ತಾಕತ್ತಿದ್ದರೆ ಮೇ 23ರ ಒಳಗೆ ಕೇಸ್ ಓಪನ್ ಮಾಡಲಿ: ಎಚ್ಡಿಕೆಗೆ ಯಡಿಯೂರಪ್ಪ ಸವಾಲು
Recommended Video

ಬೆಂಗಳೂರು, ಏಪ್ರಿಲ್ 8: 'ತಾಕತ್ತು ಇದ್ದರೆ ನನ್ನ ಮೇಲಿನ ಪ್ರಕರಣಗಳನ್ನು ಓಪನ್ ಮಾಡಿಸಿ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ತಾಕತ್ತಿದ್ದರೆ ಮೇ 23ರ ಒಳಗೆ ಕೇಸು ಓಪನ್ ಮಾಡಿಸಿ. ಏಕೆಂದರೆ ಮೇ 23ರ ಬಳಿಕ ನೀವು ಮನೆಗೆ ಹೋಗುತ್ತೀರಿ. ಅದಾದ ಬಳಿಕ ಕೇಸುಗಳನ್ನು ನಾವೇ ಓಪನ್ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಕುಂದಾಪುರದ ನೆಂಪುವಿನಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣ ಪ್ರತ್ಯುತ್ತರ ನೀಡಿದರು.

'ಚುನಾವಣೆಯ ಬಳಿಕ ಯಡಿಯೂರಪ್ಪ ವಿರುದ್ಧದ ಕೇಸನ್ನು ಮತ್ತೆ ಓಪನ್ ಮಾಡಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆ ಮತ್ತು ತಾಕತ್ತು ಮುಖ್ಯಮಂತ್ರಿಗೆ ಇಲ್ಲ. ಈ ರೀತಿಯ ಸನ್ನಿವೇಶಗಳನ್ನು ಹಿಂದೆಯೂ ಎದುರಿಸಿದ್ದೇನೆ, ಮುಂದೆಯೂ ಎದುರಿಸುತ್ತೇನೆ' ಎಂದರು.
'ದೇಶದಲ್ಲಿ ಮೋದಿ ಅಲೆ ಇಲ್ಲ ಎನ್ನುವ ಬಗ್ಗೆ ಮುಖ್ಯಮಂತ್ರಿಗೆ ಚಿಂತೆ ಏಕೆ? ರಾಜ್ಯದಲ್ಲಿ ಅಪ್ಪ-ಮಕ್ಕಳ ಅಲೆ ಎಲ್ಲಿ ಇದೆ? ಮಾದೇಗೌಡರ ಬಗ್ಗೆ ನನಗೆ ಗೌರವವಿದೆ. ಆದರೆ ಮಂಡ್ಯದಲ್ಲಿ ಹಣದ ಹೊಳೆ ಹರಿಸಲಾಗುತ್ತಿದೆ. ಸಚಿವ ಪುಟ್ಟರಾಜು ಬಳಿ ಹಣದ ಬೇಡಿಕೆ ಇಟ್ಟ ಪ್ರಕರಣ ಒಂದು ಸಣ್ಣ ಸ್ಯಾಂಪಲ್ ಅಷ್ಟೇ. ರಾಜ್ಯ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದು, ಅಜ್ಜ-ಮೊಮ್ಮಕ್ಕಳು ಸೋಲುವುದು ಕಷ್ಟ' ಎಂದು ಹೇಳಿದರು.
ಎಚ್ಡಿಕೆ ಹೇಳಿದ್ದೇನು?
ಉಡುಪಿಯಲ್ಲಿ ಪ್ರಚಾರ ನಡೆಸಿದ್ದ ಎಚ್ ಡಿ ಕುಮಾರಸ್ವಾಮಿ, ಆಪರೇಷನ್ ಕಮಲ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಆಡಿಯೋದ ತನಿಖೆ ನಡೆಸುವುದಕ್ಕೆ ಆತುರವಿಲ್ಲ ಎಂದಿದ್ದರು.
ಆಡಿಯೋ ಎಲ್ಲಿಗೂ ಹೋಗುವುದಿಲ್ಲ. ಸದ್ಯಕ್ಕೆ ದಾಖಲೆಗಳು ನನ್ನ ಬಳಿ ಇವೆ. ಈಗ ತನಿಖೆಗೆ ನೀಡಿದರೆ ಚುನಾವಣೆ ಸಂದರ್ಭದಲ್ಲಿ ತನಿಖೆಗೆ ನೀಡಲಾಗಿದೆ, ಅಧಿಕಾರ ದುರುಪಯೋಗಪಡಿಸಿಕೊಂಡು ಯಡಿಯೂರಪ್ಪ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಅಪಪ್ರಚಾರ ನಡೆಸುತ್ತಾರೆ. ಚುನಾವಣೆ ಮುಗಿದ ಬಳಿಕ ತನಿಖೆ ಮಾಡಿಸುತ್ತೇನೆ ಎಂದು ಹೇಳಿದ್ದರು.












Click it and Unblock the Notifications