಡಿದರು. ಕೇಂದ್ರ ಚುನಾವಣಾ ಆಯೋಗಕ್ಕೂ ನಾವು ಇದನ್ನು ಕೊಂಡೊಯ್ಯುತ್ತೇವೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಸ್ವಯಂ ಪ್ರೇರಿತ ಕೇಸ್ ದಾಖಲಸಿಕೊಳ್ಳುವಂತೆ ಮನವಿ ಮಾಡುತ್ತೇನೆ. ಭ್ರಷ್ಟ ನೀಚ ಕೆಟ್ಟ ಸರ್ಕಾರವನ್ನು ತೊಲಗಿಸಬೇಕು ಎಂದಿದ್ದಾರೆ.
ಈ ಕುರಿತು ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್, ಬಿಜೆಪಿಗೆ ಬೇರೆ ವಿಷಯ ಇಲ್ಲ, ಈ ವೋಟರ್ ಐಡಿ ಅಕ್ರಮವೋ, ಸಕ್ರಮವೋ ಅದು ಬೇಕಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡೋದನ್ನು ಈ ಸರ್ಕಾರದ ಅವಧಿಯಲ್ಲಿ ಕಾಣೋದಿಲ್ಲ. ವೈಫಲ್ಯದ ಬಗ್ಗೆ ಚರ್ಚೆ ಮಾಡಲ್ಲ. ಈ ವೋಟರ್ ಐಡಿಯಿಂದ ಮಹಾನ್ ಆಪತ್ತು ಬರುತ್ತೆ ಅಂತ ನಂಗೆನೂ ಅನ್ಸಲ್ಲ ಎಂದರು.

ಇನ್ನೂ ಚಿಲುಮೆ ಎಂಬ ಖಾಸಗಿ ಸಂಸ್ಥೆ ನಡೆಸಿದ ಮತದಾರರ ಪಟ್ಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಮೊದಲು ತನಿಖೆ ನಡೆಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಬಿಎಂಪಿ ಆಯುಕ್ತರ ಅನುಮತಿ ಇಲ್ಲದೆ ಮಾಡಲು ಆಗುತ್ತಾ? ಎಂದು ಪ್ರಶ್ನಿಸಿದರು.
ಚಿಲುಮೆ ಸಂಸ್ಥೆಗೆ ಮೈತ್ರಿ ಸರ್ಕಾರ ಇದ್ದಾಗಲೇ ಅನುಮತಿ ಕೊಟ್ಟಿರುವ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿ, ನಮ್ಮ ಕಾಲದಲ್ಲಿ, ಇವರ ಕಾಲದಲ್ಲಿ ಇತ್ತು ಎಂದು ಕೇಳುತ್ತೀರಲ್ಲಾ, ಒಂದು ಸಂಸ್ಥೆ ದುಡ್ಡು ಇಲ್ಲದೇ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಅದಕ್ಕೆ ಜಾಹಿರಾತು ನೀಡದೆ, ಇವರಿಗೇ ಗುತ್ತಿಗೆ ನೀಡಲಾಗಿದೆ. ಆದರೆ ಚಿಲುಮೆಯವರು ಬಿಎಲ್ಓಗಳ ಐಡಿ ಬಳಕೆ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು.
ಈ ಸಂಬಂಧಿಸಿದಂತೆ ವ್ಯವಹಾರ ಎಷ್ಟು ನಡೆದಿರಬಹುದು. ಸರ್ಕಾರದಿಂದ ಹಣ ಪಡೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. 8000, 10000 ಜನರನ್ನು ನೇಮಕ ಮಾಡಬೇಕಾದ್ರೆ ಎಷ್ಟು ಹಣ ಬೇಕು? ದಿನಕ್ಕೆ 1500 ಕೊಡಬೇಕಾದರೇ ಎಷ್ಟು ಹಣ ಬೇಕು? ಎಂದು ಪ್ರಶ್ನಿಸಿದರು. ಆದರೆ ಇವಾಗ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಚಿಲುಮೆ ಸಂಸ್ಥೆಗೆ ಅನುಮತಿ ನೀಡಲಾಗಿತ್ತು ಎಂದರೆ ಹೇಗೆ? ಈ ವಿಚಾರವಾಗಿ ಮೊದಲು ತನಿಖೆಮಾಡಲಿ ಎಂದು ಒತ್ತಾಯಿಸಿದರು.












Click it and Unblock the Notifications