ಹನೂರು ಕ್ಷೇತ್ರದ ಬಿಜೆಪಿಯಲ್ಲಿ ಟಿಕೆಟ್ಗೆ ಆಕಾಂಕ್ಷಿಗಳ ಪೈಪೋಟಿ!
ಚಾಮರಾಜನಗರ, ನವೆಂಬರ್ 18; ಕಾಂಗ್ರೆಸ್ನ ಪ್ರಾಬಲ್ಯ ಹೊಂದಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ಚೇತರಿಕೆ ಕಾಣುತ್ತಿದೆ. ಈಗಾಗಲೇ ಒಬ್ಬರು ಸಂಸದರು ಮತ್ತು ಒಬ್ಬರು ಶಾಸಕರನ್ನು ಹೊಂದಿದ್ದ ಬಿಜೆಪಿಗೆ ಬಿಎಸ್ಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಇತ್ತೀಚೆಗೆ ಬಿಜೆಪಿಯನ್ನು ಸೇರಿರುವ ಶಾಸಕ ಎನ್. ಮಹೇಶ್ರಿಂದ ಮತ್ತಷ್ಟು ಬಲ ಬಂದಿದೆ. ಈ ಹಿಂದೆ ಅಭ್ಯರ್ಥಿಯಾಗಲು ಹಿಂದೇಟು ಹಾಕುತ್ತಿದ್ದ ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಆಕಾಂಕ್ಷಿಗಳಾಗಿರುವುದು ಕಂಡು ಬರುತ್ತಿದೆ.
ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಕಳೆದ ಕೆಲ ವರ್ಷಗಳಿಂದ ಕ್ಷೇತ್ರಗಳಲ್ಲಿ ನಾಯಕರು ಕಾಣಿಸಿಕೊಂಡು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನರ ಗಮನಸೆಳೆಯುವುದರೊಂದಿಗೆ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಕೆಲವರು ಪಕ್ಷ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಇತರೆ ಪಕ್ಷಗಳಿಂದ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಿಜೆಪಿಗೆ ಎಳೆದು ತರುವ ಪ್ರಯತ್ನದಲ್ಲಿದ್ದಾರೆ.
ಕಾಂಗ್ರೆಸ್ಗೆ ಸ್ಪರ್ಧೆ ನೀಡಲು ಮುಂದಾಗಿರುವ ಬಿಜೆಪಿ ಜಿಲ್ಲೆಯಲ್ಲಿ ಹಲವು ರೀತಿಯ ರಣತಂತ್ರಕ್ಕೆ ಮುಂದಾಗಿರುವುದಂತು ನಿಜ. ಚುನಾವಣೆಗೆ ಕೇವಲ ಐದಾರು ತಿಂಗಳು ಬಾಕಿಯಿದ್ದು, ಈಗಾಗಲೇ ರಾಜ್ಯದಾದ್ಯಂತ ದಂಡಯಾತ್ರೆ ಶುರು ಮಾಡಿರುವ ಬಿಜೆಪಿ ನಾಯಕರು ಚಾಮರಾಜನಗರದಲ್ಲಿ ಯಾವ ತಂತ್ರ ಬಳಸಲಿದ್ದಾರೆ? ಎಂಬುದು ಕುತೂಹಲಕಾರಿಯಾಗಿದೆ. ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ವಿ. ಸೋಮಣ್ಣ ಅವರು ಜಿಲ್ಲೆಯತ್ತ ಹೆಚ್ಚಿನ ಗಮನಹರಿಸಿದ್ದಾರೆ.

ಜಿಲ್ಲೆಯಲ್ಲಿ ಯಾರ ಪ್ರಾಬಲ್ಯ?
ಜಿಲ್ಲೆಯಲ್ಲಿ ಕಾಂಗ್ರೆಸ್ ಹೊರತುಪಡಿಸಿದರೆ ಜೆಡಿಎಸ್ ಪ್ರಾಬಲ್ಯ ಸಾಧಿಸಿಲ್ಲ. ಹೀಗಾಗಿ ನೇರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಣಾಹಣಿ ನಡೆಯುವುದಂತು ಖಚಿತ. ಸದ್ಯ ದಲಿತ ಮತ್ತು ಹಿಂದುಳಿದ ವರ್ಗಗಳ ಒಲವು ಗಳಿಸಿರುವ ಎನ್. ಮಹೇಶ್ ಬಿಜೆಪಿಗೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಬಲ ತಂದಿದೆ. ಇನ್ನು ಶಾಸಕ ನಿರಂಜನ್ ಕುಮಾರ್ ಗುಂಡ್ಲುಪೇಟೆಯಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾರುಪತ್ಯ ಸಾಧಿಸಿದ್ದು, ಆ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು ಸಾಧಿಸುವುದು ಅಷ್ಟು ಸುಲಭವಾಗಿ ಉಳಿದಿಲ್ಲ.

ಹನೂರು ಕ್ಷೇತ್ರದಲ್ಲಿ ಹಣಾಹಣಿ
ಈ ನಡುವೆ ಜಿಲ್ಲೆಯಲ್ಲಿರುವ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಲು ಆಕಾಂಕ್ಷಿಗಳ ನಡುವೆ ಪೈಪೋಟಿ ಏರ್ಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದು, ಶಾಸಕ ನರೇಂದ್ರ ಅವರು ಗೆಲುವು ಸಾಧಿಸಿಕೊಂಡು ಬಂದಿದ್ದಾರೆ. ಹೀಗಾಗಿ ಕಾಂಗ್ರೆಸ್ನಿಂದ ಮುಂದಿನ ವಿಧಾನಸಭಾ ಚುನಾವಣೆಗೆ ಅವರಿಗೆ ಟಿಕೆಟ್ ಖಚಿತವಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಲು ಎಂ. ಆರ್. ಮಂಜುನಾಥ್ ಮುಂದಾಗಿದ್ದು ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ.

ಬಿಜೆಪಿಯಲ್ಲಿ ಹೆಚ್ಚಿದ ಆಕಾಂಕ್ಷಿಗಳು
ಆದರೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಿದೆ. ಕಳೆದ ಬಾರಿ ಹನೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನರೇಂದ್ರ ಅವರ ವಿರುದ್ಧ ಸ್ಪರ್ಧಿಸಿದ್ದ ಪ್ರೀತಂ ನಾಗಪ್ಪ ಅಲ್ಪಮತದಿಂದ ಸೋಲು ಕಂಡಿದ್ದರು. ಅದಾದ ನಂತರ ಕ್ಷೇತ್ರದಲ್ಲಿ ಬಿಜೆಪಿಯ ಪರವಾಗಿ ಸಾಮಾಜಿಕ ಕಾರ್ಯ ನಡೆಸುವವರು ಮತ್ತು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು ಎಲ್ಲರ ಪ್ರಮುಖ ಉದ್ದೇಶ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿದೆ.

ಎರಡು ಬಣಗಳ ನಡುವೆ ಕಿತ್ತಾಟ
ಸದ್ಯ ಬಿಜೆಪಿಯಲ್ಲಿ ಆಕಾಂಕ್ಷಿಗಳು ಮಾತ್ರವಲ್ಲದೇ ಜನ ಧ್ವನಿ ಬಿ. ವೆಂಕಟೇಶ್ ಮತ್ತು ನಿಶಾಂತ್ ಎಂಬ ಎರಡು ಬಣಗಳಿದ್ದು ಇದನ್ನು ರಾಜ್ಯ ನಾಯಕರು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಜನ ಧ್ವನಿ ಬಿ.ವೆಂಕಟೇಶ್ ಅವರು ಕಳೆದ ಐದು ವರ್ಷಗಳಿಂದ ಜನಾಶ್ರಯ ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಬಿಜೆಪಿಗೆ ಸೇರ್ಪಡೆಗೊಂಡು ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಸಂಯೋಜಕರಾಗಿ, ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರಿಗೆ ಪ್ರತಿಸ್ಪರ್ಧಿಯಾಗಿ ಕಳೆದ ಐದುತಿಂಗಳಿನಿಂದ ಸಮಾಜ ಸೇವೆಯ ಮೂಲಕ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ನಿಶಾಂತ್ ಕ್ಷೇತ್ರಾದ್ಯಂತ ಸಂಘಟನೆಯಲ್ಲಿ ತೊಡಗಿಸಿಕೊಂಡು ನಾನು ಬಿಜೆಪಿ ಆಕಾಂಕ್ಷಿ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹನೂರು ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ತನ್ನ ಪ್ರಾಬಲ್ಯವನ್ನು ರಾಜ್ಯ ನಾಯಕರ ಮುಂದೆ ಪ್ರದರ್ಶಿಸುವ ಸಲುವಾಗಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಎಳೆದು ತರುವ ಪ್ರಯತ್ನ ಮಾಡಿದ್ದಾರೆ.

ಹೆಚ್ಚಾಗುತ್ತಿದೆ ನಾಯಕರ ಪೈಪೋಟಿ
ಈ ನಡುವೆ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಗೇರಿ ಮದುವನಹಳ್ಳಿ ಒಡೆಯರಪಾಳ್ಯ, ವಿ ಎಸ್ ದೊಡ್ಡಿ, ದನಗೆರೆ ಗ್ರಾಮದ ಯುವಕರನ್ನು ಸಾಮೂಹಿಕವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿದ್ದಾರೆ. ಆದರೆ ಹೀಗೆ ಸೇರ್ಪಡೆಯಾದವರಲ್ಲಿ ಬಹುತೇಕರು ಬಿ. ವೆಂಕಟೇಶ್ ಬಣದಿಂದ ಬಂದವರು ಎಂದು ಹೇಳಲಾಗುತ್ತಿದ್ದು, ಇಬ್ಬರ ನಡುವೆ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇದೆಲ್ಲದರ ನಡುವೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ. ದತ್ತೇಶ್ ಕುಮಾರ್ ಅವರು ಕೂಡ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಒಟ್ಟಾರೆ ಹನೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಬಿಜೆಪಿಯ ಒಳ ರಾಜಕೀಯ ಅಚ್ಚರಿ ಮೂಡಿಸಿದೆ. ಜತೆಗೆ ಟಿಕೆಟ್ ಪಡೆಯುವ ಸಲುವಾಗಿ ನಾಯಕರು ನಡೆಸುತ್ತಿರುವ ಒಳತಂತ್ರಗಳು ಎಲ್ಲಿಗೆ ಹೋಗಿ ತಲುಪುತ್ತದೆಯೋ ಗೊತ್ತಿಲ್ಲ. ಸದ್ಯ ನಾಲ್ಕು ಮಂದಿ ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದು ಯಾರಿಗೆ ಟಿಕೆಟ್ ಸಿಗುತ್ತದೆಯೋ? ಕಾದುನೋಡಬೇಕು.












Click it and Unblock the Notifications