ಸಿದ್ದರಾಮಯ್ಯ ಸಂಪುಟದ ಗೂಂಡಾಗಿರಿ ಸಚಿವರ ಪಟ್ಟಿ!
ಬೆಂಗಳೂರು, ಸೆಪ್ಟೆಂಬರ್ 13; ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ. ಸುಧಾಕರ್ ಮೇಲೆ ಹಲ್ಲೆ, ದೌರ್ಜನ್ಯ ಮತ್ತು ಜಾತಿ ನಿಂದನೆ ಆರೋಪದ ಮೇಲೆ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ವಿಚಾರ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರತಿಪಕ್ಷಗಳು ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿವೆ.
ಕರ್ನಾಟಕ ಬಿಜೆಪಿ ಬುಧವಾರ ಇದೇ ವಿಚಾರ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದೆ. 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತುಘಲಕ್ ದರ್ಬಾರಿನ ಸಚಿವ ಸಂಪುಟದಲ್ಲಿ ಗೂಂಡಾಗಿರಿ ಸಚಿವರ ಪಟ್ಟಿ' ಎಂದು ಪಟ್ಟಿಯೊಂದನ್ನು ಟ್ವೀಟ್ ಮಾಡಿದೆ.

ಬಿಜೆಪಿ ನೀಡಿರುವ ಪಟ್ಟಿಯಲ್ಲಿ ಸಚಿವರಾದ ಡಿ. ಕೆ. ಶಿವಕುಮಾರ್, ಡಿ. ಸುಧಾಕರ್, ಪ್ರಿಯಾಂಕ್ ಖರ್ಗೆ, ಶಿವಾನಂದ ಪಾಟೀಲ್, ಚಲುವರಾಯಸ್ವಾಮಿ ಮುಂತಾವರ ಹೆಸರು ಇದೆ. ಅವರು ಮಾಡಿರುವುದು ಏನು? ಎಂದು ಬಿಜೆಪಿ ಟ್ವೀಟ್ನಲ್ಲಿ ವಿವರಿಸಿದೆ.
ಬಿಜೆಪಿ ಟ್ವೀಟ್
* ಪ್ರತಿಭಟನೆ ಮಾಡುವ ಸಂಘಟನೆಗಳನ್ನು ಬೆದರಿಸುವ ಮೂಲಕ ಧಮ್ಕಿ ಹಾಕುವ ಡಿಸಿಎಂ ಡಿ. ಕೆ. ಶಿವಕುಮಾರ್..!
* ಜಾತಿ ನಿಂದನೆ ಮಾಡಿ ಮಹಿಳೆ ಮೇಲೆ ಹಲ್ಲೆ ಮಾಡುವ ಪುಡಿರೌಡಿ ವರ್ತನೆಯ ಸಚಿವ ಡಿ. ಸುಧಾಕರ್..!
* ವರ್ಗಾವಣೆ ದಂಧೆ, ಅಧಿಕಾರಿಗಳಿಗೆ ಕಲೆಕ್ಷನ್ ಟಾರ್ಗೆಟ್, ಕೆಎಸ್ಆರ್ಟಿಸಿ ಸಿಬ್ಬಂದಿ ಆತ್ಮಹತ್ಯೆ ಯತ್ನ, ರೈತರಿಗೆ ಬೆದರಿಕೆ ಹಾಕುವ ಕೃಷಿ ಸಚಿವ ಚೆಲುವರಾಯಸ್ವಾಮಿ..!
* ಕ್ಷೇತ್ರದಲ್ಲಿ ಗೂಂಡಾ ಪಡೆಯನ್ನು ಬಿಟ್ಟು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿಸುವ ಸಚಿವ ಪ್ರಿಯಾಂಕ್ ಖರ್ಗೆ..!
* ತನ್ನ ಸಹೋದರಿ ಮಿನಿಸ್ಟರ್ ಎನ್ನುವ ಕಾರಣಕ್ಕೆ ಮಾಧ್ಯಮದವರಿಗೆ ಅವಾಜ್ ಹಾಕಿ ಧಮ್ಕಿ ಹಾಕುವ ಸಚಿವೆ ಲಕ್ಣ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಹಟ್ಟಿಹೊಳಿ..!
* ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತ ಉಡಾಫೆ ಮಾತನಾಡುವ ಸಚಿವ ಶಿವಾನಂದ ಪಾಟೀಲ್..!
ಪ್ರಶ್ನಿಸುವವರನ್ನು, ಪ್ರತಿಭಟಿಸುವವರನ್ನು ಗೂಂಡಾ ವರ್ತನೆ ತೋರಿ ಬಾಯಿ ಮುಚ್ಚಿಸುವ ಘನಂದಾರಿ ಕೆಲಸವನ್ನು ಸಿದ್ದರಾಮಯ್ಯ ಅವರ ಸಂಪುಟ ಮಾಡುತ್ತಿದೆ ಎಂದು ಬಿಜೆಪಿ ಟ್ವೀಟ್ನಲ್ಲಿ ಆರೋಪಿಸಿದೆ.
ಮಂಗಳವಾರ ಟ್ವೀಟ್ ಮಾಡಿದ್ದ ಬಿಜೆಪಿ, 'ಯಾವ ಪುಡಿ ರೌಡಿಗಿಂತಲೂ ಕಡಿಮೆ ಇಲ್ಲ ಸಚಿವ ಡಿ. ಸುಧಾಕರ್ ಅವರ ಗೂಂಡಾವರ್ತನೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಜಾತಿ ನಿಂದಕರು, ಗೂಂಡಾಗಳೇ ತುಂಬಿ ತುಳುಕುತ್ತಿದ್ದಾರೆ' ಎಂದು ದೂರಿತ್ತು.
'ಸಿದ್ದರಾಮಯ್ಯ ಅವರಿಗೆ ದಲಿತರನ್ನು ಮೂಲೆಗುಂಪು ಮಾಡುವುದು ಕರಗತವಾದರೆ, ಸಚಿವ ಡಿ. ಸುಧಾಕರ್ ಅವರಿಗೆ ದಲಿತರನ್ನು ಅವಮಾನಿಸಿ ಗೂಂಡಾಗಿರಿ ಮಾಡುವ ಅಹಂ ಸಿದ್ಧಿಸಿದೆ. ಕಾಂಗ್ರೆಸ್ ಸರ್ಕಾರ ಈ ಕೂಡಲೇ ದಲಿತ ವಿರೋಧಿ ಗೂಂಡಾ ಸಚಿವರನ್ನು ಬಂಧಿಸಿ ರಾಜೀನಾಮೆ ಪಡೆಯಬೇಕು' ಎಂದು ಆಗ್ರಹಿಸಿತ್ತು.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, 'ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ. ಸುಧಾಕರ್ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಹಾಗೂ ಅವರನ್ನು ಬಂಧಿಸಬೇಕು. ದಲಿತರ ರಕ್ಷಣೆ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರದಲ್ಲಿ ಏನಾಗುತ್ತಿದೆ?. ಸಚಿವರೇ ದಲಿತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇಂಥ ವ್ಯಕ್ತಿಯನ್ನು ಸಂಪುಟದಲ್ಲಿ ಇರಿಸಿಕೊಳ್ಳಬಾರದು" ಎಂದು ಒತ್ತಾಯಿಸಿದ್ದರು.
ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ, "ಸಚಿವ ಡಿ. ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿರುವ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿ ನಾನು ವರದಿ ಪಡೆದುಕೊಂಡಿದ್ದೇನೆ. ಇದು ಒಂದು ಸುಳ್ಳು ಪ್ರಕರಣ" ಎಂದು ಹೇಳಿದ್ದರು.
"ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಸುಧಾಕರ್ ಅವರು ಜಮೀನು ಖರೀದಿ ಮಾಡಿದ್ದಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಯಾರೋ ಆ ಜಮೀನಿಗೆ ಬೇಲಿ ಹಾಕಿದ್ದಾರೆ. ಇದನ್ನು ಪ್ರಶ್ನೆ ಮಾಡಿದಾಗ ದಲಿತ ದೌರ್ಜನ್ಯದಡಿಯಲ್ಲಿ ಪ್ರಕರಣ ದಾಖಲಾಗಿದೆ" ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದರು.












Click it and Unblock the Notifications