ಸೋನಿಯಾ ಗಾಂಧಿ ಮನೆ ಮುಂದೆ ಇದ್ದ 'ಕತ್ತೆ'ಯನ್ನು ಸಿದ್ದರಾಮಯ್ಯ ಓಡಿಸಿದ ಕಥೆ
ಹಾವೇರಿ, ಅ 20: ಉಪ ಚುನಾವಣೆಯ ಪ್ರಚಾರದ ಕಾವು ವೈಯಕ್ತಿಕ ಮಟ್ಟಕ್ಕೆ ಹೋಗುತ್ತಿದೆ. ಕೆಪಿಸಿಸಿಯ ಐಟಿ ಘಟಕ, ಪ್ರಧಾನಿ ಮೋದಿ ಬಗ್ಗೆ ಮಾಡಿದ್ದ ಅವಹೇಳನಕಾರಿ ಟ್ವೀಟಿಗೆ ಡಿ.ಕೆ.ಶಿವಕುಮಾರ್ ಕ್ಷಮೆಯಾಚಿಸಿ, ಟ್ವೀಟ್ ಅನ್ನು ಡಿಲಿಟ್ ಮಾಡಿಸಿದ್ದಾರೆ. ಆದರೆ, ಬಿಜೆಪಿಯವರ ಟೀಕಾ ಪ್ರಹಾರ ಮುಂದುವರಿಯುತ್ತಲೇ ಇದೆ.
ಸಂಸದ ರಾಹುಲ್ ಗಾಂಧಿಯವರನ್ನು ಡ್ರಗ್ ಪೆಡ್ಲರ್ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕತ್ತೆ ಓಡಿಸಿದ ಕಥೆಯನ್ನು ರಸವತ್ತಾಗಿ ಹೇಳಿದ್ದಾರೆ. ಆ ವೇಳೆ, ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಉಪಸ್ಥಿತರಿದ್ದರು.
ಎರಡು ದಿನದ ಹಿಂದೆ, ಉಪ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಕಟೀಲ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮನೆಯ ಮುಂದೆ ಮಲಗಿಕೊಂಡಿದ್ದ ಕತ್ತೆಯನ್ನು ಓಡಿಸಲು (ಕಟ್ಟುಕಥೆ) ಸಿದ್ದರಾಮಯ್ಯವರೇ ಬರಬೇಕಾಯಿತು ಎಂದು ವ್ಯಂಗ್ಯವಾಡಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಸಿರುವ ಸಿದ್ದರಾಮಯ್ಯನವರು ಕಟೀಲ್ ಅವರದ್ದು ಅಸ್ವಸ್ಥ ಮನಸ್ಸು. ಚುನಾವಣೆಯಲ್ಲಿ ಮತದಾರ ಯಾರಿಗೆ ಒಲಿಯಲಿದ್ದಾನೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ ಎಂದು ತಿರುಗೇಟು ನೀಡಿದ್ದಾರೆ. ಸೋನಿಯಾ ಗಾಂಧಿ ಮನೆ ಮುಂದೆ ಇದ್ದ ಕತ್ತೆಯನ್ನು ಸಿದ್ದರಾಮಯ್ಯ ಓಡಿಸಿದ ಕಥೆ ಏನದು?

ದೆಹಲಿಯ ಸೋನಿಯಾ ಗಾಂಧಿಯವರ ನಿವಾಸದಲ್ಲಿ ಕತ್ತೆಯೊಂದು ಮಲಗಿಕೊಂಡು ಇರುತ್ತದೆ
ಸಿಎಂ ಬೊಮ್ಮಾಯಿಯವರ ಸಮ್ಮುಖದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಏರು ಧ್ವನಿಯಲ್ಲಿ ಮಾತನಾಡುತ್ತಾ ಕಟೀಲ್, "ದೆಹಲಿಯ ಸೋನಿಯಾ ಗಾಂಧಿಯವರ ನಿವಾಸದಲ್ಲಿ ಕತ್ತೆಯೊಂದು ಮಲಗಿಕೊಂಡು ಇರುತ್ತದೆ. ಭದ್ರತಾ ಸಿಬ್ಬಂದಿಗಳು ಎಷ್ಟೇ ಪ್ರಯತ್ನ ಪಟ್ಟರೂ, ಕತ್ತೆ ನಿದ್ದೆಯಿಂದ ಎದ್ದೇಳುವುದಿಲ್ಲ. ಸೋನಿಯಾ ಗಾಂಧಿಯವರು ಎದ್ದೇಳುವ ಸಮಯವಾಗುತ್ತದೆ. ಸಿಬ್ಬಂದಿಗಳಿಗೆ ಏನು ಮಾಡಬೇಕೆಂದು ತೋಚುವುದಿಲ್ಲ, ಕಾಂಗ್ರೆಸ್ಸಿನ ಪ್ರಮುಖರನ್ನು ಸೋನಿಯಾಜಿ ನಿವಾಸಕ್ಕೆ ಕರೆಸುತ್ತಾರೆ" - ನಳಿನ್ ಕುಮಾರ್ ಕಟೀಲ್.

ಕರ್ನಾಟಕದಿಂದ ಮಲ್ಲಿಕಾರ್ಜುನ ಖರ್ಗೆಯವರೂ ದೌಡಾಯಿಸುತ್ತಾರೆ
"ಅಹ್ಮದ್ ಪಟೇಲ್, ಗುಲಾಂ ನಬಿ ಆಜಾದ್ ಮುಂತಾದವರು ಸೋನಿಯಾಜಿ ನಿವಾಸಕ್ಕೆ ಬರುತ್ತಾರೆ. ಕರ್ನಾಟಕದಿಂದ ಮಲ್ಲಿಕಾರ್ಜುನ ಖರ್ಗೆಯವರೂ ದೌಡಾಯಿಸುತ್ತಾರೆ. ಆದರೆ, ಅವರೆಲ್ಲಾ ಎಷ್ಟೇ ಪ್ರಯತ್ನ ಪಟ್ಟರೂ, ಕತ್ತೆಯನ್ನು ಎಬ್ಬಿಸಲು ಸಾಧ್ಯವಾಗುವುದಿಲ್ಲ. ಕೊನೆಗೆ, ಅಲ್ಲಿಗೆ ನಮ್ಮ ಸಿದ್ರಾಮಣ್ಣ ಬರುತ್ತಾರೆ, ಕತ್ತೆಯನ್ನು ಎಬ್ಬಿಸಿ, ಇಲ್ಲಿಂದ ಓಡಿಸುತ್ತೇನೆ ಎಂದು ಹೇಳುತ್ತಾರೆ. ಅದಕ್ಕೆ ಅಹ್ಮದ್ ಪಟೇಲ್ ಆಯಿತು ಎನ್ನುತ್ತಾರೆ. ಆದರೆ, ಈ ಕೆಲಸ ಮಾಡಬೇಕಾದರೆ ಒಂದು ಕೆಲಸ ಆಗಬೇಕೆಂದು ಸಿದ್ರಾಮಣ್ಣ ಷರತ್ತು ವಿಧಿಸುತ್ತಾರೆ" - ನಳಿನ್ ಕುಮಾರ್ ಕಟೀಲ್.

ಮೊದಲ ಬಾರಿಗೆ ಸಿದ್ರಾಮಣ್ಣ ಕತ್ತೆಯ ಕಿವಿಯಲ್ಲಿ ಏನೋ ಹೇಳುತ್ತಾರೆ
"ಆ ಷರತ್ತು ಏನೆಂದರೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಬರೆದುಕೊಡಬೇಕು. ಅದಕ್ಕೆ ಅಹ್ಮದ್ ಪಟೇಲ್ ಒಪ್ಪಿಗೆ ಸೂಚಿಸುತ್ತಾರೆ. ಮೊದಲ ಬಾರಿಗೆ ಸಿದ್ರಾಮಣ್ಣ ಕತ್ತೆಯ ಕಿವಿಯಲ್ಲಿ ಏನೋ ಹೇಳುತ್ತಾರೆ. ಕತ್ತೆ ಎದ್ದೇಳುವುದಿಲ್ಲ, ಮತ್ತೆ ಇನ್ನೊಮ್ಮೆ ಏನೋ ಹೇಳುತ್ತಾರೆ. ಆಗ ಕತ್ತೆ ಎದ್ದು ಹೋಗುತ್ತದೆ. ಅಹ್ಮದ್ ಪಟೇಲ್ ಬಂದು ಸಿದ್ರಾಮಣ್ಣನವರ ಬಳಿ ಕೇಳುತ್ತಾರೆ. ಕತ್ತೆಗೆ ಏನು ಹೇಳಿದೆ ಎಂದು. ಮೊದಲ ಬಾರಿಗೆ ಕಾಂಗ್ರೆಸ್ ಎಂದೆ, ಎರಡನೇ ಬಾರಿಗೆ ಸರ್ವಶಕ್ತಿ ಅಭಿಯಾನ ಎಂದೆ ಆಗ ಕತ್ತೆ ಎದ್ದು ಹೋಯಿತು ಎಂದು ಸಿದ್ರಾಮಣ್ಣ ಹೇಳುತ್ತಾರೆ. ಕತ್ತೆಗೂ ಕಾಂಗ್ರೆಸ್ ಬೇಕಾಗಿಲ್ಲ" ಎಂದು ನಳಿನ್ ಕುಮಾರ್ ಕಟೀಲ್, ಕಟ್ಟುಕಥೆಯೊಂದನ್ನು ರಸವತ್ತಾಗಿ ಮತದಾರನ ಮುಂದಿಟ್ಟಿದ್ದರು.

ಯಕ್ಷಗಾನದ ಶೈಲಿಯಲ್ಲಿ ಮಾತನಾಡುವ ಅವರೊಬ್ಬರು (ನಳಿನ್ ಕಟೀಲ್) ವಿದೂಷಕ
ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, " ಬಿಜೆಪಿಯಲ್ಲೇ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಯಕ್ಷಗಾನದ ಶೈಲಿಯಲ್ಲಿ ಮಾತನಾಡುವ ಅವರೊಬ್ಬರು ವಿದೂಷಕ, ಅವರ ಮಾತಿಗೆ ಹೆಚ್ಚಿನ ಬೆಲೆ ಕೊಡಬೇಕಾಗಿಲ್ಲ. ಅವರು ಆಡಿದ ಮಾತು, ಅವರ ಮಾನಸಿಕ ಅಸ್ವಸ್ಥೆಯನ್ನು ತೋರಿಸುತ್ತದೆ. ಅವರ ಈ ಮಾತಿನ ಹುಚ್ಚು ಊರೆಲ್ಲಾ ಹಬ್ಬುವ ಮೊದಲು ಅವರನ್ನು ಶೀಘ್ರವಾಗಿ ಮಾನಸಿಕ ಆಸತ್ರೆಗೆ ದಾಖಲಿಸುವುದು ಸೂಕ್ತ"ಎಂದು ಕಿಡಿಕಾರಿದ್ದಾರೆ.












Click it and Unblock the Notifications