ಹಲವಾರು ರಾಜ್ಯಗಳಲ್ಲಿ ಅಸ್ತಿತ್ವವೇ ಇಲ್ಲದ ಇನ್ನೊಂದು ಪಕ್ಷಕ್ಕೆ ಯಾರೂ ಹೋಗುವುದಿಲ್ಲ: ಶೋಭಾ ಕರಂದ್ಲಾಜೆ
ಬೆಂಗಳೂರು, ಮಾರ್ಚ್ 11: ದೇಶದಲ್ಲಿ ನಂಬಬಹುದಾದ ನೇತೃತ್ವ ನರೇಂದ್ರ ಮೋದಿಯವರಲ್ಲಿ ಇದೆ. ಯಾರೂ ಪಕ್ಷ ಬಿಡುವುದಿಲ್ಲ. ಕೇಂದ್ರದ ಹಲವಾರು ರಾಜ್ಯಗಳಲ್ಲಿ ಅಸ್ತಿತ್ವವೇ ಇಲ್ಲದ ಇನ್ನೊಂದು ಪಕ್ಷಕ್ಕೆ ಯಾರೂ ಹೋಗುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಈ ಕುರಿತು ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ದೇಶದಲ್ಲಿ ಒಂದಾದ ನಂತರ ಒಂದು ರಾಜ್ಯದಲ್ಲಿ ಗೆಲುವು ಸಾಧಿಸುತ್ತಿದೆ. ಒಂದು ಅಭೂತಪೂರ್ವ ವಿಜಯ ಕಳೆದ ವರ್ಷ ಇದೇವೇಳೆಗೆ ಸಿಕ್ಕಿತ್ತು. ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ 2ನೇ ಬಾರಿ ಸರಕಾರ ರಚನೆ ಅವಕಾಶ ಯೋಗಿಯವರಿಗೆ ಸಿಕ್ಕಿತ್ತು. ಮೊನ್ನೆ ಗುಜರಾತ್ ನಲ್ಲಿ ನಡೆದ ಚುನಾವಣೆಯಲ್ಲಿ ಹಿಂದೆ ಮೋದಿಯವರೇ ಸಿಎಂ ಆಗಿದ್ದಾಗ ಸಿಗದ ದೊಡ್ಡ ಯಶಸ್ಸು ಅವರು ಪ್ರಧಾನಿ ಆದಾಗ ಗುಜರಾತಿನ ಜನರು ಮೊನ್ನೆ ಕೊಟ್ಟರು ಎಂದರು.

ಪುಟ್ಟಣ್ಣ ಪಕ್ಷ ತೊರೆಯುತ್ತಿರುವ ಕುರಿತು ಮಾತನಾಡಿ ಅವರು, ಕೈಗೆಟುಕದ ದ್ರಾಕ್ಷಿ ಹುಳಿ ಎಂಬ ಮಾತನ್ನು ನೆನಪಿಸಿದರು. ಅವರೇನೋ ನಿರೀಕ್ಷೆ ಇಟ್ಟು ಬಂದಿರುತ್ತಾರೆ. ಬಿಜೆಪಿಯಲ್ಲಿ ಅವರು ಎಂಎಲ್ಸಿಯೂ ಆಗಿದ್ದಾರೆ. ಅದನ್ನು ಅವರು ಮರೆಯಬಾರದು. ಅವರು ಇನ್ಯಾವುದೋ ಲಾಭಕ್ಕಾಗಿ ಪಕ್ಷ ಬಿಟ್ಟಿರಬಹುದು ಎಂದರು.
ನಮ್ಮ ಕರ್ನಾಟಕದಲ್ಲಿ ಬಿಜೆಪಿ ಪರ ಅಲೆ ಇದೆ. ಈ ಬಾರಿ ನಾವು ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ. ನಿರೀಕ್ಷೆಗೂ ಮೀರಿದ ಬೆಂಬಲ ರಥಯಾತ್ರೆಗೆ ಸಿಗುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ನವರು ಯಾತ್ರೆ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯು ನಡ್ಡಾ, ರಾಜನಾಥ ಸಿಂಗ್, ಅಮಿತ್ ಶಾ ಅವರು ಉದ್ಘಾಟಿಸಿದ ರಥಯಾತ್ರೆಗೆ ಅದ್ಭುತ ಜನಬೆಂಬಲ ಸಿಗುತ್ತಿದೆ ಎಂದು ಹೇಳಿದರು.

ಭಾನುವಾರ ನರೇಂದ್ರ ಮೋದಿಯವರು ಆರ್ಥಿಕ ರಾಜಧಾನಿ ಬೆಂಗಳೂರು- ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಅಭಿವೃದ್ಧಿಯ ಕನಸು ನನಸಿಗೆ 10 ಪಥಗಳ ಹೈವೇ ಉದ್ಘಾಟಿಸಲಿದ್ದಾರೆ. 9,500 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದರು. ಪೂರಕವಾದ ಟ್ರಾಫಿಕ್ ಸಮಸ್ಯೆ ಅಲ್ಲಿತ್ತು. ಅದನ್ನು ನಿವಾರಿಸಲು ಹೈಸ್ಪೀಡ್ ರೈಲು ಸಂಚಾರ ಆರಂಭ, ರೈಲ್ವೆ ಲೈನ್, ಸ್ಟೇಷನ್ಗಳ ಅಭಿವೃದ್ಧಿ ಮಾಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರು- ಮೈಸೂರು ಹೈವೇ ದಶಕಗಳ ಕನಸು. ಹಿಂದೆ ಪ್ರಧಾನಿಯಾಗಿದ್ದ ದೇವೇಗೌಡರು ಇಂಥ ಕನಸು ಕಂಡಿದ್ದರು. ಆದರೆ, ನೈಸ್ ರಸ್ತೆಯು ಯಶವಂತಪುರ, ಬಿಡದಿಯಿಂದ ಮುಂದೆ ಹೋಗಲೇ ಇಲ್ಲ. ಆಗಲೇ ರಸ್ತೆ ನಿರ್ಮಾಣ ಆಗಿದ್ದರೆ ಮೈಸೂರು ಮತ್ತು ರಸ್ತೆ ಹಾದುಹೋಗುವ ಪ್ರದೇಶಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತಿದ್ದವು. ಪ್ರಧಾನಿಯವರು 2018ರಲ್ಲಿ ಮೈಸೂರಿಗೆ ಬಂದಾಗ ದಶಪಥ ರಸ್ತೆ ಘೋಷಿಸಿದ್ದರು. ಮರುದಿನವೇ ಕ್ಯಾಬಿನೆಟ್ ಸಬ್ ಕಮಿಟಿಯೂ ಇದಕ್ಕೆ ಅನುಮೋದನೆ ಕೊಟ್ಟಿತು ಎಂದು ತಿಳಿಸಿದರು.
4,428 ಕೋಟಿ ಮೊತ್ತದಲ್ಲಿ ಮೊದಲ ಹಂತ ನಿರ್ಮಾಣವಾಗಿದೆ. 4,500 ಕೋಟಿಯಲ್ಲಿ ಎರಡನೇ ಹಂತ ನಿರ್ಮಾಣಗೊಂಡಿದೆ. ಮೊದಲಿಗೆ ದ್ವಿಪಥ ರಸ್ತೆ ಇತ್ತು. ಸಂಚಾರದ ಸಮಸ್ಯೆ ತೀವ್ರವಿತ್ತು. ಈಗ ಒಂದೂವರೆ ಗಂಟೆಯಲ್ಲಿ ಶ್ರೀರಂಗಪಟ್ಟಣ, ಮೈಸೂರಿಗೆ ತಲುಪಲು ಸಾಧ್ಯವಿದೆ.
ನರೇಂದ್ರ ಮೋದಿಯವರು ಜನಪ್ರತಿನಿಧಿಯನ್ನು ಗಮನಿಸಿ ಯೋಜನೆ ನೀಡಿಲ್ಲ. ಬೆಂಗಳೂರು- ಮೈಸೂರು ನಡುವೆ ನಮ್ಮ ಶಾಸಕರು ಇಲ್ಲದೇ ಇರಬಹುದು. ಆದರೆ, ಮೋದಿಯವರು ಒಂದೇ ಒಂದು ನಮ್ಮ ಸಂಸದರಿಲ್ಲದ ಕೇರಳಕ್ಕೆ ಯೋಜನೆ ಕೊಟ್ಟ ಮಾದರಿಯಲ್ಲೇ ಅದೇ ಮಾದರಿಯ ಯೋಜನೆಯನ್ನು ಕರ್ನಾಟಕ, ಉತ್ತರ ಪ್ರದೇಶಕ್ಕೆ ಕೊಟ್ಟಿದ್ದಾರೆ. ಸುಮಾರು 6,500 ಜನರಿಗೆ ಈ ರಸ್ತೆ ಉದ್ಯೋಗ ಕೊಟ್ಟಿದೆ. ಈ ಹೈವೇಯ ಎರಡೂ ಬದಿಗಳಲ್ಲಿ ಕೈಗಾರಿಕಾ ಕಾರಿಡಾರ್ ಅಥವಾ ಮಳಿಗೆಗಳು, ಹೋಟೆಲ್ಗಳ ಮೂಲಕ ಉದ್ಯೋಗ ಲಭಿಸುತ್ತವೆ ಎಂದು ಹೇಳಿದರು.












Click it and Unblock the Notifications