ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದ ಹಲ್ಲೆ; ಪೊಲೀಸರ ಅಮಾನತಿಗೆ ಆಗ್ರಹಿಸಿ ಸಿಡಿದೆದ್ದ ಶೋಭಾ ಕರಂದ್ಲಾಜೆ
ಬೆಂಗಳೂರು: ಹುಬ್ಬಳ್ಳಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಠಾಣೆಯ ಪೋಲೀಸ್ ಅಧಿಕಾರಿಗಳನ್ನು ಮತ್ತು ವ್ಯಾನಿನಲ್ಲಿದ್ದ ಪೋಲೀಸರನ್ನು ತಕ್ಷಣ ಅಮಾನತುಗೊಳಿಸಬೇಕು ಹಾಗೂ ಸುಳ್ಳು ಕೇಸು ದಾಖಲಿಸಿದ ಸುವರ್ಣಾರ ಮೇಲೆ ಕೇಸ್ ದಾಖಲಿಸಿ ಅವರನ್ನು ಬಂಧಿಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಎಸ್.ಐ.ಆರ್. ಸರ್ವೇ ವಿರೋಧಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕೆ, ದಲಿತ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ್ದಕ್ಕೆ ಹಾಗೂ ದಲಿತ ಮಹಿಳೆಯನ್ನು ವಿವಸ್ತ್ರಗಿಳಿಸಿದ್ದಕ್ಕೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಜನವರಿ 1 ಮತ್ತು 2ರಂದು ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರ ವಾರ್ಡ್ ಸಂಖ್ಯೆ 59ರಲ್ಲಿ ಬಿ.ಎಲ್.ಎ. ಕುಲಕರ್ಣಿ ಮತ್ತು ಬಿ.ಎಲ್.ಎ.2 ಮರಿಯಾದಾಸ್ ಎಸ್.ಐ.ಆರ್. ಪ್ರೀ ಮ್ಯಾಚಿಂಗ್ ಮಾಡಲು ಮನೆಮನೆ ಸರ್ವೇ ನಡೆಸುವಾಗ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಸುವರ್ಣಾ ಅವರು ಇದನ್ನು ವಿರೋಧಿಸಿದ್ದಲ್ಲದೆ, ತಂಡದ ಜೊತೆಗಿದ್ದ, ಮರೊಯಾದಾಸ್ ಅವರ ಕುಟುಂಬದವರಾದ ಸುಜಾತಾ ಎಂಬುವರ ಮೇಲೆ ಕೇಸ್ ದಾಖಲಿಸಿದ್ದು, ಒಟ್ಟು ನಾಲ್ಕು ಕೇಸ್ ಅವರ ವಿರುದ್ಧ ದಾಖಲಾಗಿವೆ.
ಈ ಸಂಬಂಧವಾಗಿ ಹುಬ್ಬಳಿ ಪೋಲೀಸ್ ಸುಜಾತಾ ಅವರನ್ನು ಅರೆಸ್ಟ್ ಮಾಡಿ ವ್ಯಾನಿನಲ್ಲಿ ಕರೆದುಕೊಂಡು ಹೋಗುವಾಗ ಆಕೆಯನ್ನು ವಿವಸ್ತ್ರಗೊಳಿದ ಘಟನೆ ನಡೆದಿದೆ. ಸುಜಾತಾ ತಾನಾಗಿಯೇ ತನ್ನ ವಸ್ತ್ರ ಹರಿದುಕೊಂಡಿದ್ದಾಳೆ ಎಂದು ಹೇಳುವ ಮೂಲಕ ಪೊಲೀಸರು ಆಕೆಯನ್ನು ಅವಮಾನಿಸಿದ್ದಾರೆ ಎಂದು ಶೋಬಾ ಕರಂದ್ಲಾಜೆ ಆರೋಪಿಸಿದರು.
ಕಾಂಗ್ರೆಸ್ ಮೊದಲಿನಿಂದಲೂ ಎಸ್.ಐ.ಆರ್. ವಿರೋಧಿಸುತ್ತಿದೆ. ಅದೇ ಮನಸ್ಥಿತಿ ಸುವರ್ಣಾ ಅವರ ವರ್ತನೆಯಲ್ಲಿದೆ. ದಲಿತ ಮಹಿಳೆಯ ಮೇಲೆ ಈ ರೀತಿ ಸುಳ್ಳು ಪ್ರಕರಣ ದಾಖಲಿಸಿ, ಆಕೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿರುವುದು ಅಮಾನವೀಯ. ಈ ಘಟನೆಯ ಕುರಿತು ಎಸ್.ಐ., ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಹುಬ್ಬಳ್ಳಿಯ ಪೋಲೀಸ್ ಆಯುಕ್ತರು, ಹಾಗೂ ಸರ್ಕಾರ ಮೌನ ವಹಿಸಿರುವುದು ಖೇದಕರ. ಇದು ಮಹಿಳೆಯರ ಬಗ್ಗೆ ಅವರಿಗಿರುವ ಅಗೌರವದ ಭಾವನೆಯನ್ನು ತೋರಿಸುತ್ತದೆ. ಇಂತಹ ಘಟನೆ ನಡೆಯಲು ಅವಕಾಶ ನೀಡಿದ ಕರ್ನಾಟಕದ ಗೃಹ ಇಲಾಖೆ ಇದ್ದೂ ಸತ್ತಂತೆ ಎಂದು ಅವರು ಹೇಳಿದ್ದಾರೆ.
ಯಲ್ಲಾಪುರದ ಹಿಂದೂ ಮಹಿಳೆಯ ಹತ್ಯೆ, ಪ್ರವೀಣ್ ಮೇಸ್ತ್ರಿ ಹತ್ಯೆ ಮುಂತಾದ ಕೇಸುಗಳನ್ನು ಉದಾಹರಿಸಿದ ಅವರು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆದರೆ ಬಳ್ಳಾರಿಯಲ್ಲಿ ಕಲ್ಲು, ಬಾಟಲಿ ಎಸೆದ ಭರತ್ ರೆಡ್ಡಿ, ಮತ್ತು ಜೆಜೆನಗರದಲ್ಲಿ ಶಾಂತಿಯುತ ಮೆರವಣಿಗೆಗೆ ಕಲ್ಲೆಸೆದವರು ಹಾಗೂ ತಪ್ಪೆಸಗಿದ ತಮ್ಮದೇ ಪಕ್ಷದ ಕಾರ್ಯಕರ್ತ ರಕ್ಷಣೆಗೆ ಸರ್ಕಾರ ನಿಂತಿದೆ. ಹಿಂದೆ ಬಿಹಾರವಿದ್ದಂತೆ ಈಗ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಅವರು ಬೇಸರ ವ್ಯಕ್ತಪಡಿಸಿದರು.












Click it and Unblock the Notifications