ನಿದ್ದೆಯೆಂದ ಎದ್ದು ಬನ್ನಿ ಎಂದ ಬಿಜೆಪಿ: ನಿದ್ದೆಗೆಟ್ಟು ನಿಮ್ಮ ನಾಯಕರು ಮಾಡಿದ್ದೇನು ಎಂದ ಕಾಂಗ್ರೆಸ್
ಬೆಂಗಳೂರು, ಮಾರ್ಚ್ 19: ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಟ್ವೀಟ್ ಸಮರ ದಿನದಿಂದ ದಿನಕ್ಕೆ ಹೊಸಹೊಸ ವಿಷಯದತ್ತ ಹೊರಳುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
"ಕೊರೊನಾ ವೈರಸ್ಗೆ ಲಸಿಕೆ ಬಂದಿದೆ, ನಿಮ್ಮ ಸರ್ಕಾರಕ್ಕೆ ತಗಲಿರುವ ಭ್ರಷ್ಟಾಚಾರದ ವೈರಸ್ಗೆ ಎಲ್ಲಿಂದ ಲಸಿಕೆ ತರುವುದು? ಕೊರೊನಾ ಮೊದಲ ಅಲೆಯ ನಿಯಂತ್ರಣದಲ್ಲಿನ ಲೋಪ-ದೋಷವನ್ನು ಎರಡನೇ ಅಲೆಯಲ್ಲಿಯಾದರೂ ತಿದ್ದಿಕೊಂಡು, ಕೊರೊನಾವನ್ನು ಭ್ರಷ್ಟಾಚಾರಕ್ಕೆ ದುರ್ಬಳಕೆ ಮಾಡಿಕೊಳ್ಳದೆ ಕೆಲಸ ಮಾಡಿ ಜನರನ್ನು ಉಳಿಸಿ"ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಇದಕ್ಕೆ ಬಿಜೆಪಿ ನೀಡಿದ ತಿರುಗೇಟು ಹೀಗಿತ್ತು, "ಮಾನ್ಯ @siddaramaiah ಅವರೇ ಇಂದು #WorldSleepDay. ಇಂದಾದರೂ ಗಾಢ ನಿದ್ದೆಯಿಂದ ಹೊರಬನ್ನಿ. ಕೋವಿಡ್ ನಿರ್ವಹಣೆ ಯಾವ ರೀತಿ ನಡೆಯುತ್ತಿದೆ ಎಂಬುದನ್ನು ಈ ಕೆಳಗಿನ ಅಂಕಿ ಅಂಶಗಳಿಂದ ತಿಳಿದುಕೊಳ್ಳಿ"ಎಂದು ಬಿಜೆಪಿ ಲೆಕ್ಕವನ್ನು ನೀಡಿತ್ತು.

ಇದಕ್ಕೆ ಕೆಪಿಸಿಸಿ ನೀಡಿದ ಪ್ರತಿಕ್ರಿಯೆ ಏನಂದರೆ, "@narendramodi ಅವರು #Pmcares ಲೆಕ್ಕ ಕೊಡಲು ಸಿದ್ಧರಿಲ್ಲ. @BSYBJP ಕರೋನಾ ಖರ್ಚಿನ ಲೆಕ್ಕ ಕೊಡಲು ಸಿದ್ಧರಿಲ್ಲ. @BJP4Karnataka ಬಜೆಟ್ನಲ್ಲಿ ಉಲ್ಲೇಖಿಸಿದ 5,372 ಖರ್ಚಿನ ಲೆಕ್ಕ ಕೊಡಿ ಎಂದರೆ ವ್ಯಾಕ್ಸಿನ್ ಕಾರ್ಯಕ್ರಮದ ಪಟ್ಟಿ ಹಾಕಿರುವಿರಿ! ದಿಕ್ಕು ತಪ್ಪಿಸುವ ನಿಮ್ಮ ಈ ಚಾತುರ್ಯಗಳೇ ನಿಮ್ಮ ಭ್ರಷ್ಟಾಚಾರಕ್ಕೆ ಪುರಾವೆಯಾಗುತ್ತವೆ"ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ತಿರುಗೇಟು ನೀಡಿದೆ.
ಮುಂದುವರಿಯುತ್ತಾ, '@BJP4Karnataka ನಿಮ್ಮ ನಾಯಕರು ನಿದ್ದೆಗೆಟ್ಟು ರಾತ್ರಿಗಳಲ್ಲಿ ಏನು ಮಾಡುತ್ತಿದ್ದರು ಎಂದು ರಾಜ್ಯದ ಜನತೆ ಟಿವಿಗಳಲ್ಲಿ ನೋಡುತ್ತಾ ಇದ್ದಾರೆ".
"ಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದಿದ್ದಾರಲ್ಲಾ, ಅದನ್ನು ಸ್ವಲ್ಪ ವಾಪಸು ಪಡೆಯಲು ಹೇಳಿ. ನಿಮ್ಮ ಸಚಿವರು ರಾತ್ರಿ ಮಲಗದೆ ಟಾರ್ಚ್ ಹಾಕಿಕೊಂಡು ಏನೇನು ಮಾಡುತ್ತಿದ್ದರು ಎನ್ನುವುದನ್ನು ಜನ ನೋಡಲಿ !!" ಎನ್ನುವ ತಿರುಗೇಟನ್ನು ಕಾಂಗ್ರೆಸ್ ನೀಡಿದೆ.












Click it and Unblock the Notifications