'ಫ್ರೀ ಸಾಕಪ್ಪ-ಅಭಿವೃದ್ಧಿ ಮಾಡಪ್ಪ': ಸರ್ಕಾರದ ವಿರುದ್ಧ ಬಿಜೆಪಿ ಅಭಿಯಾನ, ಆರ್.ಅಶೋಕ್ ಗರಂ
ಬೆಂಗಳೂರು, ಜನವರಿ 08: ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದ ರಾಜ್ಯದ ಪರಿಸ್ಥಿತಿ ಹಾಳಾಗಿದ್ದು, ಸಾಲ ಮಾಡಬೇಕಾದ ಸ್ಥಿತಿ ಇದೆ. ಕಾಂಗ್ರೆಸ್ ಸರ್ಕಾರದ ಧೋರಣೆ ವಿರುದ್ಧ ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ 'ಫ್ರೀ ಸಾಕಪ್ಪ-ಅಭಿವೃದ್ಧಿ ಮಾಡಪ್ಪ' ಅಭಿಯಾನ ಆರಂಭವಾಗಲಿದೆ. ಇದಕ್ಕೂ ಮೊದಲೇ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿದ ಆರ್. ಅಶೋಕ್ ಸರಣಿ ಟ್ವೀಟ್ ಗಳ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋಮವಾರ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿರುವ ಆರ್. ಅಶೋಕ್ ಅವರು, ಕಳೆದ ಏಳು ತಿಂಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳೇ ಆಗಿಲ್ಲ. ಗ್ಯಾರೆಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಸಂಪೂರ್ಣ ದಿವಾಳಿಯಾಗಿದೆ. ಇದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರರೇ ಒಪ್ಪಿಕೊಂಡಿದ್ದಾರೆ ಎಂದು ದೂರಿದರು.

ಸ್ವಾಮಿ ಸಿದ್ದರಾಮಯ್ಯನವರೇ, ಕಳೆದ 7 ತಿಂಗಳಿನಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯತೆ ಆವರಿಸಿದೆ. ಗ್ಯಾರೆಂಟಿಗಳು ಯಶಸ್ವಿವಾಗಿದೆ ಎಂಬ ಭ್ರಮೆಯಿಂದ ಇನ್ನಾದರೂ ಸ್ವಲ್ಪ ಹೊರಬಂದು ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ಎಚ್ಚರಿಸಿದ್ದಾರೆ. ತಮ್ಮ ಪೋಸ್ಟ್ ನಲ್ಲಿ #ಫ್ರೀ ಸಾಕಪ್ಪ-ಅಭಿವೃದ್ಧಿ ಮಾಡಪ್ಪ ಎಂದು ಹ್ಯಾಶ್ ಟ್ಯಾಗ್ ಹಾಕಿ ಆಗ್ರಹಿಸಿದ್ದಾರೆ.
ಅನ್ನಭಾಗ್ಯದಲ್ಲಿ ಶ್ರೀರಾಮನ ಮಂತ್ರಕ್ಷತೆ?
ಅನ್ನಭಾಗ್ಯದ ಅಕ್ಕಿಯಲ್ಲಿ ಶ್ರೀರಾಮನ ಮಂತ್ರಾಕ್ಷತೆ ನೀಡಲಾಗುತ್ತಿದೆ ಎಂದು ಸುಳ್ಳು ಹೇಳುತ್ತೀದ್ದೀರಲ್ಲಾ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಆ ಶ್ರೀರಾಮ ಮೆಚ್ಚುವನೇ?. ಪಡಿತರ ರಸೀತಿಯಲ್ಲಿ ರಾಜ್ಯ ಸರ್ಕಾರದ ಕೊಡುಗೆ ಶೂನ್ಯ ಎಂದು ಸ್ಪಷ್ಟವಾಗಿ ನಮೂದಿಸಿದೆ. ತಮ್ಮ ಗ್ಯಾರೆಂಟಿಗಳ ಬಂಡವಾಳ ಬಯಲಾಗಿದೆ. ಇನ್ನೆಷ್ಟು ದಿನ ಹೀಗೆ ಜನರನ್ನು ಯಾಮರಿಸುವ ಪ್ರಯತ್ನ ಮಾಡುತ್ತೀರಿ? ಎಂದು ಟೀಕಿಸಿದರು.

ಯುವಕರ ಪಾಡು 'ಆಟಕ್ಕುಂಟು ಲೆಕ್ಕಕ್ಕಿಲ್ಲ'
ಯುವನಿಧಿ ಗ್ಯಾರೆಂಟಿಯನ್ನ ನಂಬಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ ಯುವಕರ ಪಾಡು "ಆಟಕ್ಕುಂಟು ಲೆಕ್ಕಕ್ಕಿಲ್ಲ" ಎಂಬಂತಾಗಿದೆ. ಚುನಾವಣಾ ಪ್ರಚಾರದಲ್ಲಿ ಮಾತ್ರ ಎಲ್ಲ ನಿರುದ್ಯೋಗಿ ಯುವಕರಿಗೂ ಹಣ ಗ್ಯಾರೆಂಟಿ ಎಂದಿದ್ದ ಕಾಂಗ್ರೆಸ್ ನಾಯಕರು, ಈಗ ನೂರೆಂಟು ಕಂಡೀಷನ್ ಹಾಕಿ, ಕುಂಟು ನೆಪ ಕೊಡುತ್ತಾ ಯುವಕರಿಗೆ ಮೋಸ ಮಾಡುತ್ತಿದೆ ಎಂದು ಅವರು ಅರೋಪಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಯುವಕರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆರ್.ಅಶೋಕ್ ಭವಿಷ್ಯ ನುಡಿದರು.
ಕರ್ನಾಟಕ ನಿರ್ಲಕ್ಷ್ಯ, ಹಣ ನೆರೆ ರಾಜ್ಯದ ಪಾಲು
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5,000 ಕೋಟಿ ರೂಪಾಯಿ ನೀಡವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕಲ್ಯಾಣ ಕರ್ನಾಟಕವನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮೀಸಲಿಟ್ಟ ಹಣ ಹಾಗೇ ಉಳಿದಿದೆಯೇ ಅಥವಾ ತೆಲಂಗಾಣ ಚುನಾವಣಾ ಪ್ರಚಾರಕ್ಕೆ "ಗುಳೇ" ಹೋಯಿತೋ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರೇ ಹೇಳಬೇಕು ಎಂದು ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡರು.












Click it and Unblock the Notifications